ಚಿಕ್ಕಮಗಳೂರು: : ಪಂಚ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದು ರಾಜ್ಯವನ್ನೂ ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿರುವ ಹಿಂದುಳಿದ ವರ್ಗಗಳ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪದಚ್ಯುತಗೊಳಿಸಿ ರಾಜಕೀಯ ಷಡ್ಯಂತ್ರ ರೂಪಿಸುತ್ತಿರುವುದನ್ನು ಜಿಲ್ಲಾ ಅಹಿಂದ ಸಂಘಟನೆ ಖಂಡಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಅಹಿಂದ ಸಂಘಟನೆ ಅಧ್ಯಕ್ಷ ತ್ರಿಭುವನ್ ಎತ್ತಿನಮನೆ ಅವರು ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಪದಚ್ಯುತಿಗೊಳಿಸಿದರೆ ರಾಜ್ಯಾದ್ಯಂತೆ ಅಹಿಂದ ಸಂಘಟನೆ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಅಹಿಂದ ಒಕ್ಕೂಟಗಳ ಬೆಂಬಲದಿಂದಲೇ ಗೆದ್ದು ಬಂದಿರುವ ಅನೇಕರು ಇಂದು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನದಲ್ಲಿ ತೊಡಗಿಕೊಂಡಿರುವುದು ಸರಿಯಲ್ಲ. ಇದೇ ರೀತಿ ಪ್ರವೃತ್ತಿಯನ್ನು ಮುಂದುವರಿಸಿದರೆ ಅಂತಹವರಿಗೆ ಮುಂದೆ ರಾಜಕೀಯವಾಗಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಜಾರಿಗೆ ತಂದ ಕೀತಿ ಅವರಿಗೆ ಸಲ್ಲುತ್ತದೆ. ರಾಷ್ಟ್ರ ರಾಜಕಾರಣದಲ್ಲೇ ಮೊದಲ ಬಾರಿಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದುಕೊಟ್ಟು ಮಾತನ್ನು ಉಳಿಸಿಕೊಂಡಿದ್ದಾರೆ. ಅವರ ದಕ್ಷ ಆಡಳಿತದಿಂದಾಗಿ ರಾಜ್ಯ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ. ಹೀಗಿದ್ದರೂ ಅವರ ವಿರುದ್ಧ ಅಪಸ್ವರ ಎತ್ತುವುದನ್ನು ಸಹಿಸಲಾಗದು ಎಂದರು.
ಸಿದ್ದರಾಮಯ್ಯ ಅವರ ವಿರುದ್ಧ ಗುರುತರವಾದ ಯಾವುದೇ ಆರೋಪಗಳಿಲ್ಲ. ವಿವಾದ ರಹಿತ ಜನ ಮೆಚ್ಚುವ ಆಡಳಿತವನ್ನು ಅವರು ನೀಡುತ್ತಿದ್ದಾರೆ. ಅವರನ್ನು ಬದಲಿಸಲು ಯಾವುದೇ ರೀತಿಯ ಸಕಾರಣಗಳೂ ಇರುವುದಿಲ್ಲ. ಹೀಗಿದ್ದರೂ ಕೇವಲ ಅಧಿಕಾರ ರಾಜಕಾರಣಕ್ಕಾಗಿ ಕೆಳಕ್ಕಿಳಿಸುವ ಪ್ರಯತ್ನಗಳನ್ನು ಜನತೆಯೂ ಒಪ್ಪುವುದಿಲ್ಲ. ಈ ಎಲ್ಲಾ ವಿಚಾರಳನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗಮನಿಸಬೇಕು. ಸಿದ್ದರಾಮಯ್ಯ ಅವರನ್ನು ಬದಲಿಸುವಂತಹ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಕೈಗೊಳ್ಳಬಾರದು ಎಂದು ಆಗ್ರಹಿಸಿದರು.
ಅತೀ ಹೆಚ್ಚುಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು, ಎರಡು ಬಾರಿ ಮುಖ್ಯಮಂತ್ರಿಯಾಗಿ ರಾಜಕೀಯವಾಗಿ ಹಿರಿಯ ಅನುಭವಿಯಾಗಿದ್ದಾರೆ. ಅವರ ನೇತೃತ್ವದಲ್ಲಿ ಪೂರ್ಣಾವಧಿ ವರೆಗೆ ಸರ್ಕಾರ ಮುಂದುವರಿದಲ್ಲಿ ರಾಜ್ಯ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ. ಅಲ್ಲದೆ ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಅಹಿಂದಾ ವರ್ಗದ ವಿಶ್ವಾಸ ಪಡೆದು ಅಧಿಕಾರಕ್ಕೆ ಬರಲು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.
ಈ ಎಲ್ಲಾ ವಿಚಾರಗಳನ್ನು ಕಾಂಗ್ರೆಸ್ ಪಕ್ಷದ ವರಿಷ್ಠರ ಗಮನ ಸೆಳೆಯುವ ಜೊತೆಗೆ ಅಲ್ಪಸಂಖ್ಯಾತ, ದಲಿತ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಜಾಗೃತಿ ಮೂಡಿಸುವ ಸಲುವಾಗಿ ಶೀಘ್ರದಲ್ಲೇ ರಾಜ್ಯಮಟ್ಟದಲ್ಲಿ ಅಹಿಂದಾ ಸಮಾವೇಶ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸಬಾರದು ಎಂದು ಹಕ್ಕೊತ್ತಾಯವನ್ನು ಮಂಡಿಸುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಹಿಂದ ಸಂಘಟನೆ ಮುಖಂಡರಾದ ಧರ್ಮಯ್ಯ, ಲಕ್ಷ್ಮಣ, ಸಂತೋಷ್, ಮೋಹನ್ನಾಯ್ಕ, ಅಪ್ಸರ್, ಜಗದೀಶ್, ಸಿ.ಸಿ. ಮಧು ಮತ್ತಿತರರು ಉಪಸ್ಥಿತರಿದ್ದರು.
Statewide struggle to oust Siddaramaiah
Leave a comment