ಚಿಕ್ಕಮಗಳೂರು: ರಸ್ತೆ ಕಾಮಗಾರಿ ವಿಚಾರವಾಗಿ ಆರಂಭವಾದ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಬೀದಿ ಕಾಳಗವು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ರಾಜಕೀಯ ಸಮರವಾಗಿ ಮಾರ್ಪಟ್ಟಿದೆ.
ನಗರ ಠಾಣೆಯಲ್ಲಿ ದೂರು-ಪ್ರತಿದೂರುಗಳ ಸ್ಪರ್ಧೆಯೇ ಏರ್ಪಟ್ಟಿದ್ದು, ಇದುವರೆಗೆ ಒಟ್ಟು 6 ಪ್ರಕರಣಗಳು ದಾಖಲಾಗಿವೆ. ಈ ಘಟನೆಯು ನಗರ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಉಭಯ ಪಕ್ಷಗಳ ನಡುವಿನ ಆರೋಪ-ಪ್ರತ್ಯಾರೋಪಗಳು ಮತ್ತಷ್ಟು ಉಗ್ರರೂಪ ಪಡೆದುಕೊಂಡಿವೆ.
ದಾಖಲಾಗಿರುವ ಪ್ರಕರಣಗಳ ಪೈಕಿ ಕಾಂಗ್ರೆಸ್, ಎಸ್ಡಿಪಿಐ ಹಾಗೂ ಮುಸ್ಲಿಂ ಸಂಘಟನೆಗಳಿಂದ 4 ದೂರುಗಳು ಸಲ್ಲಿಕೆಯಾಗಿದ್ದರೆ, ಬಿಜೆಪಿಯಿಂದ ಒಂದು ದೂರು ದಾಖಲಾಗಿದೆ. ಇದರೊಂದಿಗೆ ಪೊಲೀಸರು ಕೂಡ ಒಂದು ಸುಮೋಟೊ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಸದ್ಯಕ್ಕೆ ಪೊಲೀಸರ ಸುಮೋಟೊ ಪ್ರಕರಣ ಹಾಗೂ ಮುದಾಸಿರ್ ಪಾಷ ನೀಡಿದ ದೂರಿನ ಮೇರೆಗೆ ಮಾತ್ರ ಎಫ್ಐಆರ್ ದಾಖಲಿಸಲಾಗಿದೆ. ಧರ್ಮ ನಿಂದನೆ ಆರೋಪದ ಅಡಿಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ವಿರುದ್ಧ ಮುಸ್ಲಿಂ ಮುಖಂಡರು ನೀಡಿದ ದೂರಿನನ್ವಯ ಎಫ್ಐಆರ್ ದಾಖಲಿಸಲಾಗಿದೆ.
ಮತ್ತೊಂದೆಡೆ, ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಕೆ.ಪಿ. ವೆಂಕಟೇಶ್ ಅವರು ಕಾಂಗ್ರೆಸ್ ನಗರಸಭೆಯ ಸದಸ್ಯರಾದ ಪರಮೇಶ್ ರಾಜ್ ಅರಸ್, ಮುನೀರ್ ಹಾಗೂ ಮುಖಂಡರಾದ ಕಲಂದರ್ ಮತ್ತು ಜಾವಿದ್ ವಿರುದ್ಧ ಜಾತಿ ನಿಂದನೆ ದೂರು ನೀಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ನಿಂದಲೂ ಪ್ರತಿದೂರು ಸಲ್ಲಿಕೆಯಾಗಿದ್ದು, ಕುರವಂಗಿ ರಾಜೇಶ್ ಎಂಬುವವರು ಬಿಜೆಪಿ ಕಾರ್ಯಕರ್ತರ ವಿರುದ್ಧ ಜಾತಿ ನಿಂದನೆ ಆರೋಪ ಮಾಡಿದ್ದಾರೆ. ಇತ್ತೀಚೆಗೆ ನಗರದ ರಾಂಪುರ ರಸ್ತೆಯಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಕಾಮಗಾರಿ ವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ಉಂಟಾದ ಗಲಾಟೆಯು, ಸದ್ಯ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಕಾನೂನು ಮತ್ತು ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ.
Road construction observation case turns into political battle
Leave a comment