ಅಲ್ಲೂರು: ಬಸರವಳ್ಳಿ ಗ್ರಾಮದ ಮಂಜುನಾಥ್ ಅವರ ಮನೆಯಲ್ಲಿ ಕಳ್ಳತನ ನಡೆಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ್ ಮನೆಯಲ್ಲಿ ಕೂಲಿ ಕೆಲಸಕ್ಕೆ ಸೇರಿದ್ದ ಅಪರಿಚಿತ ವ್ಯಕ್ತಿಯು, ಮನೆಯಲ್ಲಿ ಯಾರೂ ಇಲ್ಲದ ವೇಳೆ 86 ಗ್ರಾಂ ತೂಕದ ಮಾಂಗಲ್ಯ ಸರ, ಎರಡು ಚಿನ್ನದ ಬಳೆಗಳು ಹಾಗೂ ಕೈ ಚೈನ್ ಕಳವು ಮಾಡಿ ಪರಾರಿಯಾಗಿದ್ದ. ಈ ಕುರಿತು ದೂರು ದಾಖಲಾಗುತ್ತಿದ್ದಂತೆಯೇ ಪ್ರಕರಣ ಭೇದಿಸಲು ವಿಶೇಷ ತಂಡವನ್ನು ರಚಿಸಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್ ಹಾಗೂ ಉಪ ಪೊಲೀಸ್ ಅಧೀಕ್ಷಕ ನಾಗರಾಜ್ ಕೆ.ಆರ್. ಅವರ ಮಾರ್ಗದರ್ಶನದಲ್ಲಿ, ಆಲ್ಲೂರು ವೃತ್ತ ನಿರೀಕ್ಷಕ ಪಿ.ಪಿ. ಸೋಮೇಗೌಡ ನೇತೃತ್ವದ ತಂಡ 72 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಲಾಗಿದೆ. ಕಳುವಾಗಿದ್ದ ₹12.50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ವೃತ್ತ ನಿರೀಕ್ಷಕ ಸೋಮೇಗೌಡ, ‘ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿ ಅಪರಿಚಿತ ವ್ಯಕ್ತಿಯಾಗಿದ್ದಾನೆ. ಕಾಫಿ ಬೆಳೆಗಾರರು ತಮ್ಮ ತೋಟ ಹಾಗೂ ಮನೆ ಕೆಲಸಗಳಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳುವಾಗ ಅವರ ಪೂರ್ವಾಪರ ಮಾಹಿತಿಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.
ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ, ಪೊಲೀಸ್ ಠಾಣೆಯ ಮೂಲಕ ಮಾಹಿತಿ ದೃಢಪಡಿಸಿಕೊಂಡ ಬಳಿಕವೇ ಕೆಲಸಕ್ಕೆ ನೇಮಿಸಿಕೊಳ್ಳುವುದು ಸೂಕ್ತ. ಅಪರಿಚಿತ ವ್ಯಕ್ತಿಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳುವಾಗ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಧ್ಯಮಗಳ ಮೂಲಕ ಹಾಗೂ ಇಲಾಖೆಯಿಂದ ಹಲವಾರು ಬಾರಿ ಜಾಗೃತಿ ಮೂಡಿಸಲಾಗಿದೆ. ಆದರೂ ಇಂತಹ ಪ್ರಕರಣಗಳು ಮರುಕಳಿಸುತ್ತಿರುವುದು ಆತಂಕಕಾರಿ. ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು’ ಎಂದು ಮನವಿ ಮಾಡಿದರು.
ಪೊಲೀಸ್ ಕಾರ್ಯಾಚರಣೆ ತಂಡದಲ್ಲಿ ಪಿಎಸ್ಐಗಳಾದ ಮೂರ್ತಪ್ಪ ಮತ್ತು ರವಿ ಜಿ.ಎ., ಸಿಬ್ಬಂದಿಗಳಾದ ಚೇತನ್ ಕುಮಾರ್, ವಸಂತ್ ಕುಮಾರ್, ಪ್ರಸನ್ನ ಕುಮಾರ್, ತನ್ನೀರ್, ಚೇತನ್ ಬಿ.ಎಲ್. ಹಾಗೂ ಮನು ಇದ್ದರು.
Theft accused arrested – gold ornaments worth ₹12.50 lakh seized
Leave a comment