ಚಿಕ್ಕಮಗಳೂರು: ಕೇಂದ್ರ ಸರ್ಕಾರ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯಕ್ಕೆ ಸಂಬಂಧಿಸಿದಂತೆ ಉಪಗ್ರಹ ಆಧಾರಿತ ಚಿತ್ರಣವನ್ನು ಮಾತ್ರ ನೆಚ್ಚಿಕೊಂಡು ಅಧಿಸೂಚನೆ ಹೊರಡಿಸುತ್ತಿರುವುದು ಮಲೆನಾಡಿನ ರೈತರು ಹಾಗೂ ಸ್ಥಳೀಯ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಹೀಗಾಗಿ ಸ್ಥಳೀಯ ವಾಸ್ತವ ಪರಿಸ್ಥಿತಿಯನ್ನು ಆಧರಿಸಿ ‘ಗ್ರೌಂಡ್ ಸರ್ವೇ’ ನಡೆಸಿದ ಬಳಿಕವೇ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಮೊಹಮ್ಮದ್ ತಬ್ರೇಝ ಆಲಂ ಶರೀಫ್ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಘಟ್ಟಗಳ ಸಂರಕ್ಷಣೆ ಹಾಗೂ ಜನರ ಜೀವನೋಪಾಯದ ನಡುವೆ ಸಮತೋಲನ ಕಾಯ್ದುಕೊಳ್ಳಲು ರಾಜ್ಯ ಸರ್ಕಾರಕ್ಕೆ ಪ್ರತ್ಯೇಕ ‘ಪಶ್ಚಿಮ ಘಟ್ಟಗಳ ನೀತಿ’ ಮತ್ತು ‘ಕರ್ನಾಟಕ ಕಾರ್ಬನ್ ಕ್ರೆಡಿಟ್ ಕಾರ್ಪೊರೇಷನ್’ ಸ್ಥಾಪಿಸುವಂತೆ ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದರು.
೨೦೧೧ರಲ್ಲಿ ಗಾಡ್ಗೀಳ್ ವರದಿಯನ್ನು ಆರೂ ರಾಜ್ಯಗಳು ತಿರಸ್ಕರಿಸಿದ ಬಳಿಕ, ಕಸ್ತೂರಿರಂಗನ್ ವರದಿ ಆಧಾರದ ಮೇಲೆ ಶೇ.೩೭ ರಷ್ಟು ಪ್ರದೇಶವನ್ನು ಸೂಕ್ಷ್ಮ ವಲಯ ಎಂದು ಗುರುತಿಸಲಾಯಿತು. ಆದರೆ ೧೫ ವರ್ಷಗಳ ಹಿಂದೆ ಉಪಗ್ರಹ ಚಿತ್ರಣದ ಮೂಲಕ ಮಾಡಿದ ಈ ಸಮೀಕ್ಷೆಯಲ್ಲಿ ಭಾರೀ ಲೋಪಗಳಿವೆ. ಹಳ್ಳಿಗಳು, ರೈತರ ಜಮೀನುಗಳು ಹಾಗೂ ತೋಟಗಳು ಸಹ ಹಸಿರು ಹೊದಿಕೆಯಾಗಿ ಕಾಣಿಸಿಕೊಂಡಿದ್ದರಿಂದ, ಅವುಗಳೂ ಇಎಸ್ಎ ವ್ಯಾಪ್ತಿಗೆ ಸೇರ್ಪಡೆಯಾಗಿವೆ ಎಂದರು.
ಇಂದಿನ ’ಕ್ಯಾಡಸ್ಟ್ರಲ್ ಮ್ಯಾಪಿಂಗ್’ ಮತ್ತು ’ಲೈಡಾರ್’ ತಂತ್ರಜ್ಞಾನ ಬಳಸಿ, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಜನರನ್ನು ಒಳಗೊಂಡು ಪಾರದರ್ಶಕವಾಗಿ ಸಮೀಕ್ಷೆ ನಡೆಸಬೇಕಿತ್ತು. ಕೇಂದ್ರ ಸರ್ಕಾರ ಏಳನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದ್ದರೂ ಸ್ಥಳೀಯ ಅಭಿಪ್ರಾಯ ಪಡೆದಿಲ್ಲ. ಇದರಿಂದಾಗಿ ಜಮೀನು ಕಳೆದುಕೊಳ್ಳುವ, ಒತ್ತುವರಿ ತೆರವು ಹಾಗೂ ತೊಂದರೆಗೆ ಒಳಗಾಗುವ ಭೀತಿಯಲ್ಲಿ ಮಲೆನಾಡಿಗರಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಮಲೆನಾಡಿನ ಕಾಫಿ ಬೆಳೆಗಾರರು ಹಾಗೂ ರೈತರ ಹಸಿರು ಸಂರಕ್ಷಣೆಗೆ ಆರ್ಥಿಕ ಉತ್ತೇಜನ ನೀಡಲು ’ಕರ್ನಾಟಕ ಕಾರ್ಬನ್ ಕ್ರೆಡಿಟ್ ಕಾರ್ಪೊರೇಷನ್’ ಸ್ಥಾಪನೆಗೆ ಸರ್ಕಾರಕ್ಕೆ ಸುದೀರ್ಘ ವರದಿ ಸಲ್ಲಿಸಲಾಗಿದೆ ಎಂದರು.
ಇಂಡಿಯನ್ ಕಾರ್ಬನ್ ಮಾರ್ಕೆಟ್ ಮೂಲಕ ಕಾರ್ಬನ್ ಕ್ರೆಡಿಟ್ ಮಾರಾಟ ಮಾಡಲಾಗುವುದು. ಕನಿಷ್ಠ ೫ ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮರಗಳು ಹಾಗೂ ಶೇ.೪೦ರಷ್ಟು ಗಿಡಮರಗಳ ಸಾಂದ್ರತೆ ಹೊಂದಿರುವ ಕಾಫಿ ಎಸ್ಟೇಟ್ ಹಾಗೂ ಜಮೀನುಗಳ ಒಂದು ಮರಕ್ಕೆ ’ಒಂದು ಕಾರ್ಬನ್ ಕ್ರೆಡಿಟ್’ ಪರಿಗಣಿತವಾಗಲಿದೆ ಎಂದರು.
ಮಾರಾಟದಿಂದ ಬರುವ ಬಹುಪಾಲು ಆದಾಯ ನೇರವಾಗಿ ಸ್ಥಳೀಯ ಕೃಷಿಕರು, ಬೆಳೆಗಾರರಿಗೆ ತಲುಪಲಿದ್ದು, ಉಳಿದ ಪಾಲನ್ನು ಸರ್ಕಾರಕ್ಕೆ ನೀಡಿ ಮೂಲ ಸೌಕರ್ಯ ಹಾಗೂ ರಸ್ತೆ ಅಭಿವೃದ್ಧಿಗೆ ಬಳಸಲಾಗುವುದು. ಪಶ್ಚಿಮ ಘಟ್ಟಗಳ ಅಭಿವೃದ್ಧಿಗಾಗಿ ವಿಶೇಷ ’ಗ್ರೀನ್ ಬಾಂಡ್’ಗಳನ್ನು ಹೂಡಿಕೆದಾರರಿಗೆ ಬಿಡುಗಡೆ ಮಾಡಲು ಯೋಚಿಸಲಾಗಿದೆ.
ಬರಿ ನಿಷೇಧ ಒಂದೇ ಸಂರಕ್ಷಣೆಗೆ ಪರಿಹಾರವಲ್ಲ. ಕೃಷ್ಣಾ, ಕಾವೇರಿ, ತುಂಗಾ, ಭದ್ರಾ ಮುಂತಾದ ಜೀವ ನದಿಗಳ ಉಗಮಸ್ಥಾನವಾಗಿರುವ ಪಶ್ಚಿಮ ಘಟ್ಟಗಳ ನದಿಗಳ ಆರೋಗ್ಯ ಮತ್ತು ಗುಡ್ಡಸಸಿತ ತಡೆಯಲು ವಿಶೇಷ ನಿಧಿ ಮೀಸಲಿಡಬೇಕು. ಕೇವಲ ’ಬ್ಯಾನ್’ ಮಾಡುವ ಬದಲು, ಸಂರಕ್ಷಣೆ ಮತ್ತು ಮೂಲಸೌಕರ್ಯಗಳ ನಡುವೆ ಸಮತೋಲನ ಸಾಧಿಸಲು ರಾಜ್ಯ ಮಟ್ಟದ ಸ್ಪಷ್ಟ ‘ಪಶ್ಚಿಮ ಘಟ್ಟ ನೀತಿ’ ತರಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಸಾರ್ವಜನಿಕರು ಯಾವುದೇ ಗೊಂದಲಕ್ಕೊಳಗಾಗಬಾರದು. ಬೆಳಗಾವಿ ಅಧಿವೇಶನದಲ್ಲಿ ಪಶ್ಚಿಮ ಘಟ್ಟದ ಕುರಿತು ವಿಶೇಷ ಚರ್ಚೆ ನಡೆಯಲಿದೆ. ಆ ಬಳಿಕ ಪಶ್ಚಿಮ ಘಟ್ಟ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಮಾಡಿ, ಸ್ಥಳೀಯರ ಕುಂದುಕೊರತೆ ಆಲಿಸಿ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಲಾಗುವುದು ಎಂದು ಭರವಸೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿಶೇಷ ಸಲಹೆಗಾರ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ನಯೀಮುಲ್ಲಾ ಎ.ಆರ್., ಕಾನೂನು ಸಲಹೆಗಾರ ಮೃತ್ಯುಂಜಯ, ಹೆಚ್ಚುವರಿ ಜಿಲ್ಲಾಧಿಕಾರಿ ನಂಜುಂಡೇಗೌಡ ಉಪಸ್ಥಿತರಿದ್ದರು.
Ground survey needed – Proposal to set up ‘Carbon Credit Corporation’
Leave a comment