ಕಡೂರು: ಪಂಪ್ಸೆಟ್ ಮೋಟಾರ್ ಕೇಬಲ್ ಕಳ್ಳರೆಂದು ಅನುಮಾನಿಸಿ ಮೂವರು ಯುವಕರ ಮೇಲೆ ಗುಂಪೊಂದು ಗಂಭೀರವಾಗಿ ಹಲ್ಲೆ ನಡೆಸಿದ ಆರೋಪದಡಿ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಗಸ್ಟ್ 14ರಂದು ಸಂಜೆ ಕಡೂರು ಪಟ್ಟಣದಿಂದ ಮಹಮದ್ ಇರ್ಫಾನ್, 31 ಎಕರೆ ನಿವಾಸಿಗಳಾದ ಅಭಿಷೇಕ್ ಹಾಗೂ ಶೇಖ್ ಸಲ್ಮಾನ್ ಅವರು ಜೇನುಗೂಡು ತೆಗೆಯುವ ಉದ್ದೇಶದಿಂದ ಬೈಕ್ನಲ್ಲಿ ಮರಡಿಹಳ್ಳಿ ಗ್ರಾಮದತ್ತ ತೆರಳಿದ್ದರು. ಮರಡಿಹಳ್ಳಿ ಸಮೀಪದ ರೈಲ್ವೆ ಬ್ರಿಡ್ಜ್ ಬಳಿ ಬೈಕ್ ನಿಲ್ಲಿಸಿ ಜೇನುಗೂಡು ಹುಡುಕುತ್ತಾ ರೈಲ್ವೆ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದರು.
ಬಾಯಾರಿಕೆಯಾದ ಹಿನ್ನೆಲೆಯಲ್ಲಿ ಸಂಜೆ ಸುಮಾರು 7.30ಕ್ಕೆ ಸಮೀಪದ ಜಮೀನಿನ ಪಂಪ್ಸೆಟ್ ಬಳಿ ನೀರು ಕುಡಿಯಲು ತೆರಳಿದಾಗ, ಅಲ್ಲಿದ್ದ ಸುಮಾರು 7ರಿಂದ 10 ಮಂದಿ ಅವರನ್ನು ತಡೆದು ಜಮೀನಿನಲ್ಲಿ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ತಾವು ಜೇನುಗೂಡು ತೆಗೆಯಲು ಬಂದಿರುವುದಾಗಿ ತಿಳಿಸಿದರೂ, ಅವರು ಸುಳ್ಳು ಹೇಳುತ್ತಿದ್ದಾರೆ ಹಾಗೂ ಜಮೀನಿನಲ್ಲಿ ಪಂಪ್ಸೆಟ್ ಕೇಬಲ್ ಕಳ್ಳತನವಾಗುತ್ತಿರುವ ಹಿನ್ನೆಲೆಯಲ್ಲಿ ಕೇಬಲ್ ಕದಿಯಲು ಬಂದಿದ್ದೀರಿ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಲ್ಲೇ ಕಟ್ ಆಗಿ ಬಿದ್ದಿದ್ದ ಕೇಬಲ್ ಬಳಸಿ ಮಹಮದ್ ಇರ್ಫಾನ್ ಅವರ ಬೆನ್ನು, ಕೈ ಹಾಗೂ ಕಾಲುಗಳಿಗೆ ಹಲ್ಲೆ ನಡೆಸಲಾಗಿದೆ. ಅವರೊಂದಿಗೆ ಇದ್ದ ಅಭಿಷೇಕ್ ಹಾಗೂ ಶೇಖ್ ಸಲ್ಮಾನ್ ಅವರ ಮೇಲೂ ಕೇಬಲ್ನಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಜೀಪಿನಲ್ಲಿ ಸ್ಥಳಕ್ಕೆ ಬರುತ್ತಿರುವುದನ್ನು ಕಂಡು ಹಲ್ಲೆ ನಡೆಸಿದವರು ಪರಾರಿಯಾಗಿದ್ದಾರೆ. ಹಲ್ಲೆ ನಡೆಸಿದವರ ಹೆಸರು ಹಾಗೂ ವಿಳಾಸ ತಿಳಿದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರು ಗಾಯಾಳುಗಳನ್ನು ಕಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದ ಮಹಮದ್ ಇರ್ಫಾನ್ ಅವರ ಹೇಳಿಕೆಯನ್ನು ಆಗಸ್ಟ್ 15ರಂದು ಸಂಜೆ 5.30ರಿಂದ 6 ಗಂಟೆಯವರೆಗೆ ದಾಖಲಿಸಿಕೊಳ್ಳಲಾಗಿದ್ದು, ಬಳಿಕ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಲ್ಲೆ ನಡೆಸಿದವರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ
Three people attacked on suspicion of being cable thieves
Leave a comment