ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.
ಸಾವಯವ ರೈತರ ಬಳಗದಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಸಾವಯವ ಕೃಷಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿ ಕೃಷಿ ಬೇಕಾದ ತನ್ನದೇ ಆದ ಪೋಷಕಾಂಶಗಳನ್ನು ಮಣ್ಣು ಹೊಂದಿತ್ತು. ಪ್ರಾಣಿ, ಪಕ್ಷಿಗಳು ಮತ್ತು ಜಾನುವಾರುಗಳ ಕೃಷಿಯ ಅವಿಭಾಜ್ಯ ಅಂಗವಾಗಿದ್ದವು. ಈಗ ಅವುಗಳಿಂದ ರೈತರು ಕ್ರಮೇಣ ದೂರವಾಗುತ್ತಿದ್ದಾರೆ. ಮಣ್ಣನ್ನು ಪೋಷಣೆ ಮಾಡುವ ಬದಲು ಶೋಷಣೆ ಮಾಡಲಾಗುತ್ತಿದೆ. ರಾಸಾಯನಿಕ ಗೊಬ್ಬರ ಬಳಕೆ ಹೆಚ್ಚಳದಿಂದ ಮಣ್ಣು ರೋಗಯುಕ್ತವಾಗಿದೆ. ಅದನ್ನು ಮತ್ತೆ ಆರೋಗ್ಯಯುಕ್ತ ಮಾಡಬೇಕಾಗಿದೆ ಎಂದರು.
ಸಾವಯವ ಕೃಷಿಯಲ್ಲಿ ಮಣ್ಣು, ಗೊಬ್ಬರ, ನೀರು ಮತ್ತು ಜೀವಾಣುಗಳು ಸದೃಢವಾಗಿದ್ದರೆ ಬೆಳೆ ಸಮೃದ್ದವಾಗಿ ಬರಲಿದೆ. ರಾಸಾಯನಿಕದಿಂದ ಬರಡಾಗಿರುವ ಮಣ್ಣಿಗೆ ಮತ್ತೊಂದು ಬಾರಿ ಜೀವ ತುಂಬುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಮೊದಲನೆಯದಾಗಿ ಮಣ್ಣಿಗೆ ಉಪಚಾರ ಮಾಡುವ ಅಗತ್ಯವಿದ್ದು, ಬೆಳೆಗೆ ಉಪಚಾರ ಮಾಡಿ ಪ್ರಯೋಜನವಿಲ್ಲ. ಮಣ್ಣಿಗೆ ಬೇಕಾದ ಜೀವಾಣುಗಳನ್ನು ಹೆಚ್ಚಿಸುವ ಕೆಲಸ ಆಗಬೇಕಿದೆ. ಆ ಮೂಲಕ ಬಡವಾಗಿರುವ ಮಣ್ಣನ್ನು ಮತ್ತೆ ಸಿರಿವಂತಗೊಳಿಸಬೇಕಾಗಿದೆ ಎಂದರು.
ರೈತರೇ ತಯಾರಿಸಬಹುದಾದ ರಂಜಕ, ಯೂರಿಯಾ, ಪೊಟ್ಯಾಷಿಯಂ, ಗಂಧಕ, ಸಾರಜನಕದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಸ್ವಾಮೀಜಿ ವಿವರಿಸಿದರು.
ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಪೀಠದ ನಿಶ್ಚಲಾನಂದನಾಥಸ್ವಾಮೀಜಿ ಮಾತನಾಡಿ, ‘ರಾಸಾಯನಿಕ ಗೊಬ್ಬರ ಬಳಕೆಯಿಂದ ಆಗುತ್ತಿರುವ ಅನಾಹುತಗಳನ್ನು ರೈತರು ನಿಧಾನಕ್ಕೆ ಅರಿಯುತ್ತಿದ್ದಾರೆ. ಮಂಡ್ಯ ಜಿಲ್ಲೆಯ ರೈತರು ಸಾವಯವ ಕೃಷಿ ಕಡೆ ಹೊರಳುತ್ತಿದ್ದಾರೆ. ಸಾವಯವ ಕೃಷಿಯಿಂದ ಉತ್ಪಾದನಾ ವೆಚ್ಚ ಕಡಿಮೆಯಾಗಲಿದ್ದು, ಗುಣಮಟ್ಟದ ಆಹಾರ ಉತ್ಪಾದನೆ ಸಾಧ್ಯ. ಇದಕ್ಕೆ ಪೂರಕವಾಗಿ 300 ದೇಶಿಯ ಹಸುಗಳನ್ನು ಹಾಸನ, ಮಂಡ್ಯ ಜಿಲ್ಲೆಯ ರೈತರಿಗೆ ಮಠದಿಂದ ನೀಡಲಾಗಿದೆ’ ಎಂದು ಹೇಳಿದರು.
ಸಾವಯವ ರೈತರ ಬಳಗದ ಚಂದ್ರಶೇಖರ ನಾರಣಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ. ಮಂಜೇಗೌಡ, ಜಂಟಿ ಕೃಷಿ ನಿರ್ದೇಶಕ ತಿರುಮಲೇಶ್, ನಗರಸಭೆ ಅಧ್ಯಕ್ಷೆ ಭವ್ಯಾ ಮಂಜುನಾಥ್ ಭಾಗವಹಿಸಿದ್ದರು.
It is essential to maintain soil fertility which increases microbial activity.
Leave a comment