ಚಿಕ್ಕಮಗಳೂರು: ಬಾಬಾಬುಡನ್ಗಿರಿಯಲ್ಲಿ ಎರಡು ಸಮುದಾಯದ ಸಮಾನ ಸಂಖ್ಯೆಯ ಸಮಿತಿ ರಚಿಸಬೇಕು. ಹೊರಗಡೆಯಿಂದ ಬಂದು ಸುಳ್ಳುಸುದ್ದಿ ಹಬ್ಬಿಸಿ ಕೋಮುದ್ವೇಷ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಎದ್ದೇಳು ಕರ್ನಾಟಕ ಸಂಘಟನೆಯ ಸಂಚಾಲಕ ಗೌಸ್ ಮೊಹಿಯುದ್ದೀನ್ ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀ ಗುರು ದತ್ತಾತ್ರೇಯಸ್ವಾಮಿ ಬಾಬಾಬುಡನ್ ದರ್ಗಾವು ಸರ್ವ ಧರ್ಮೀಯರ ಸೌಹಾರ್ಧ ಕೇಂದ್ರವಾಗಿತ್ತು. ೧೯೭೫ ರಲ್ಲಿ ಈ ದರ್ಗಾವನ್ನು ಕರ್ನಾಟಕ ವಕ್ಫ್ ಸಂಸ್ಥೆಗೆ ವರ್ಗಾಯಿಸಿತು. ಇದು ಸರಕಾರ ಮಾಡಿದ ಮೊದಲ ಎಡವಟ್ಟು. ಸರಕಾರದ ಈ ಕ್ರಮವನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ನ್ಯಾಯಾಲಯದಲ್ಲಿ ದಾವೆ ಹೂಡಿದವು. ಇದನ್ನು ಪುರಸ್ಕರಿಸಿ ಮತ್ತೆ ಸರಕಾರ ಮುಜರಾಯಿ ಇಲಾಖೆಗೆ ಒಪ್ಪಿಸಿತು. ಇದರ ವಿರುದ್ಧ ವಕ್ಫ್ ಸಂಸ್ಥೆ ರಾಜ್ಯದ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದೆ. ಇದು ವಕ್ಫ್ ಸಂಸ್ಥೆ ಮಾಡಿದ ಇನ್ನೊಂದು ಎಡವಟ್ಟು.
ಹೀಗಾಗಿ ಆಯಾ ಕಾಲಘಟ್ಟಕ್ಕೆ ನ್ಯಾಯಾಲಯದ ಸೂಚನೆಯಂತೆ ಅಲ್ಲಿ ಸರಕಾರ ಯಥಾಸ್ಥಿತಿ ಕಾಪಾಡಿಕೊಂಡು ಬಂದಿದೆ. ಈ ಮಧ್ಯೆ ಕೆಲ ಸಂಘಟನೆಗಳು ಅಲ್ಲಿ ದತ್ತಜಯಂತಿ ಕಾರ್ಯಕ್ರಮ ನಡೆಸುತ್ತಾ ಬರುತ್ತಿವೆ ಎಂದರು.
ದತ್ತಾತ್ರೇಯ ಸ್ವಾಮಿ ಬಾಬಾಬುಡನ್ ದರ್ಗಾದ ನಿರ್ವಹಣೆಗೆ ಎರಡೂ ಕೋಮಿನ ಸಮಾನ ಸಂಖ್ಯೆಯಲ್ಲಿರುವ ಸಮಿತಿ ರಚಿಸಬೇಕು. ಗಿರಿಯಲ್ಲಿ ಮಸ್ಲಿಂ ಭಕ್ತರಿಗೆ ಪ್ರಾರ್ಥನೆ ಸಲ್ಲಿಸಲು ಮಸೀದಿ ಬೇಕು. ಯಾತ್ರಿ ನಿವಾಸ ಅಗತ್ಯತೆ ಇದೆ. ಹಿಂದೂ ಮುಸ್ಲಿಂ ಎಂಬ ತಾರತಮ್ಯವಿಲ್ಲದೆ ಮುಜಾವರ್ ಮೂಲಕ ಭಕ್ತಿ ಸಲ್ಲಿಸಲು ಎಲ್ಲರಿಗೆ ಅವಕಾಶ ಕಲ್ಪಿಸಬೆಕು ಎಂದು ಆಗ್ರಹಿಸಿದರು.
ದತ್ತಮಾಲೆ ಮತ್ತು ದತ್ತಜಯಂತಿ ಸಂದರ್ಭದಲ್ಲಿ ಬಾಬಾಬುಡನ್ಗಿರಿಗೆ ತೆರಳುವ ಮಾರ್ಗಮಧ್ಯದಲ್ಲಿ ಅತ್ತಿಗುಂಡಿ, ಮಸೀದಿ ಮನೆಗಳಿಗೆ ಸೂಕ್ತ ರಕ್ಷಣೆ ನೀಡಬೇಕು. ಗುಹೆ ಒಳಗೆ ಪೂಜೆ, ಮುಜಾವರ್ ನೇತೃತ್ವದಲ್ಲಿ ನಡೆಯಬೇಕು. ಜಿಲ್ಲೆ ಹಾಗೂ ಹೊರಜಿಲ್ಲೆ ಎಲ್ಲಿಯೂ ಕೂಡ ಶಾಂತಿಭಂಗ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕಳೆದ ೨ ತಿಂಗಳ ಹಿಂದೆ ಗುಹೆಯೊಳಗೆ ಮೂರ್ತಿಯೊಂದನ್ನು ತೆಗೆದುಕೊಂಡು ಹೋಗಿರುವುದಾಗಿ ಈಗಾಗಲೇ ಮೊಕದ್ದಮೆ ದಾಖಲಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ದಿವಾಕರ, ಗಣೇಶ್, ಸಂದೀಪ್, ಅರುಣ ಮತ್ತಿತರರಿದ್ದರು.
Strict legal action should be taken against those spreading communal hatred.
Leave a comment