ಚಿಕ್ಕಮಗಳೂರು: ಬೈಕ್ಗೆ ನಾಯಿ ಅಡ್ಡ ಬಂದ ಪರಿಣಾಮ ಚಾಲಕ ಏಕಾಏಕಿ ಬ್ರೇಕ್ ಹಾಕಿದಾಗ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ತಿರುಗುಣ ಗ್ರಾಮದ ಶಾರದಾ ಮೃತಪಟ್ಟವರು. ಅವರ ಸಂಬಂಧಿ ರಘು ಟಿ.ಡಿ. ಅವರು ಚಲಾಯಿಸುತ್ತಿದ್ದ ಕೆಎ-09-ಎಚ್ಎಂ-8473 ನೋಂದಣಿಯ ಬೈಕ್ನಲ್ಲಿ ಶಾರದಾ ಅವರು ಆ.20ರಂದು ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ದಿನಸಿ ಸಾಮಗ್ರಿ ಖರೀದಿಸಲು ಚಿಕ್ಕಮಗಳೂರಿಗೆ ಬಂದಿದ್ದರು.
ದಿನಸಿ ಖರೀದಿಸಿ ಸಂಜೆ ಸುಮಾರು 4.20ಕ್ಕೆ ತಿರುಗುಣಕ್ಕೆ ವಾಪಸ್ ತೆರಳುತ್ತಿದ್ದ ವೇಳೆ ಚಿಕ್ಕಮಗಳೂರು ನಗರದ ಕೆಎಂ ರಸ್ತೆಯ ಗಂದರ್ವ ನರ್ಸರಿ ಮುಂಭಾಗ ಬೈಕ್ಗೆ ಏಕಾಏಕಿ ನಾಯಿ ಅಡ್ಡ ಬಂದಿದೆ. ಈ ವೇಳೆ ರಘು ಅವರು ಬೈಕ್ ನಿಯಂತ್ರಿಸಲಾಗದೆ ತಕ್ಷಣ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿದ್ದ ಶಾರದಾ ರಸ್ತೆಗೆ ಬಿದ್ದಿದ್ದಾರೆ ಎನ್ನಲಾಗಿದೆ.
ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಶಾರದಾ ಅವರ ತಲೆ, ಕಿವಿ ಹಾಗೂ ಬಾಯಿಯಿಂದ ರಕ್ತಸ್ರಾವವಾಗಿತ್ತು. ಸ್ಥಳೀಯರ ಸಹಾಯದಿಂದ ಅವರನ್ನು ಆಟೋದಲ್ಲಿ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಹಾಸನದ ಜನಪ್ರಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅಲ್ಲಿಯೂ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ ಹಿನ್ನೆಲೆಯಲ್ಲಿ ಶಾರದಾ ಅವರನ್ನು ಆಂಬುಲೆನ್ಸ್ನಲ್ಲಿ ಬೆಂಗಳೂರಿಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಆ.21ರಂದು ಬೆಳಗಿನ ಜಾವ 2.25ರ ಸುಮಾರಿಗೆ ಬೆಂಗಳೂರಿನ ಎಂಟನೇ ಮೈಲಿ ಸಮೀಪ ತಲುಪುವಷ್ಟರಲ್ಲಿ ಶಾರದಾ ಮೃತಪಟ್ಟಿದ್ದಾರೆ.
ಬಳಿಕ ಮೃತದೇಹವನ್ನು ಚಿಕ್ಕಮಗಳೂರಿಗೆ ತಂದು ವೈದ್ಯರ ಸಲಹೆಯಂತೆ ಶವಾಗಾರದಲ್ಲಿ ಇರಿಸಲಾಗಿದೆ. ಈ ಸಂಬಂಧ ಶಾರದಾ ಅವರ ಸಂಬಂಧಿ ಸಾಗರ್ ಟಿ.ಎಲ್. ಅವರು ನೀಡಿದ ದೂರಿನ ಮೇರೆಗೆ ಸಂಚಾರ ಪೊಲೀಸ್ ಠಾಣೆಯಲ್ಲಿ ಮೊ.ನಂ.88/2026, ಬಿಎನ್ಎಸ್ ಕಲಂ 281 ಹಾಗೂ 106(1)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
Woman dies after falling off bike
Leave a comment