ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಕೋಣಗಳ ಹಾವಳಿ ಮತ್ತೆ ಜೀವ ಬಲಿ ಪಡೆದಿದೆ. ಕೊಪ್ಪ ತಾಲೂಕಿನ ಅಗಳಗಂಡಿ ಸಮೀಪದ ದೋಣಿಹಡ್ಲು ಗ್ರಾಮದಲ್ಲಿ ಕಾಡುಕೋಣ ದಾಳಿಗೆ 45 ವರ್ಷದ ಮಂಜುನಾಥ್ ಮೃತಪಟ್ಟಿದ್ದಾರೆ.
ಮಂಜುನಾಥ್ ಅವರು ತಮ್ಮ ಮನೆಯಿಂದ ತೋಟದ ಕಡೆಗೆ ತೆರಳುತ್ತಿದ್ದ ವೇಳೆ ಹಳ್ಳಿರಸ್ತೆಯಲ್ಲಿ ಏಕಾಏಕಿ ಎದುರಾದ ಕಾಡುಕೋಣ ದಾಳಿ ನಡೆಸಿದೆ. ತೀವ್ರವಾಗಿ ತಿವಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರೂ, ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದಾರೆ.
ಕೇವಲ 15 ದಿನಗಳ ಅಂತರದಲ್ಲಿ ಜಿಲ್ಲೆಯಲ್ಲಿ ಕಾಡುಕೋಣ ದಾಳಿಗೆ ಇದು ಎರಡನೇ ಬಲಿಯಾಗಿದೆ. ಕಳೆದ ಜುಲೈ 7ರಂದು ಕಳಸ ತಾಲೂಕಿನ 52 ವರ್ಷದ ಶೀಲಾ ಅವರು ಕಾಡುಕೋಣ ದಾಳಿಯಲ್ಲಿ ಮೃತಪಟ್ಟಿದ್ದರು. ನಿರಂತರವಾಗಿ ನಡೆಯುತ್ತಿರುವ ಕಾಡುಕೋಣ ದಾಳಿಗಳಿಂದ ಮಲೆನಾಡು ಭಾಗದ ಜನರಲ್ಲಿ ಆತಂಕ ಮನೆಮಾಡಿದ್ದು, ಸರ್ಕಾರ ಹಾಗೂ ಅರಣ್ಯ ಇಲಾಖೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಾಡು ಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಮೀಣ ಪ್ರದೇಶದ ಜನರ ಜೀವ ರಕ್ಷಣೆಗಾಗಿ ತುರ್ತು ಕ್ರಮಗಳನ್ನು ಜಾರಿಗೆ ತರಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.
Worker killed in wild buffalo attack
Leave a comment