ಚಿಕ್ಕಮಗಳೂರು: ಯೊಗ ನಮ್ಮ ಪ್ರಾಚೀನ ಋಷಿಮುನಿಗಳು ಜಗತ್ತಿಗೆ ಕೊಟ್ಟಂತಹ ಕೊಡುಗೆ. ವಕೀಲ ವಿ.ಕೆ.ರಘು ಅವರ ಯೋಗದ ಸಾಧನೆ ಯೋಗ ಮಾಡುವವರಿಗೆ ಒಂದು ಪ್ರೇರಣೆ ಕೊಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಹೇಳಿದರು.
ಕಾಫಿನಾಡ ಸ್ನೇಹಜೀವಿ ಕಲಾ ಸಂಘದಿಂದ ನಗರದ ಟಿಎಂಎಸ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಲ ಯೋಗದಲ್ಲಿ ವಿಶ್ವದಾಖಲೆಯ ಸಾಧನೆ ಮಾಡಿರುವ ವಕೀಲ ವಿ.ಕೆ.ರಘು ಅವರಿಗೆ ಸನ್ಮಾನ ಮತ್ತು ಜಾನಪದ ಮತ್ತು ಭಾವಗೀತೆ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಕೀಲ ವಿ.ಕೆ.ರಘು ಅನೇಕ ಸಾಂಸ್ಕೃತಿಕ ಚಟುವಟಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಅವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರಿದ್ದಾರೆ ಎಂದು ಹೇಳಿದರು.
ಸಾಧಕ ವಿ.ಕೆ ರಘು ಅವರನ್ನು ಸನ್ಮಾನಿಸದಿರುವ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರುತ್ತೇನೆ. ಲೋಪಕ್ಕಾಗಿ ವಿಷಾಧಿಸುತ್ತೇನೆ. ಅವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ನಿಜವಾಗಿಯೂ ಅರ್ಹರಿದ್ದಾರೆ. ಖಂಡಿತವಾಗಿ ನಾನು ಶಿಫಾರಸ್ಸು ಮಾಡುತ್ತೇನೆ ಎಂದರು.
ಯೋಗ್ಯರು ಮುಂದೆ ಬರಬೇಕು ಎಂದರೆ ಸಾಮಾನ್ಯದ ಸಂಗತಿಯಲ್ಲ. ಅಂತಹ ಯೋಗ್ಯತೆ ಗಳಿಸಿರುವ ರಘು ನೀರಿನಲ್ಲೇ ಯೋಗ ಮಾಡಿ ೨೩ ನಿಮಿಷದಲ್ಲಿ ೯೬೦ ಬಾರಿ ಶ್ರೀರಾಮನ ನಾಮ ಜಪ ಮಾಡಿ ಆ ಮೂಲಕ ವಿಶ್ವ ದಾಖಲೆ ಮಾಡಿರುವುದು ಅಪರೂಪದ ಸಂಗತಿ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜಶೆಟ್ಟಿ ಮಾತನಾಡಿ, ವಿ.ಕೆ. ರಘು ಅವರ ಶ್ರಮಕ್ಕೆ ಸರಿಯಾದ ಸ್ಪಂದನೆ ಸಾರ್ವಜನಿಕ ವಲಯದಿಂದ ಸಿಗಬೇಕು. ಸತತವಾದ ಪರಿಶ್ರಮದಿಂದ ಏನಾದರೂ ಸಾಧಿಸಬಹುದು ಎಂಬುದನ್ನು ಇವತ್ತಿನ ಯುವ ಪೀಳಿಗೆಗೆ ವಿ.ಕೆ.ರಘು ತೋರಿಸಿಕೊಟ್ಟಿದ್ದಾರೆ ಎಂದರು. ಯೋಗಕ್ಕೆ ನಮ್ಮ ದೇಶದಲ್ಲಿ ಬಹಳ ಮಹತ್ವವಿದೆ. ಪ್ರಧಾನಿ ಮೋದಿ ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ ಎಂದು ಹೇಳಿದರು.
ಜಯಕರ್ನಾಟಕ ಸಂಘಟನೆಯ ಸ್ಥಾಪಕ ಅಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, ವಿಶ್ವದಾಖಲೆ ಮಾಡಿರುವ ವಿ.ಕೆ. ರಘು ಅವರನ್ನು ಜಿಲ್ಲಾಡಳಿತ ಕರೆದು ಗೌರವಿಸುವ ಕೆಲಸ ಮಾಡಬೇಕಿತ್ತು. ಆದರೆ, ಜಿಲ್ಲಾಡಳಿತ ಅಥವಾ ಜನ ಪ್ರತಿನಿಧಿಗಳು ಗೌರವಿಸಿಲ್ಲ. ಇಲ್ಲಿ ಕಲೆಗೆ ಬೆಲೆ ನೀಡುತ್ತಿಲ್ಲ ಎಂಬುದೇ ಬೇಸರದ ಸಂಗತಿ ಎಂದರು.
ಗೌರವ ಸ್ವೀಕರಿಸಿದ ವಿ.ಕೆ ರಘು ಮಾತನಾಡಿ, ಯೋಗವನ್ನು ಎಲ್ಲರೂ ಮಾಡಬೇಕು. ಪಾಶ್ಚಾತ್ಯ ಜೀವನದಲ್ಲಿ ಆರೋಗ್ಯದ ಕಡೆ ಗಮನ ನೀಡಿ, ಯೋಗ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.
ಕಲಾವಿದ ಸ್ವಾಮಿ ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಕುಮಾರಿ ಈಶ್ವರೀಯ ವಿವಿ ಭಾಗ್ಯ, ಬಿಜೆಪಿ ಮುಖಂಡರಾದ ವೆಂಕಟೇಶ್, ಪ್ರೇಂಕುಮಾರ್, ವಿಭಾ, ವಿನೋದ್ ಬೊಗಸೆ, ಡಾ.ಗೌರಿ, ಕಾರ್ಯಕ್ರಮ ಆಯೋಜಕರಾದ ಕಾಫಿನಾಡು ಸ್ನೇಹಜೀವಿ ಕಲಾ ತಂಡದ ಪದಾಧಿಕಾರಿಗಳು, ಸದಸ್ಯರು, ನಿರೂಪಕ ವಿರೂಪಾಕ್ಷ, ಸಿನಿಮಾ ಕ್ಷೇತ್ರದ ಜೋಗಲಾ ಸಿದ್ದರಾಜು, ವಾಣಿಚಂದ್ರಯ್ಯ ನಾಯ್ಡು ಮತ್ತಿತರರಿದ್ದರು.
Advocate V.K. Raghu inspires those who practice Sadhana Yoga
Leave a comment