ಚಿಕ್ಕಮಗಳೂರು: ಕಾಫಿನಾಡಿನ ತುಡುಕೂರು ಗ್ರಾಮದಲ್ಲಿರುವ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯಲ್ಲಿ ತಡರಾತ್ರಿ ನಡೆದ ಮಕ್ಕಳ ಗಲಾಟೆ ಸದ್ಯ ದೊಡ್ಡ ಆತಂಕಕ್ಕೆ ಕಾರಣವಾಗಿದೆ.
ಶಾಲೆಯಲ್ಲಿ ಮಕ್ಕಳ ನಡುವೆ ಉಂಟಾದ ಜಗಳದಿಂದ ತೀವ್ರ ಭಯಗೊಂಡ ಉತ್ತರ ಕರ್ನಾಟಕ ಮೂಲದ ನಾಲ್ವರು ಪುಟ್ಟ ಮಕ್ಕಳು, ಅಲ್ಲಿಂದ ಹೇಗಾದರೂ ಮಾಡಿ ತಪ್ಪಿಸಿಕೊಂಡು ತಮ್ಮ ಊರಿಗೆ ಸೇರಲು ತೀರ್ಮಾನಿಸಿ ಇಂದು ಬೆಳ್ಳಂಬೆಳಗ್ಗೆಯೇ ವಸತಿ ಶಾಲೆಯಿಂದ ಯಾರಿಗೂ ತಿಳಿಸದಂತೆ ಹೊರಬಂದು ಚಿಕ್ಕಮಗಳೂರು ರಸ್ತೆಯ ಕಡೆಗೆ ಹೆಜ್ಜೆ ಹಾಕಿದ್ದಾರೆ.
ವಸತಿ ಶಾಲೆಯಿಂದ ಸುಮಾರು 2 ಕಿಲೋಮೀಟರ್ ದೂರದವರೆಗೆ ಈ ಪುಟ್ಟ ಮಕ್ಕಳು ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಸ್ಥಳೀಯ ಗ್ರಾಮಸ್ಥರಿಗೆ ತಕ್ಷಣವೇ ಅನುಮಾನ ಮೂಡಿದೆ.
ಮಕ್ಕಳನ್ನು ತಡೆದು ಪ್ರೀತಿಯಿಂದ ವಿಚಾರಿಸಿದಾಗ, ಶಾಲೆಯಿಂದ ಪರಾರಿಯಾಗಲು ಯತ್ನಿಸುತ್ತಿದ್ದ ಅಸಲಿ ವಿಷಯ ಬೆಳಕಿಗೆ ಬಂದಿದೆ. ತದನಂತರ ಗ್ರಾಮಸ್ಥರು ಆ ನಾಲ್ವರೂ ಮಕ್ಕಳನ್ನು ಅತ್ಯಂತ ಸುರಕ್ಷಿತವಾಗಿ ಮರಳಿ ವಸತಿ ಶಾಲೆಗೆ ತಲುಪಿಸುವ ಮೂಲಕ ಎದುರಾಗಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.
ಈ ಇಡೀ ಘಟನೆಯು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಈ ವಸತಿ ಶಾಲೆಯ ಅಧಿಕಾರಿಗಳು, ವಾರ್ಡನ್ ಹಾಗೂ ಸಿಬ್ಬಂದಿಯ ಬೇಜವಾಬ್ದಾರಿತನವನ್ನು ಎತ್ತಿ ತೋರಿಸಿದೆ. ರಾತ್ರಿ ಮಕ್ಕಳ ನಡುವೆ ಗಲಾಟೆಯಾಗಿ, ಮುಂಜಾನೆ ನಾಲ್ವರು ಮಕ್ಕಳು ಶಾಲೆಯ ಆವರಣ ಬಿಟ್ಟು ಅಷ್ಟು ದೂರ ಹೋದರೂ ವಾರ್ಡನ್ ಸೇರಿದಂತೆ ಯಾರೊಬ್ಬರ ಗಮನಕ್ಕೂ ಬಾರದಿರುವುದು ಆತಂಕಕ್ಕೆ ಕಾರಣವಾಗಿದ್ದು, ಆಡಳಿತ ಮಂಡಳಿಯ ಸಂಪೂರ್ಣ ನಿರ್ಲಕ್ಷ್ಯ ಎದ್ದು ತೋರಿಸಿದೆ.
Children who ran away from residential school…?
Leave a comment