ಚಿಕ್ಕಮಗಳೂರು: ಅಂಗಾಂಗ ದಾನ ಮಾಡಿ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿಯಾಗಿದೆ ಎಂದು ನಗರಸಭೆ ಪೌರಾಯುಕ್ತ ಬಸವರಾಜ್ ತಿಳಿಸಿದರು.
ಅವರು ಇಂದು ವಿಶ್ವ ಅಂಗಾಂಗ ದಾನ ದಿನಾಚರಣೆ ಅಂಗವಾಗಿ ಸಹನಾ ಜೆ ರೂಬೆನ್ ಸಮಾಜ ಸೇವಾ ಟ್ರಸ್ಟ್ ಎ ಐ ಟಿ ಸರ್ಕಲ್ ಬಳಿ ಇರುವ ಸಹ್ಯಾದ್ರಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಅಂಗಾಂಗ ದಾನ ದಿನಾಚರಣೆ 2026 ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಳೆದ ಮೂರು ವರ್ಷಗಳ ಹಿಂದೆ ಬ್ರೈನ್ ಟ್ಯೂಮರ್ ನಿಂದ ಮರಣ ಹೊಂದಿದ ಸಹನಾ ರವರ ದೇಹದ ಅಂಗಾಂಗಗಳನ್ನು ಅವರ ಪತಿ ದಾನ ಮಾಡುವ ಮೂಲಕ ಈ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರು ದಾನ ಮಾಡಿದ ಅಂಗಾಂಗಗಳಿಂದ ಇಂದು ಅನೇಕ ಜನ ಜೀವದಿಂದ ಬದುಕುಳಿದಿದ್ದಾರೆ ಎಂದರು.
ಯುವಜನರಾದ ನೀವು ನಿಮ್ಮ ಜೀವಿತ ಕಾಲದಲ್ಲಿ ದುಶ್ಚಟಗಳಿಗೆ ಬಲಿಯಾಗದೆ ಈ ಸಮಾಜದ ಭಾಗವಾಗಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ರೂಬೆನ್ ಮೊಸಸ್ ಹಾಗೂ ಅವರ ತಂಡ ಕರೋನ ಸಂದರ್ಭದಲ್ಲಿ ಮಾಡಿದ ಸೇವೆಯನ್ನು ಯಾರೂ ಮರೆಯುವಂತಿಲ್ಲ. ಈಗಲೂ ಅವರು ನಿರಾಶ್ರಿತರು, ನಿರ್ಗತಿಕರು, ಭಿಕ್ಷುಕರ ಸೇವೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಸಹ್ಯಾದ್ರಿ ಪ್ಯಾರಾ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಕಾಲೇಜಿನ ಅಧ್ಯಕ್ಷೆ ನಳೀನಾ ಡಿ ಸಾ ಮಾತನಾಡಿ, ಸಮಾಜ ಸೇವೆಗೆ ಹೆಸರು ವಾಸಿಯಾಗಿರುವ ರೂಬಿಯವರು ಅನೇಕ ವರ್ಷಗಳಿಂದ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಅಲ್ಲದೆ ತಮ್ಮ ಪತ್ನಿಯ ಅಂಗಾಂಗಗಳನ್ನು ಸಹ ದಾನ ಮಾಡಿರುವುದು ಶ್ಲಾಘನೀಯ ಎಂದರು.
ಯುವಜನತೆ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು.ಪರಿಸರ ಸಂರಕ್ಷಿಸುವ ಹೊಣೆ ನಿಮ್ಮದು ಸಾಧನೆ ಮಾಡುವ ಗುರಿ, ನಿರೀಕ್ಷೆ ನಿಮ್ಮಲ್ಲಿರಬೇಕೆಂದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರೂಬೆನ್ ಮೊಸಸ್ ಮಾತನಾಡಿ, ಕಣ್ಣೀರು ಪ್ರಾಣ ಉಳಿಸುವುದಿಲ್ಲ ರಕ್ತ ಪ್ರಾಣ ಉಳಿಸುತ್ತದೆ ಎಂಬ ಮಾತಿನಂತೆ ಬಾಯಿಯ ಮಾತು ಕೇವಲ ತಿಯರಿ ಇದ್ದಂತೆ ಕೈಯಿಂದ ಮಾಡುವ ಕೆಲಸ ಪ್ರಾಕ್ಟಿಕಲ್ ಇದ್ದಂತೆ ಈ ಸಮಾಜಕ್ಕೆ ಬೇಕಾಗಿರುವುದು ತಿಯರಿಯಲ್ಲ ಪ್ರಾಕ್ಟಿಕಲ್ ಸೇವೆ ಎಂದು ತಿಳಿಸಿದರು.
ಬೈಬಲ್ ಹೇಳುತ್ತದೆ ನೀವು ದುಡಿದು ಬಲವಿಲ್ಲದವರಿಗೆ ಉಪಕಾರ ಮಾಡಬೇಕು ಮತ್ತು ತೆಗೆದುಕೊಳ್ಳುವುದಕ್ಕಿಂತ ಕೊಡುವುದೇ ಹೆಚ್ಚಿನ ಭಾಗ್ಯವೆಂದು ಆದರೆ ಸಮಾಜದಲ್ಲಿ ಬಹುತೇಕ ಜನರು ಸ್ವಾರ್ಥಕ್ಕಾಗಿ ದುಡಿಯುತ್ತಿದ್ದಾರೆ ಬಡವರ ಕಷ್ಟಗಳಿಗೆ ಸ್ಪಂದಿಸುವವರು ಬಹಳ ಕಡಿಮೆ ಎಂದರು. ಯುವಜನತೆ ತಮ್ಮನ್ನು ಪ್ರೀತಿ ಮಾಡಿ ತಮಗೆ ಎಷ್ಟೇ ಕಷ್ಟವಿದ್ದರೂ ನಿಮಗೆ ತೋರಿಸದೆ ನಿಮ್ಮ ಅಗತ್ಯತೆಗಳನ್ನು ಪೂರೈಸುವ ನಿಮ್ಮ ತಂದೆ ತಾಯಿಗಳನ್ನು ಕೀಳಾಗಿ ಕಾಣಬೇಡಿ ವಯಸ್ಸಾದ ಕಾಲದಲ್ಲಿ ವೃದ್ಧಾಶ್ರಮಕ್ಕೆ ಹಾಕದೆ ನಿಮ್ಮನ್ನು ಸಾಕಿದಂತೆ ನೀವು ಅವರನ್ನು ಸಾಕಬೇಕು ಎಂದು ಮನವಿ ಮಾಡಿದರು.
ಅಂಗಾಂಗ ದಾನ ಎಂದರೆ ನಾವು ಸತ್ತ ನಂತರ ನಮ್ಮ ಅಂಗಾಂಗಗಳನ್ನು ದಾನ ಮಾಡುವ ಪ್ರಕ್ರಿಯೆ. ನಾವು ಸಾಯುವ ಮುನ್ನ ಮೆಡಿಕಲ್ ಕಾಲೇಜು ಅಥವಾ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಬೇಕು. ಕುಟುಂಬದವರ ಅನುಮತಿ ಇಲ್ಲದೆ ಅಂಗಾಂಗ ದಾನ ಮಾಡುವಂತಿಲ್ಲ. ಅಲ್ಲದೆ ನಮ್ಮ ಮರಣಾನಂತರ ನಮ್ಮ ದೇಹದ ಅಂಗಾಂಗಗಳು ದಾನ ಆಗಬೇಕಾದರೆ ನಾವು ದಾನ ಮಾಡುವ ಮಾಹಿತಿ ಮೊದಲೇ ಕುಟುಂಬದವರಿಗಿರಬೇಕು ಎಂದರು.
ಈ ಸಂದರ್ಭದಲ್ಲಿ ಸಹನಾ ಜೆ ರೂಬೆನ್ ಸಮಾಜ ಸೇವಾ ಟ್ರಸ್ಟ್ ನಾ ನಿರ್ದೇಶಕರಾದ ಪ್ರಮೀಳಾ, ಮಾರ್ಗರೇಟ್, ಸ್ನೇಹ, ಲತಾ, ರೇಮ ರೂಬೆನ್ ಉಪಸ್ಥಿತರಿದ್ದರು. ಕುಮಾರಿ ರೇಮ ರೂಬೆನ್ ರವರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮಕ್ಕೆ ಉಪ ಪ್ರಾಂಶುಪಾಲ ವಹೀದಾ ಸ್ವಾಗತಿಸಿ ವಂದಿಸಿದರು.
Organ donation Reuben Moses family is a model for society
Leave a comment