ಲಿಂಗದಹಳ್ಳಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಹೋದರನ ಮೇಲೆಯೇ ಕಬ್ಬಿಣದ ಪೈಪ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಂಡೆನಕೊಪ್ಪ ಗ್ರಾಮದ ಕೃಷ್ಣಾ ನಾಯ್ಕ @ ಸಂತೋಷ (40) ಮೃತಪಟ್ಟವರು ಎಂದು ತಿಳಿದುಬಂದಿದ್ದು, ಅವರ ಸಹೋದರ ಯುವರಾಜ ನಾಯ್ಕ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಮೃತ ಕೃಷ್ಣಾ ನಾಯ್ಕ, ಯುವರಾಜ ನಾಯ್ಕ ಹಾಗೂ ಮಮತ ಅವರು ಒಂದೇ ಕುಟುಂಬದವರು. ಮಮತ ಅವರ ಪತಿ ಬಿಟ್ಟು ಹೋಗಿದ್ದರಿಂದ, ಇಬ್ಬರು ಮಕ್ಕಳೊಂದಿಗೆ ತವರು ಮನೆಯಲ್ಲೇ ವಾಸವಾಗಿದ್ದರು. ಕುಟುಂಬದಲ್ಲಿ ಯುವರಾಜ ನಾಯ್ಕ ಆಗಾಗ್ಗೆ ತಾಯಿ ಹಾಗೂ ಸಹೋದರ ಕೃಷ್ಣಾ ನಾಯ್ಕ ಅವರೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.
ಆ.10ರಂದು ಯುವರಾಜ ನಾಯ್ಕ ತಾಯಿಯ ತಲೆಗೆ ಹೊಡೆದಿದ್ದರಿಂದ, ಮತ್ತೆ ಹಲ್ಲೆ ನಡೆಸಬಹುದೆಂಬ ಆತಂಕದಲ್ಲಿ ತಾಯಿಯನ್ನು ಲಕ್ಷ್ಮಿಬಾಯಿ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು. ಈ ಹಿನ್ನೆಲೆಯಲ್ಲಿ ಸುಮಾರು ಐದು ದಿನಗಳ ಹಿಂದೆ ಯುವರಾಜ ನಾಯ್ಕ ದೂರವಾಣಿ ಕರೆ ಮಾಡಿ, ತಾಯಿಯನ್ನು ಕಳುಹಿಸದಿದ್ದರೆ ಸಂತೋಷನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆ.16ರಂದು ರಾತ್ರಿ ಸುಮಾರು 10 ಗಂಟೆಗೆ ಯುವರಾಜ ನಾಯ್ಕ ಲಕ್ಷ್ಮಿಬಾಯಿಗೆ ಕರೆ ಮಾಡಿ, ಸಂತೋಷನಿಗೆ ಕಪಾಳ ಹಾಗೂ ಬೆನ್ನಿಗೆ ಕೈಯಿಂದ ಹೊಡೆದು, ಮುಖ ಮತ್ತು ತಲೆಗೆ ಕಬ್ಬಿಣದ ಪೈಪ್ನಿಂದ ಹಲ್ಲೆ ಮಾಡಿದ್ದಾಗಿ ಹಾಗೂ ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
ವಿಷಯ ತಿಳಿದ ಲಕ್ಷ್ಮಿಬಾಯಿ ಅವರು ನೆರೆಮನೆಯ ಜ್ಯೋತಿ ಹಾಗೂ ಚಿಕ್ಕಪ್ಪ ಸತೀಶ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ, ಮನೆಯ ಬಳಿ ತೆರಳಿ ಪರಿಶೀಲಿಸುವಂತೆ ತಿಳಿಸಿದ್ದಾರೆ. ಕೆಲವೇ ಹೊತ್ತಿನಲ್ಲಿ ಜ್ಯೋತಿ ಕರೆ ಮಾಡಿ, ಕೃಷ್ಣಾ ನಾಯ್ಕ ಮನೆಯ ಬಾಗಿಲಿನ ಹೊರಭಾಗದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಬಿದ್ದಿರುವುದಾಗಿ ತಿಳಿಸಿದ್ದಾಳೆ. ಬಳಿಕ ಲಕ್ಷ್ಮಿಬಾಯಿ ಅವರು ಕುಟುಂಬದವರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಕೃಷ್ಣಾ ನಾಯ್ಕ ಮೃತಪಟ್ಟಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಗೂ ಮುನ್ನ ಕೃಷ್ಣಾ ನಾಯ್ಕ ಹಾಗೂ ಯುವರಾಜ ನಾಯ್ಕ ಬುಲೆರೋ ವಾಹನದ ಬಳಿ ಜಗಳವಾಡುತ್ತಿದ್ದುದನ್ನು ಕಂಡು, ತಾನು ಹಾಗೂ ಪತ್ನಿ ಗೀತಾಬಾಯಿ ಇಬ್ಬರನ್ನೂ ಸಮಾಧಾನಪಡಿಸಿ ಮನೆಗೆ ಕಳುಹಿಸಿದ್ದಾಗಿ ನೆರೆಮನೆಯ ಸತೀಶ್ ತಿಳಿಸಿದ್ದಾರೆ ಎನ್ನಲಾಗಿದೆ.
ಮನೆಯಲ್ಲಿದ್ದ ಮಕ್ಕಳ ಹೇಳಿಕೆಯ ಪ್ರಕಾರ, ಸಂಜೆ ಇಬ್ಬರು ಮಾವಂದಿರು ಕೆಲಸದಿಂದ ಮನೆಗೆ ಬಂದಿದ್ದರು. ಕೃಷ್ಣಾ ನಾಯ್ಕ ಅವರು ಯಾಮಿನಿಗೆ ಊಟ ಮಾಡಿಸಲು ಮುಂದಾದಾಗ, ನಿದ್ದೆಗಣ್ಣಿನಲ್ಲಿದ್ದ ಯಾಮಿನಿ ಕೆಳಗೆ ಬಿದ್ದು ಮುಖದ ಎಡಭಾಗಕ್ಕೆ ಊತವಾಗಿತ್ತು. ಇದನ್ನು ಯುವರಾಜ ನಾಯ್ಕ ತಪ್ಪಾಗಿ ಅರ್ಥೈಸಿಕೊಂಡು, ಸಂತೋಷನೇ ಯಾಮಿನಿಗೆ ಹೊಡೆದಿದ್ದಾರೆಂದು ಭಾವಿಸಿ ಅವರೊಂದಿಗೆ ಜಗಳವಾಡಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ನಂತರ ಮಕ್ಕಳನ್ನು ಮನೆಯಿಂದ ಹೊರಗೆ ಕರೆತಂದಾಗ ಕೃಷ್ಣಾ ನಾಯ್ಕ ಮನೆಯ ಬಾಗಿಲಿನ ಬಳಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎಂದು ಮಕ್ಕಳ ಹೇಳಿಕೆಯನ್ನು ದೂರಿನಲ್ಲಿ ದಾಖಲಿಸಲಾಗಿದೆ. ಲಕ್ಷ್ಮಿಬಾಯಿ ನೀಡಿದ ದೂರಿನ ಆಧಾರದ ಮೇಲೆ ಲಿಂಗದಹಳ್ಳಿ ಪೊಲೀಸರು ಯುವರಾಜ ನಾಯ್ಕ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
Brother attacked and murdered with an iron pipe
Leave a comment