ಚಿಕ್ಕಮಗಳೂರು: ಮುಂದಿನ ಒಂದು ವಾರದೊಳಗೆ ಉದ್ಯಮದ ಎಲ್ಲಾ ನಾಮಫಲಕಗಳಲ್ಲಿ ಸರ್ಕಾರದ ನಿಯಮಗಳ ಅನ್ವಯ ಶೇ. ೬೦ರಷ್ಟು ಕನ್ನಡ ನಾಮಫಲಕ ಇರುವಂತೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ನಗರಸಭೆಯಿಂದ ನಾಮಫಲಕಗಳನ್ನು ತೆರವುಗೊಳಿಸಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಪೌರಾಯುಕ್ತ ಬಿ.ಸಿ.ಬಸವರಾಜು ಎಚ್ಚರಿಕೆ ನೀಡಿದ್ದಾರೆ.
ನಗರಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿ, ಮುಗಟ್ಟು, ವಾಣಿಜ್ಯ ಮಳಿಗೆಗಳು ಮತ್ತು ಎಲ್ಲಾ ರೀತಿಯ ಜಾಹೀರಾತು ಫಲಕಗಳಲ್ಲಿ ಸರ್ಕಾರದ ನಿಯಮಾವಳಿಗಳ ಅನ್ವಯ ನಾಮಫಲಕದ ಮೇಲ್ಬಾಗದಲ್ಲಿ ಶೇ. ೬೦ ರಷ್ಟು ಕನ್ನಡ ಮತ್ತು ಇದರ ಕೆಳಭಾಗದಲ್ಲಿ ಶೇ.೪೦ ರಷ್ಟು ಆಂಗ್ಲಭಾಷೆಯ ನಾಮಫಲಕ ಇರುವುದು ಕಡ್ಡಾಯವಾಗಿದೆ. ಹೀಗಿದ್ದರೂ ಇನ್ನು ಹಲವಾರು ವಾಣಿಜ್ಯ ಮಳಿಗೆಗಳಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ ಸರ್ಕಾರದಿಂದ ನಿಗದಿಪಡಿಸಿರುವ ನಿಯಮಗಳನ್ನು ಪಾಲಿಸದೇ ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದಿದೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಹಲವಾರು ವರ್ಷಗಳಿಂದ ಸರ್ಕಾರದ ನಿಯಮಗಳನ್ನು ಪಾಲನೆ ಮಾಡಲು ನೋಟೀಸ್ಗಳ ಮುಖಾಂತರ, ಮಾಧ್ಯಮಗಳ ಮುಖಾಂತರ ಮತ್ತು ಕನ್ನಡ ಸೇನೆಯಿಂದ ಪ್ರತಿಭಟನೆಗಳ ಮುಖಾಂತರ ಎಚ್ಚರಿಕೆ ನೀಡಲಾಗಿದ್ದರೂ ಸಹ ನಿಯಮಗಳನ್ನು ಪಾಲನೆ ಮಾಡದೇ ಈ ಉದ್ದಿಮೆಗಳು ನಿರ್ಲಕ್ಷ್ಯ ವಹಿಸಿರುವುದು ಸ್ಪಷ್ಟವಾಗಿದೆ.
ಈ ಬಗ್ಗೆ ಜುಲೈ ೨೫ ರಂದು ಕನ್ನಡಸೇನೆ ಮತ್ತು ನಗರಸಭಾ ವತಿಯಿಂದ ಜಾಥಾ ಕಾರ್ಯಕ್ರಮ ಮಾಡುವುದರ ಮುಖಾಂತರ ಅರಿವು ಕಾರ್ಯಕ್ರಮವನ್ನು ಸಹಾ ನಡೆಸಲಾಗಿದೆ. ಇನ್ನು ಮುಂದೆ ನಿಯಮ ಪಾಲನೆ ಮಾಡದೇ ಇರುವವರ ವಿರುದ್ಧ ಕನ್ನಡ ಸೇನೆಯಿಂದ ಮಸಿ ಬಳಿಯುವ ಮೂಲಕ ಉಗ್ರ ಪ್ರತಿಭಟನೆ ಮಾಡುವುದಾಗಿ ಇದೀಗ ನಗರಸಭಾ ಕಚೆರಿಗೆ ಪತ್ರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ಎಲ್ಲ ಅಂಗಡಿ, ಮುಗ್ಗಟ್ಟು, ವಾಣಿಜ್ಯ ಮಳಿಗೆಗಳ ಮತ್ತು ಜಾಹೀರಾತು ಫಲಕಗಳ ಮಾಲೀಕರಿಗೆ ಮುನ್ಸೂಚನೆ ನೀಡಲಾಗಿದ್ದು, ನಾಮಫಲಕದಲ್ಲಿ ಶೇ.೬೦ ರಷ್ಟು ಕನ್ನಡವನ್ನು ಕಡ್ಡಾಯಗೊಳಿಸುವಂತೆ ಅವರು ಸೂಚಿಸಿದ್ದಾರೆ.
ಮಾರ್ಕೇಟ್ ರಸ್ತೆ ಇನ್ನು ಮುಂದೆ ಅಂಬೇಡ್ಕರ್ ರಸ್ತೆ
ನಗರಸಭಾ ವ್ಯಾಪ್ತಿಯ ಮಾರ್ಕೆಟ್ ರಸ್ತೆಗೆ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಎಂದು ನಾಮಕರಣ ಮಾಡಲಾಗಿದ್ದು ಈ ರಸ್ತೆಯಲ್ಲಿ ಇರುವ ಎಲ್ಲಾ ಅಂಗಡಿ ಮುಂಗಟ್ಟುಗಳು ತಮ್ಮ ಉದ್ಯಮದ ನಾಮಫಲಕಗಳಲ್ಲಿ ಇರುವ ಮಾರ್ಕೆಟ್ ರಸ್ತೆ ಎಂಬುದನ್ನು ‘ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ’ ಎಂದು ಕೂಡಲೇ ಬದಲಾವಣೆ ಮಾಡಿಕೊಳ್ಳಲು ಸೂಚಿಸಲಾಗಿದೆ. ನಿರ್ಲಕ್ಷಿಸಿದಲ್ಲಿ ಅಂತಹ ನಾಮಫಲಕಗಳನ್ನು ನಗರಸಭೆ ವತಿಯಿಂದ ತೆರವುಗೊಳಿಸಲು ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
Indication of 60% preference for Kannada on nameplate
Leave a comment