ಚಿಕ್ಕಮಗಳೂರು : ಸಂಘಟನೆ ವಿರೋಧಿ ಚಟುವಟಿಕೆ ನಡೆಸಿದ ಆರೋಪದಡಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪ್ರಾಥಮಿಕ ಸದಸ್ಯತ್ವದಿಂದ ಡಿ.ರಾಮೇಗೌಡ, ವೈ.ಸಿ.ಸುನೀಲ್ಕುಮಾರ್ ಮತ್ತು ಬಿ.ಯು.ಪರ್ವತೇಗೌಡ ಅವರನ್ನು ಉಚ್ಚಾಟಿಸಿ ರಾಜ್ಯ ಸಮಿತಿ ಆದೇಶಿಸಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್ ತಿಳಿಸಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಘದಲ್ಲಿದ್ದುಕೊಂಡೇ ಕೆಲವರು ಸಂಘಟನೆ ವಿರೋಧಿ ಚಟುವಟಿಕೆ ನಡೆಸುತ್ತಾ ಬರುತ್ತಿರುವುದನ್ನು ರಾಜ್ಯ ಸಮಿತಿ ಗಮನಿಸಿದೆ ಎಂದರು.
ಅಧಿಕೃತ ಜಿಲ್ಲಾ ಮತ್ತು ತಾಲೂಕು ಶಾಖೆಗಳು ಸಂಘಟನೆಯ ನಿಯಮಾವಳಿಗೆ ಅನುಗುಣವಾಗಿ ಕಾರ್ಯಚಟುವಟಿಕೆ ನಡೆಸುತ್ತಿದ್ದರೂ ಉದ್ದೇಶಪೂರ್ವಕವಾಗಿ ಸಂಘಟನೆಯ ಚಟುವಟಿಕೆಗಳಿಗೆ ಅಡ್ಡಿಪಡಿಸುವುದು ಹಾಗೂ ವೈಯಕ್ತಿಕ ತೇಜೋವಧೆ ಮಾಡುವ ಉದ್ದೇಶದಿಂದ ವಾಟ್ಸಾಪ್ ಗ್ರೂಪ್ ಗಳಿಗೆ ಸಂಘಟನೆ ಮೇಲೆ ತಪ್ಪು ಅಭಿಪ್ರಾಯ ಬರುವಂತೆ ಗೊಂದಲ ಸೃಷ್ಟಿಸಿ ಸಂಘಟನೆಯ ಘನತೆಗೆ ಚ್ಯುತಿ ಬರುವಂತೆ ನಡೆದು ಕೊಂಡಿದ್ದಾರೆ.
ರಾಜ್ಯ ಸಮಿತಿ ಇವರಿಗೆ ಅನೇಕ ಬಾರಿ ಎಚ್ಚರಿಕೆ ಕೊಟ್ಟಿದ್ದರೂ, ರಾಜ್ಯ ಅಧ್ಯಕ್ಷರು, ಪದಾಧಿ ಕಾರಿಗಳು ಸಭೆ ನಡೆಸಿ ಸಂಘದ ಶಿಸ್ತನ್ನು ಉಲ್ಲಂಘಿಸದಂತೆ ತಿಳಿವಳಿಕೆ ನೀಡಿದ್ದರೂ ಸಹ ಎಲ್ಲ ಸಲಹೆಗಳನ್ನು ಗಾಳಿಗೆ ತೂರಿ ಸ್ವೇಚ್ಛೆಯಿಂದ ನಡೆದುಕೊಳ್ಳುತ್ತಿರುವುದು ರಾಜ್ಯ ಸಂಘದ ಗಮನಕ್ಕೆ ಬಂದಿದೆ ಎಂದು ಹೇಳಿದರು.
ಜಿಲ್ಲೆ ಮತ್ತು ತಾಲೂಕು ಸಮಿತಿಗಳು ಅಸ್ತಿತ್ವದಲ್ಲಿದ್ದರೂ ಜಿಲ್ಲಾ ಸಮಿತಿಯೊಂದಿಗೆ ಸರಿಯಾಗಿ ಸ್ಪಂದಿಸದೆ ಹೊಸದಾಗಿ ಜಿಲ್ಲೆ ಮತ್ತು ತಾಲೂಕು ಸಮಿತಿಗಳನ್ನು ಇತ್ತೀಚೆಗೆ ರಚಿಸಿಕೊಂಡಿರುವುದು ರಾಜ್ಯ ಸಮಿತಿ ಗಮನಕ್ಕೆ ಬಂದಿದೆ. ಇಂತಹ ವ್ಯಕ್ತಿಗಳಿಂದ ಸಂಘಟನೆಗೆ ಕೆಟ್ಟ ಹೆಸರು ಬರುವುದು ಖಚಿತ ಎಂದು ಪರಿಗಣಿಸಿ ಭಿನ್ನಮತೀಯ ಚಟುವಟಿಕೆ ನಡೆಸುತ್ತಾ ಸಂಘಟನೆಯಲ್ಲಿ ಒಡಕುಂಟು ಮಾಡಲು ತೊಡಗಿಸಿಕೊಂಡಿದ್ದ ಡಿ.ರಾಮೇಗೌಡ, ವೈ.ಸಿ.ಸುನೀಲ್ಕುಮಾರ್, ಬಿ.ಯು.ಪರ್ವತೇಗೌಡ ಅವರನ್ನು ಸಂಘಟನೆಯ ಪ್ರಾಥಮಿಕ ಸದಸ್ಯತ್ವದಿಂದ ರಾಜ್ಯ ಸಮಿತಿ ಉಚ್ಛಾಟಿಸಿದೆ ಎಂದು ಹೇಳಿದರು.
ಇನ್ನು ಮುಂದೆ ಸಂಘದಿಂದ ಉಚ್ಛಾಟಿತರಾದವರಿಗೂ ಕರ್ನಾಟಕ ರಾಜ್ಯ ರೈತ ಸಂಘಕ್ಕೂ ಯಾವುದೇ ಸಂಬಂಧವಿಲ್ಲ. ಉಚ್ಛಾಟಿತರು ನಮ್ಮ ಸಂಘಟನೆಯ ಹೆಸರನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡಿಕೊಳ್ಳಬಾರದು ಹಾಗೂ ಸಂಘದ ಚಿನ್ಹೆ ಮತ್ತು ಲೆಟರ್ ಹೆಡ್ ಬಳಸಿಕೊಂಡು ದುರುಪಯೋಗಪಡಿಸಿಕೊಳ್ಳುವುದು ಕಂಡುಬಂದಲ್ಲಿ ಅವರು ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ ಎಂದು ರಾಜ್ಯ ಸಮಿತಿ ಎಚ್ಚರಿಸಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಮಾಜಿ ಅಧ್ಯಕ್ಷ ಗುರುಶಾಂತಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಬಿ.ಚಂದ್ರಶೇಖರ್, ಮುಖಂಡರಾದ ಎಂ.ಸಿ.ಬಸವರಾಜು,ದೇವರಾಜು, ಭದ್ರೇಗೌಡ, ಸಿದ್ದೇಗೌಡ ಮತ್ತಿತರರಿದ್ದರು.
Three members suspended for anti-organizational activities
Leave a comment