ಕಡೂರು: 900 ವರ್ಷಗಳ ಹಳೆಯ ಒಂದು ಕೆ.ಜಿ.ಯಷ್ಟು ಚಿನ್ನ ಕೊಡುವುದಾಗಿ ನಂಬಿಸಿ ಕೇರಳದ ವ್ಯಕ್ತಿಯಿಂದ ₹10 ಲಕ್ಷ ಪಡೆದು ವಂಚಿಸಿರುವ ಪ್ರಕರಣ ಸಖರಾಯಪಟ್ಟಣ ಠಾಣೆಯಲ್ಲಿ ದಾಖಲಾಗಿದೆ.
ಕೇರಳ ಕಣ್ಣೂರು ಜಿಲ್ಲೆಯ ನೀರಕಡುವು ಪಟ್ಟಣದ ಸುಮಿತ್ ವಾಲಿಯಾ ವೀಟ್ಟಿಲ್ ಎಂಬುವರು ಕಡೂರಿನ ವಿಷ್ಣು ಎಂಬ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
*9 ತಿಂಗಳ ಹಿಂದೆ ಪರಿಚಯವಾಗಿದ್ದ ವಿಷ್ಣು. ನಮ್ಮ ಜಮೀನಿನಲ್ಲಿ 1 ತಿಂಗಳು ಕೆಲಸ ಮಾಡಿದ್ದ. ಇತ್ತೀಚೆಗೆ ಕರೆ ಮಾಡಿ ಸರ್ಕಾರಿ ಜಮೀನು ಖರೀದಿ ಮಾಡಿದ್ದೇನೆ. ಜಮೀನಿನ ಕೆಲಸ ಮಾಡುವಾಗ ಮಣ್ಣಿನಲ್ಲಿ ಒಂದು ಕೆ.ಜಿ.ಯಷ್ಟು ಚಿನ್ನ ಸಿಕ್ಕಿದ್ದು, ಅದು 900 ವರ್ಷಗಳ ಹಿಂದಿನ ಕಾಲದ ಚಿನ್ನ. ಅದನ್ನು ನಾನು ಮಾರಾಟ ಮಾಡಲು ಸಾಧ್ಯವಿಲ್ಲ, ₹50 ಲಕ್ಷ ನೀಡಿ ನೀವೇ ಖರೀದಿ ಮಾಡಿ ಎಂದು ಹೇಳಿದ್ದ. ಅದನ್ನು ನಂಬಿ ಬಂದಿದ್ದೆವು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ಸ್ನೇಹಿತ ಅಭಿಲಾಷ್ ಜತೆಗೆ ಬಂದಾಗ ಚಿನ್ನದ ಎರಡು ತುಂಡುಗಳನ್ನು ವಿಷ್ಣು ನೀಡಿದ್ದ. ಪರಿಶೀಲಿಸಿದಾಗ ಅದು ಅಸಲಿ ಚಿನ್ನವಾಗಿತ್ತು. ನಂತರ ವಾಪಸ್ ಕೇರಳಕ್ಕೆ ಹೋಗಿದ್ದೆವು. ಸ್ನೇಹಿತ ಬಿಜಿಲ್ ಹಾಗೂ ಫೈಜಲ್ ಜತೆ ಜೂನ್ 1ರಂದು ಕಡೂರಿಗೆ ಬಂದು ವಿಷ್ಣುಗೆ ಕರೆ ಮಾಡಿದಾಗ ಚಿಕ್ಕಮಗಳೂರು ರಸ್ತೆಗೆ ಬರಲು ಹೇಳಿದ. ಸಖರಾಯಪಟ್ಟಣದಿಂದ ಕೊಂಚ ಹಿಂದೆ ನಿಂತಿದ್ದಾಗ ಎರಡು ಬೈಕ್ನಲ್ಲಿ ವಿಷ್ಣು ಸೇರಿ ಆರು ಜನ ಬಂದರು.
ಮೊದಲು ₹10 ಲಕ್ಷ ನೀಡಿದರೆ ಚಿನ್ನ ಒಪ್ಪಿಸಲಾಗುವುದು, ಉಳಿದ ಮೊತ್ತವನ್ನು ಚಿನ್ನ ಅಸಲಿ ಎಂದು ಪರೀಕ್ಷಿಸಿದ ನಂತರ ಕೊಡಿ ಎಂದು ಹೇಳಿದರು. ಅದರಂತೆ ₹10 ಲಕ್ಷ ನೀಡಿದ ಕೂಡಲೇ ಅಲ್ಲಿಂದ ಬೈಕ್ನಲ್ಲಿ ಪರಾರಿಯಾದರು’ ಎಂದು ವಿವರಿಸಿದ್ದಾರೆ.
ಚಿನ್ನ ಕೊಡುವುದಾಗಿ ನಂಬಿಸಿ ಮೋಸ ಮಾಡಿದವರನ್ನು ಹಿಡಿದು ಹಣ ವಾಪಸ್ ಕೊಡಿಸುವಂತೆ ದೂರಿನಲ್ಲಿ ವಿನಂತಿಸಿದ್ದಾರೆ.
₹10 lakh fraud in 1 kg gold lure case
Leave a comment