ತರೀಕೆರೆ :ರಸ್ತೆ ಗುಂಡಿ ತಪ್ಪಿಸಲು ಹೋಗಿ ಬೈಕ್ ಸ್ಕಿಡ್ ಆದ ಪರಿಣಾಮ ಖಾಸಗಿ ಕಂಪನಿ ಉದ್ಯೋಗಿ ತೀವ್ರವಾಗಿ ಗಾಯಗೊಂಡು, ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಅಜ್ಜಂಪುರ-ತರೀಕೆರೆ ರಸ್ತೆಯ ಬೆಟ್ಟತಾವರೆಕೆರೆ ಸೇತುವೆ ಬಳಿ ಸಂಭವಿಸಿದೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದಯಾನಂದ್ ಮೃತಪಟ್ಟ ದುರ್ದೈವಿ. ಬೆಂಗಳೂರಿನಿಂದ ಸ್ವಗ್ರಾಮಕ್ಕೆ ತಮ್ಮ ಬಜಾಜ್ ಮೋಟಾರ್ ಸೈಕಲ್ನಲ್ಲಿ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಬೆಟ್ಟತಾವರೆಕೆರೆ ಗ್ರಾಮದ ಬ್ರಿಡ್ಜ್ ಸಮೀಪ ಬರುತ್ತಿದ್ದಾಗ ರಸ್ತೆಯಲ್ಲಿದ್ದ ಗುಂಡಿಗಳು ಹಾಗೂ ಅದೇ ಸಮಯದಲ್ಲಿ ಹಠಾತ್ತನೆ ನಾಯಿಯೊಂದು ಅಡ್ಡ ಬಂದಿದೆ. ನಾಯಿಯನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿದ ಬೈಕ್ ರಸ್ತೆಯಲ್ಲೇ ಸ್ಕಿಡ್ ಆಗಿ ಬಿದ್ದಿದೆ. ಪರಿಣಾಮ ದಯಾನಂದ್ ಅವರ ಕೈಕಾಲುಗಳಿಗೆ ತೀವ್ರ ಪೆಟ್ಟಾಗಿತ್ತು.
ತಕ್ಷಣ ಸ್ಥಳೀಯರು ಅಂಬುಲೆನ್ಸ್ ತರಿಸಿ ಅವರನ್ನು ತರೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಶಿವಮೊಗ್ಗ ಟೌನ್ ಬಳಿ ದಯಾನಂದ್ ಕೊನೆಯುಸಿರೆಳೆದಿದ್ದಾರೆ.
ಮೃತರ ತಂದೆ ಕೇಶವಮೂರ್ತಿ ನೀಡಿದ ದೂರಿನ ಮೇರೆಗೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Private company employee dies in bike accident
Leave a comment