ಚಿಕ್ಕಮಗಳೂರು: ಸಾಮಾಜಿಕ ಭದ್ರತಾ ಯೋಜನೆಗಳಡಿ ವೃದ್ಧಾಪ್ಯ, ವಿಧವಾ ಸೇರಿದಂತೆ ವಿವಿಧ ಮಾಸಿಕ ಪಿಂಚಣಿಗಳನ್ನು ಪಡೆಯುತ್ತಿರುವ ಫಲಾನುಭವಿಗಳಿಗೆ “ತಿಳುವಳಿಕೆ ಪತ್ರ” ನೀಡುವ ನೆಪದಲ್ಲಿ ಕಳೆದ ಸುಮಾರು ಮೂರು ತಿಂಗಳಿಂದ ಪಿಂಚಣಿ ಹಣ ತಡೆಹಿಡಿಯಲಾಗಿದೆ ಎಂದು ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಆನಂದ ನಾಯ್ಕ್ ಹಳೇಹಟ್ಟೆ ತಿಳಿಸಿದರು.
ಪ್ರಸ್ ಕ್ಲಬ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರದ ಸುತ್ತೋಲೆಗಳು ಹಾಗೂ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ಇಲಾಖೆಯ ನಿರ್ದೇಶನಗಳ ಅನ್ವಯ ಜಿಲ್ಲೆಯಲ್ಲಿ ಸಂದೇಹಾಸ್ಪದ ಫಲಾನುಭವಿಗಳ ಭೌತಿಕ ಪರಿಶೀಲನೆ ನಡೆಸಲಾಗಿದೆ. 2026ರ ಜೂನ್ 11ರ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ ಗುರುತಿಸಲಾದ 69,029 ಸಂದೇಹಾಸ್ಪದ ಫಲಾನುಭವಿಗಳ ಪೈಕಿ 56,529 ಮಂದಿಯ ಪರಿಶೀಲನೆ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಪರಿಶೀಲನೆಯ ವೇಳೆ ಸಾವಿರಾರು ಫಲಾನುಭವಿಗಳ ಕುರಿತು ಗ್ರಾ ಮ ಆಡಳಿತಾಧಿಕಾರಿಗಳು ಫಲಾನುಭವಿಗಳು ಗ್ರಾಮದಲ್ಲಿ ವಾಸವಿಲ್ಲ, ಅಗತ್ಯ ದಾಖಲೆಗಳನ್ನು ಸಲ್ಲಿಸಿಲ್ಲ ಅಥವಾ ಆದಾಯ ಪ್ರಮಾಣಪತ್ರ ಒದಗಿಸಿಲ್ಲ ಎಂಬ ವರದಿ ನೀಡಿರುವ ಹಿನ್ನೆಲೆಯಲ್ಲಿ ಹಲವು ಪಿಂಚಣಿಗಳನ್ನು ರದ್ದುಪಡಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಆರೋಪಿಸಿದರು.
ಪಿಂಚಣಿ ಪಡೆಯಲು ವಾರ್ಷಿಕ ಆದಾಯ ₹32,000 ಮೀರಬಾರದು, ರೇಷನ್ ಕಾರ್ಡ್ನಲ್ಲಿ ಗಂಡು ಮಕ್ಕಳ ಹೆಸರು ಇರಬಾರದು, ನಿರ್ಗತಿಕರಾಗಿರಬೇಕು ಹಾಗೂ ಜಮೀನು ಹೊಂದಿರಬಾರದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ಆದರೆ ಬಿಪಿಎಲ್ ಪಡಿತರ ಚೀಟಿಗೆ ಸರ್ಕಾರ ವಾರ್ಷಿಕ ₹1.20 ಲಕ್ಷ ಆದಾಯ ಮಿತಿಯನ್ನು ನಿಗದಿಪಡಿಸಿರುವಾಗ, ಪಿಂಚಣಿಗೆ ಮಾತ್ರ ₹32,000 ಆದಾಯ ಮಿತಿ ವಿಧಿಸಿರುವುದು ನ್ಯಾಯಸಮ್ಮತವಲ್ಲ ಎಂದು ಮುಖಂಡರು ಪ್ರಶ್ನಿಸಿದರು.
ಪಿಂಚಣಿ ಸ್ಥಗಿತದಿಂದ ವೃದ್ಧರು, ವಿಧವೆಯರು ಹಾಗೂ ಮನಸ್ವಿನಿ ಯೋಜನೆಯ ಫಲಾನುಭವಿಗಳು ಪ್ರತಿದಿನ ತಾಲ್ಲೂಕು ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಹಣವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಜೆಡಿಎಸ್ ಮುಖಂಡರು, ಕಳೆದ ಮೂರು ತಿಂಗಳಿಂದ ಸ್ಥಗಿತಗೊಂಡಿರುವ ಎಲ್ಲಾ ಫಲಾನುಭವಿಗಳ ಪಿಂಚಣಿ ಹಣವನ್ನು ಕೂಡಲೇ ಜಮೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಸಿ.ಎಚ್. ಮೂರ್ತಿ, ಶ್ರೀಕಾಂತ್, ತರುಣ್ ಹಾಗೂ ರಮೇಶ್ ನಾಯ್ಕ್ ಉಪಸ್ಥಿತರಿದ್ದರು.
Pension payments have been suspended in the district for three months.
Leave a comment