ಚಿಕ್ಕಮಗಳೂರು: ಸುಪ್ರಿಂ ಕೋರ್ಟ್ ನಿರ್ದೇಶನದ ಮೇರೆಗೆ ನಗರಸಭೆ ವತಿಯಿಂದ ನಾಲ್ಕು ಹಂತದಲ್ಲಿ ಕಸ ವಿಂಗಡಣೆ ಮಾಡಿ ಕೊಡುವಂತೆ ನಾಗರೀಕರಿಗೆ ಏ.೧ ರಿಂದ ಶಾಸನಬದ್ದ ಜಾಗೃತಿ ಮೂಡಿಸಲಾಗುತ್ತಿದೆ ಎಂದು ನಗರಸಭಾ ಪೌರಾ ಯುಕ್ತ ಬಿ.ಸಿ. ಬಸವರಾಜು ತಿಳಿಸಿದರು.
ಅವರು ಮಂಗಳವಾರ ನಗರಸಭೆಯಲ್ಲಿ ಏರ್ಪಡಿಸಲಾಗಿದ್ದ ಘನತ್ಯಾಜ್ಯ ವಿಲೇವಾರಿ ನಿಯಮ -೨೦೨೬ರ ಪರಿಣಾಮಕಾರಿ ಅನುಷ್ಟಾನ ಕುರಿತು ಬೃಹತ್ ತ್ಯಾಜ್ಯ ಉತ್ಪಾದಕರಿಗೆ, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ಬೇಕರಿ ಮತ್ತು ಬೀದಿ ಬದಿ ಆಹಾರ ತಯಾರಕರಿಗೆ ಹಾಗೂ ಮಾರಾಟಗಾರರಿಗೆ ತ್ಯಾಜ್ಯ ನಿರ್ವಹಣೆಯ ಬಗ್ಗೆ ಮತ್ತು ಆಹಾರದ ಗುಣಮಟ್ಟ ಕುರಿತು ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಸ ವಿಲೇವಾರಿ ಕಾರ್ಯವನ್ನು ನಗರಸಭೆ ಸಿಬ್ಬಂದಿ ವರ್ಗದವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಎಲ್ಲೆಂದರಲ್ಲಿ ಕಸ ಹಾಕುತ್ತಿರುವ ಬಗ್ಗೆ ಕ್ರಮ ವಹಿಸಬೇಕು. ಕಸ ನಿರ್ವಹಣೆಯನ್ನು ಶಾಶ್ವತವಾಗಿ ನಿರ್ವಹಿಸುವ ಮೂಲಕ ನಗರದ ಸೌಂದರ್ಯ ಹೆಚ್ಚಿಸಬೇಕೆಂದು ಸೂಚಿಸಿದರು.
ಭೂಪಾಲ್ ನಗರದ ಮಾದರಿಯಲ್ಲಿ ನಮ್ಮ ನಗರವನ್ನು ಸ್ವಚ್ಚ ಕಸ ಮುಕ್ತ ಗೊಳಿಸಲು ಹಾಗೂ ಹೈಟೆಕ್ ನಗರವನ್ನಾಗಿಸಲು ಶ್ರಮಿಸಬೇಕು. ನಾವೇ ಕಸ ಉತ್ಪತ್ತಿಯಾಗಿಸಿ ಅದರ ಮೇಲೆ ಓಡಾಡುವುದನ್ನು ಕೈಬಿಟ್ಟು ನಾಗರೀಕರಲ್ಲಿ ಜಾಗೃತಿ ಮೂಡಿಸಬೇಕೆಂದು ಹೇಳಿದರು.
ಕಸ ವಿಂಗಡಣೆ ಕಾರ್ಯವನ್ನು ಹಾಸ್ಟೆಲ್, ಮನೆ, ಹೋಟೆಲ್, ಕಲ್ಯಾಣ ಮಂಟಪಗಳಲ್ಲಿ ಖಂಡಿತಾ ವಿಂಗಡಣೆ ಮಾಡಬೇಕು ಇಲ್ಲದಿದ್ದರೆ ನಗರಸಭೆಯಿಂದ ವಿದ್ಯುತ್, ಕುಡಿಯುವ ನೀರು, ಯುಜಿಡಿ ಸೇರಿದಂತೆ ಮೂಲ ಸೌಕರ್ಯಗಳನ್ನು ಕಡಿತಗೊಳಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.
ಜಿಲ್ಲೆ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದ್ದು, ಪ್ರವಾಸಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ರಾಜ್ಯದಲ್ಲೆ ಮಾದರಿ ನಗರವಾಗಬೇಕು. ಜೊತೆಗೆ ಮೊದಲ ಸ್ಥಾನಕ್ಕೆ ತರುವಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಕರೆ ನೀಡಿದರು.
ಜುಲೈ ೧ ರಿಂದ ಸುಪ್ರಿಂ ಕೋರ್ಟ್ ಆದೇಶದಂತೆ ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ನಗರಸಭೆ ಮುಂದಾಗಿದ್ದು, ಘರ್ಷಣೆಗೆ ಆಸ್ಪದ ಕೊಡದೆ ಕರ್ತವ್ಯ ನಿರ್ವಹಿಸಬೇಕು. ಹೊಸದಾಗಿ ೧೦ ಆಟೋ ಟಿಪ್ಪರ್ ಖರೀದಿಸಲಾಗುತ್ತಿದ್ದು, ಇನ್ನೊಂದು ತಿಂಗಳಲ್ಲಿ ನಗರಸಭೆಗೆ ಬಂದರೆ ಸ್ವಚ್ಚತೆ ಕಾರ್ಯ ಸುಧಾರಣೆಯಾಗಲಿದೆ ಎಂದರು.
ನಗರದ ಸಾರ್ವಜನಿಕರಿಂದ ನೀರಿನ ತೆರಿಗೆ ೯ ಕೋಟಿ ರೂ. ಬಾಕಿ ಇದ್ದು, ಕೂಡಲೇ ನಗರಸಭೆಗೆ ತೆರಿಗೆ ಪಾವತಿಸುವಂತೆ ವಿನಂತಿಸಿದ ಅವರು ಪಾವತಿಸದೆ ವಿಳಂಭ ತೋರಿದರೆ ನಗರಸಭೆ ಸಿಬ್ಬಂದಿ ತಂಡ ಮನೆ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ನಲ್ಲಿ ಸಂಪರ್ಕ ಕಡಿತಗೊಳಿಸುವುದಾಗಿ ತಿಳಿಸಿದರು.
ಪರಿಸರ ಅಭಿಯಂತರರಾದ ವೆಂಕಟೇಶ್ ಮಾತನಾಡಿ ಸುಪ್ರಿಂ ಕೋರ್ಟ್ ಆದೇಶದಂತೆ ಹಸಿ, ಒಣ, ನೈರ್ಮಲ್ಯ ತ್ಯಾಜ್ಯ, ವಿಶೇಷ ಕಾಳಜಿ ತ್ಯಾಜ್ಯ ಈ ರೀತಿ ನಾಲ್ಕು ಹಂತದಲ್ಲಿ ಕಸವನ್ನು ವಿಂಗಡಿಸಿ ಸಾರ್ವಜನಿಕರು ಕಸದ ಗಾಡಿಗೆ ನೀಡುವ ಮೂಲಕ ನಗರದ ಸೌಂದರ್ಯವನ್ನು ಹೆಚ್ಚಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.
ಫುಡ್ಸೇಫ್ಟಿ ರಾಜ್ಯ ಮುಖ್ಯಸ್ಥರಾದ ಅಭಿಲಾಷ ಮಾತನಾಡಿ ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ವಿತರಿಸಲಾಗುತ್ತಿದೆ, ಆಹಾರ ತಯಾರಿಕೆ ಮಾಡುವವರು ಕಡ್ಡಾಯವಾಗಿ ಪ್ರಮಾಣ ಪತ್ರ ಪಡೆಯಬೇಕು ಎಂದ ಅವರು ಗ್ರಾಹಕರಿಗೆ ಗುಣಮಟ್ಟದ ಆಹಾರ ನೀಡುವುದರ ಜೊತೆಗೆ ಸ್ವಚ್ಚತೆಗೆ ಸಹಕರಿಸಬೇಕು, ಆಹಾರವನ್ನು ಕಲಬೆರಿಕೆ ಆಗದಂತೆ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಜಿಲ್ಲೆಯ ಎಲ್ಲಾ ಆಹಾರ ತಯಾರಿಕರಿಗೆ ಆಹಾರ ಸುರಕ್ಷತೆ ತರಬೇತಿ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಪ್ರತಿಯೋಬ್ಬರು ನೋಂದಾವಣಿ ಕಡ್ಡಾಯವಾಗಿ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪರಿಸರ ಅಭಿಯಂತರರಾದ ವೆಂಕಟೇಶ್, ಆರೋಗ್ಯ ನಿರೀಕ್ಷಕರಾದ ಈಶ್ವರ್, ರಂಗಪ್ಪ, ನಾಗಪ್ಪ, ಚೇತನ್ ಸ್ವಾಮಿ, ಯುವರಾಜ್, ಸ್ವಾಮಿ ಉಪಸ್ಥಿತರಿದ್ದರು. ಆರೋಗ್ಯ ನಿರೀಕ್ಷಕ ವೆಂಕಟೇಶ್ ಸ್ವಾಗತಿಸಿ ವಂದಿಸಿದರು.
Statutory awareness for waste segregation
Leave a comment