ಚಿಕ್ಕಮಗಳೂರು: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಮುಸ್ಲಿಮರು ಜಿಲ್ಲೆಯಾದ್ಯಂತ ಶುಕ್ರವಾರ ಶ್ರದ್ದಾಭಕ್ತಿಯಿಂದ ಆಚರಿಸಿದರು.
ಕಳೆದ ಎರಡು ದಿನಗಳಿಂದ ಉಪವಾಸವಿದ್ದ ಭಕ್ತರು ನಗರದ ಬಡಾವಣೆಗಳ ವಿವಿಧ ಮಸೀದಿಗಳಿಗೆ ಬೆಳಿಗ್ಗೆಯೇ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಂಜೆ ನಗರದ ಬಡಮಕಾನ್ ಮಸೀದಿಯಿಂದ ಆಜಾದ್ ಪಾರ್ಕ್ ವೃತ್ತದ ತನಕ ಕಪ್ಪುಬಟ್ಟೆ ಧರಿಸಿ ಶೋಕದೊಂದಿಗೆ ಮೆರವಣಿಗೆ ನಡೆಸಿದರು.
ತಮಿಳು ಕಾಲೊನಿ, ಷರೀಪ್ ಗಲ್ಲಿ ಸಹಿತ ವಿವಿಧೆಡೆಗಳಲ್ಲಿ ಪಂಜಾ ಮೆರವಣಿಗೆ ನೆರವೇರಿತು. ನೆರೆದಿದ್ದ ಜನ ಪಂಜಾಗೆ ಪ್ರಾರ್ಥನೆ ಸಲ್ಲಿಸಿದರು. ನಗರದ ಹಲವೆಡೆ ಭಕ್ತರಿಗೆ ಪಾನಕ ವ್ಯವಸ್ಥೆ ಮಾಡಲಾಗಿತ್ತು.
ನರಸಿಂಹರಾಜಪುರ ತಾಲ್ಲೂಕಿನಾದ್ಯಂತ ಹಿಂದೂ-ಮುಸ್ಲಿಂ ಭಾವೈಕ್ಯದ ಸಂಕೇತವಾದ ಮೊಹರಂ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ಮೊಹರಂ ಹಬ್ಬದ ಪ್ರಯುಕ್ತ ಪಟ್ಟಣದ ಗುರುಭವನದ ಸಮೀಪ ಹಾಗೂ ಪ್ರವಾಸಿಮಂದಿರದ ವೃತ್ತದ ಸಮೀಪ ಎರಡು ಕಡೆ ಅಲಾಬಿ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿತ್ತು.
ಗುರುವಾರ ರಾತ್ರಿ ಭಕ್ತರು ಸಕ್ಕರೆ, ಉದುಬತ್ತಿ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಇಷ್ಟಾರ್ಥಗಳು ಈಡೇರಿದವರು ಬೆಳ್ಳಿಯ ಪರಿಕರಗಳನ್ನು ನೀಡಿ ಹರಕೆ ತೀರಿಸಿದರು.
ಇಷ್ಟಾರ್ಥಗಳ ಈಡೇರಿಕೆಗಾಗಿ ಪ್ರಾರ್ಥನೆ ಸಲ್ಲಿಸಿದರು. ರಾತ್ರಿ ಅಲಾಬಿ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ನಂತರ ಕೆಂಡಾರ್ಚನೆ ನಡೆಯಿತು.
Muharram festival celebrated across the district
Leave a comment