ಚಿಕ್ಕಮಗಳೂರು: ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಡಿ’ ದರ್ಜೆ ಹೊರಗುತ್ತಿಗೆ ನೌಕರರ ಭವಿಷ್ಯ ನಿಧಿ (EPF) ಹಣವನ್ನು ಪಾವತಿಸದೆ ವಂಚನೆ ನಡೆಸಿರುವುದಲ್ಲದೆ, ಕೆಲವು ನೌಕರರು ಹಾಗೂ ನೌಕರರ ಪ್ರತಿನಿಧಿಯ ಬ್ಯಾಂಕ್ ಖಾತೆಗಳನ್ನು ಅಕ್ರಮವಾಗಿ ಫ್ರೀಜ್ ಮಾಡಿಸಿ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ, ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ಲಿಸಾ ಫೌಂಡೇಶನ್ (ಆರ್) ಆಗ್ರಹಿಸಿದೆ.
ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲಿಸಾ ಫೌಂಡೇಶನ್ ಸಂಸ್ಥಾಪಕಿ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ, ವಕೀಲೆ ಸಂಗೀತಾ ಪ್ರಸಾದ್, ಸಂಸ್ಥೆಯ ಮಾಲೀಕ ಅಮರ್ ಎಸ್. ದ್ವೇಷಪೂರಿತವಾಗಿ ನೌಕರರನ್ನು ಬೆದರಿಸಿ ಅವರ ಧ್ವನಿಯನ್ನು ಅಡಗಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ನೌಕರರು ಹಾಗೂ ಅವರ ಪ್ರತಿನಿಧಿ ಕೆ.ಎಸ್. ಮಂಜುಳಾ ಅವರ ಬ್ಯಾಂಕ್ ಖಾತೆಗಳನ್ನು ಅಕ್ರಮವಾಗಿ ಫ್ರೀಜ್ ಮಾಡಿಸಿರುವುದರಿಂದ ಅವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.
ಈ ಸಂಬಂಧ ‘ಡಿ’ ದರ್ಜೆ ನೌಕರರ ನಿಯೋಗ ಹಾಗೂ ಲಿಸಾ ಫೌಂಡೇಶನ್ನ ಪ್ರತಿನಿಧಿಗಳು ಜಿಲ್ಲಾ ಆಸ್ಪತ್ರೆಯ ಡೀನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ವಿಷಯದ ಗಂಭೀರತೆಯನ್ನು ಅರಿತ ಡೀನ್ ಅವರು ಸಂಬಂಧಿತ ಗುತ್ತಿಗೆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸುವ ಪ್ರಕ್ರಿಯೆ ಆರಂಭಿಸಲು ಸೂಚನೆ ನೀಡಿರುವುದಾಗಿ ತಿಳಿಸಿದರು. ಜೊತೆಗೆ ಕಾರ್ಮಿಕರಿಗೆ ವಂಚನೆ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿರುವುದಾಗಿ ಹೇಳಿದರು.
ಇದೇ ವೇಳೆ, ಮೈಸೂರಿನ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಕಚೇರಿ 2026ರ ಜೂನ್ 11ರಂದು ಸಂಬಂಧಿತ ಸಂಸ್ಥೆಗೆ ನೋಟಿಸ್ ಜಾರಿಗೊಳಿಸಿದ್ದು, ಪಿಎಫ್ ಹಣ ಜಮಾ ಮಾಡದಿರುವುದನ್ನು ಗಂಭೀರ ಉಲ್ಲಂಘನೆಯಾಗಿ ಪರಿಗಣಿಸಿರುವುದಾಗಿ ಅವರು ತಿಳಿಸಿದರು.
ಲಿಸಾ ಫೌಂಡೇಶನ್ ಪ್ರಮುಖವಾಗಿ ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದು, 35 ‘ಡಿ’ ದರ್ಜೆ ನೌಕರರ ಪ್ರತಿಯೊಬ್ಬರ ಪಿಎಫ್ ಖಾತೆಗೆ ಬಾಕಿ ಇರುವ ಸುಮಾರು ₹70 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಬಡ್ಡಿ ಹಾಗೂ ದಂಡ ಸಹಿತ ತಕ್ಷಣ ಜಮಾ ಮಾಡಬೇಕು. ಅಕ್ರಮವಾಗಿ ಫ್ರೀಜ್ ಮಾಡಿರುವ ನೌಕರರ ಹಾಗೂ ಕೆ.ಎಸ್. ಮಂಜುಳಾ ಅವರ ಬ್ಯಾಂಕ್ ಖಾತೆಗಳನ್ನು ಕೂಡಲೇ ಚಾಲನೆಗೆ ತರಬೇಕು. ಅಲ್ಲದೆ ಆರೋಪಿತ ಗುತ್ತಿಗೆದಾರರ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಿಮಿನಲ್ ಕ್ರಮ ಕೈಗೊಂಡು ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನೌಕರರ ಪ್ರತಿನಿಧಿ ಕೆ.ಎಸ್. ಮಂಜುಳಾ, ಸಂದೀಪ್, ಕುಮಾರ್ ನಾಯ್ಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು
PF fraud of outsourced employees in district hospital
Leave a comment