ಚಿಕ್ಕಮಗಳೂರು: ಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು ₹80 ಸಾವಿರ ಮೌಲ್ಯದ ಚಿನ್ನಾಭರಣ, ₹20 ಸಾವಿರ ಮೌಲ್ಯದ ಬೆಳ್ಳಿ ವಸ್ತುಗಳು ಹಾಗೂ ₹16 ಸಾವಿರ ನಗದು ಸೇರಿದಂತೆ ಒಟ್ಟು ಅಂದಾಜು ₹1.16 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಳಸಾಪುರ ಗ್ರಾಮದಲ್ಲಿ ನಡೆದಿದೆ.
ಕಳಸಾಪುರ ಗ್ರಾಮದ 65 ವರ್ಷದ ಸೋಮಶೇಖರ್ ಅವರು ನೀಡಿದ ದೂರಿನ ಆಧಾರದ ಮೇಲೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ದೂರಿನ ಪ್ರಕಾರ, ಸೋಮಶೇಖರ್ ಹಾಗೂ ಅವರ ಪತ್ನಿ ತುಂಗಮ್ಮ ಅವರು ಆ.12ರಂದು ಬೆಂಗಳೂರಿನಲ್ಲಿರುವ ಹಿರಿಯ ಪುತ್ರ ಕಿರಣ್ ಅವರ ಮನೆಗೆ ತೆರಳಿದ್ದರು. ಮನೆಯಲ್ಲಿ ಕಿರಿಯ ಪುತ್ರ ಅರುಣ್ ಹಾಗೂ ಸೊಸೆ ಇದ್ದರು. ಅವರು ಆ.18ರಂದು ಬೆಳಗ್ಗೆ ಶೃಂಗೇರಿಗೆ ತೆರಳಿದ್ದರು. ಸೋಮಶೇಖರ್ ದಂಪತಿ ಅದೇ ದಿನ ಸಂಜೆ ಚಿಕ್ಕಮಗಳೂರಿಗೆ ಬಂದು ಮಗಳ ಮನೆಯಲ್ಲಿ ಉಳಿದುಕೊಂಡಿದ್ದರು.
ಆ.19ರಂದು ಮಧ್ಯಾಹ್ನ ಸುಮಾರು 4.30ಕ್ಕೆ ಮನೆಗೆ ಹಿಂದಿರುಗಿದಾಗ ಮನೆಯ ಬಾಗಿಲು ತೆರೆದ ಸ್ಥಿತಿಯಲ್ಲಿದ್ದು, ಬೀಗವನ್ನು ಯಾವುದೋ ಆಯುಧದಿಂದ ಮೀಟಿ ಮುರಿದಿರುವುದು ಕಂಡುಬಂದಿದೆ. ಒಳಗೆ ಪರಿಶೀಲಿಸಿದಾಗ ಕಬೋರ್ಡ್ಗಳನ್ನು ತೆರೆದು ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿತ್ತು. ಹಾಲ್ನಲ್ಲಿದ್ದ ಕಬ್ಬಿಣದ ಬೀರುವಿನ ಬೀಗವನ್ನೂ ಮುರಿದು ಅದರಲ್ಲಿದ್ದ ವಸ್ತುಗಳನ್ನು ಎಳೆದಾಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬೀರುವಿನಲ್ಲಿದ್ದ 6 ಗ್ರಾಂ ತೂಕದ ಒಂದು ಜೊತೆ ಚಿನ್ನದ ಓಲೆ, 4 ಗ್ರಾಂ ಚಿನ್ನದ ಉಂಗುರ ಹಾಗೂ 4 ಗ್ರಾಂ ಚಿನ್ನದ ಮಾಟಿ ಸೇರಿದಂತೆ ಒಟ್ಟು 14 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಇದರ ಅಂದಾಜು ಮೌಲ್ಯ ₹80 ಸಾವಿರ ಎನ್ನಲಾಗಿದೆ.
ಇದಲ್ಲದೆ ಸುಮಾರು 200 ಗ್ರಾಂ ತೂಕದ ಬೆಳ್ಳಿ ವಸ್ತುಗಳಾದ ಕುಂಕುಮದ ಬಟ್ಟಲುಗಳು, ಬೆಳ್ಳಿ ಗಣಪತಿ ಹಾಗೂ ಕಾಲು ಚೈನು ಸೇರಿದಂತೆ ಅಂದಾಜು ₹20 ಸಾವಿರ ಮೌಲ್ಯದ ಬೆಳ್ಳಿ ವಸ್ತುಗಳು ಮತ್ತು ₹16 ಸಾವಿರ ನಗದು ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆ.18ರ ರಾತ್ರಿ ಮನೆಯೊಳಗೆ ನುಗ್ಗಿದ ಕಳ್ಳರು ಕಳವು ಮಾಡಿರುವ ಶಂಕೆ ವ್ಯಕ್ತಪಡಿಸಿರುವ ಸೋಮಶೇಖರ್, ಕಳ್ಳರನ್ನು ಪತ್ತೆಹಚ್ಚಿ ಕಳವಾದ ವಸ್ತುಗಳನ್ನು ವಾಪಸ್ ಕೊಡಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Gold silver and cash worth Rs 1.16 lakh stolen
Leave a comment