ಚಿಕ್ಕಮಗಳೂರು: ರಸಗೊಬ್ಬರ ಪೂರ್ವಕ್ಕೆಯಲ್ಲಿ ರೈತರಿಗೆ ನಿರಂತರವಾಗಿ ಮೋಸ ನಡೆಯುತ್ತಿದ್ದು, ಕರ್ನಾಟಕ ರಾಜ್ಯ ಒಂದರಲ್ಲೇ ಪ್ರತಿವರ್ಷ ರೈತರಿಂದ ಎರಡು ಸಾವಿರ ಕೋಟಿ ರೂ. ಹಣ ದೋಚಲಾಗುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಆರೋಪಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಬ್ಸಿಡಿ ವ್ಯಾಪ್ತಿಗೆ ಬರುವ ಯೂರಿಯ ಹಾಗೂ ಡಿಎಪಿ ಗೊಬ್ಬರವನ್ನು ಅವುಗಳ ಎಂಆರ್ಪಿ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಹಣವನ್ನು ಮಾರಾಟಗಾರರು, ಅಧಿಕಾರಿಗಳು ಮತ್ತು ರಾಜಕಾರಣಿಗಳು ದೋಚುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದ್ದ ಕೃಷಿ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಖುಷಿ ಇಲಾಖೆ ಅಧಿಕಾರಿಗಳೇ ಡೀಲರ್ಗಳಿಗೆ ಯೂರಿಯಾ ಮತ್ತು ಡಿಎಪಿ ಗೊಬ್ಬರವನ್ನು ಎಂಆರ್ಪಿ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಿ ಎಂದು ತಿಳಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸಿಕ್ಕಾವಿ ಭಾಗದಲ್ಲಿ ನೋಂದಾಣಿಯಾಗಿ ರೈತರಿಗಾಗಿ ಕೆಲಸ ಮಾಡುತ್ತಿರುವ ಹಾಗೂ ರಸಗೊಬ್ಬರ ಮಾರಾಟ ಮಾಡುತ್ತಿರುವ ಕರ್ನಾಟಕ ರೈತ ಸಹಾಯ ರೈತ ಉತ್ಪಾದಕ ಕಂಪನಿ ಈ ವಿಚಾರವನ್ನು ನಮ್ಮ ಗಮನಕ್ಕೆ ತಂದಿದೆ ಎಂದು ಹೇಳಿದರು.
ಕೃಷಿ ಇಲಾಖೆ ಈ ಅಕ್ರಮ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು. ತಕ್ಷಣವೇ ಅಗತ್ಯವಿರುವಷ್ಟು ರಸಗೊಬ್ಬರ ಪೂರೈಕೆ ಮಾಡಬೇಕು. ಎಲ್ಲಾ ರಸಗೊಬ್ಬರ ಮಾರಾಟಗಾರರು ಎಫ್ ಸಿಒ 1985 ಶರತ್ತುಗಳ ಪ್ರಕಾರ ರಸಗೊಬ್ಬರದ ಅಂಗಡಿಗಳಲ್ಲಿ ಬೆಲೆ, ಸ್ಟಾಕ್ ವಿವರ ಹಾಗೂ ಇತ್ಯಾದಿ ಮಾಹಿತಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ರಸ ಗೊಬ್ಬರವನ್ನು ಗರಿಷ್ಠ ಮಾರಾಟ ಬೆಲೆಗೆ ಮಾತ್ರ ಮಾರಾಟ ಮಾಡಬೇಕು ಎಂದು ಆಗ್ರಹಿಸಿದರು.
ರಸಗೊಬ್ಬರ ಅಕ್ರಮಗಳ ಬಗ್ಗೆ ದೂರು ನೀಡಲು ಸಂಬಂಧಪಟ್ಟ ತಾಲೂಕು ಸಹಾಯಕ ಕೃಷಿ ಅಧಿಕಾರಿಯ ದೂರವಾಣಿ ಸಂಖ್ಯೆಯನ್ನು ಪ್ರದರ್ಶನ ಫಲಕದಲ್ಲಿ ನಮೂದಿಸಬೇಕು. ರಸಗೊಬ್ಬರ ಮಾರಾಟ ಕಂಪನಿಗಳು ನಿಯಮಗಳ ಪ್ರಕಾರ ಕಡ್ಡಾಯವಾಗಿ ರಸ ಗೊಬ್ಬರವನ್ನು ಅಂಗಡಿಗಳ ಬಾಗಿಲಿಗೆ ವಿತರಣೆ ಮಾಡುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ರಸಗೊಬ್ಬರ ಕಂಪನಿಗಳು ಸಬ್ಸಿಡಿ ಗೊಬ್ಬರದ ಜೊತೆಗೆ ಲಿಂಕ್ ಪ್ರಾಡಕ್ಟ್ ಗಳನ್ನು ಬಲವಂತವಾಗಿ ನೀಡುವುದನ್ನು ನಿಲ್ಲಿಸಬೇಕು. ನಿಯಮಗಳನ್ನು ನೀಡುತ್ತಿರುವ ಡೀಲರ್ಗಳ ಲೈಸೆನ್ಸ್ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಮುಖರಾದ ರತನ್, ಶಿವಪ್ರಕಾಶ್, ಪ್ರಕಾಶ್, ವಿಶ್ವನಾಥ್, ಮಲ್ಲೇಶ್, ವಸಂತ್ ಮತ್ತಿತರರಿದ್ದರು.
Massive fraud alleged in fertilizer sales
Leave a comment