ಚಿಕ್ಕಮಗಳೂರು: ಪ್ರಸಿದ್ಧ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿಯ ಸಮೀಪದ ಸೀತಾಳಯ್ಯನಗಿರಿಯಲ್ಲಿ ಪ್ರವಾಸಿಗರನ್ನು ಕರೆದೊಯ್ಯುವ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಜೀಪ್ ಚಾಲಕರು ಪರಸ್ಪರ ಕೈಕೈ ಮಿಲಾಯಿಸಿ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ.
ವಾರಾಂತ್ಯದ ದಿನಗಳಲ್ಲಿ ಚಂದ್ರದ್ರೋಣ ಪರ್ವತ ಶ್ರೇಣಿಯ ಈ ಸುಂದರ ತಾಣಗಳಿಗೆ ಭೇಟಿ ನೀಡಲು ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಪ್ರಸ್ತುತ ಸೀತಾಳಯ್ಯನಗಿರಿಯಿಂದ ಮುಳ್ಳಯ್ಯನಗಿರಿ ಶಿಖರದವರೆಗೆ ಪ್ರವಾಸಿಗರ ಸ್ವಂತ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು,
ಅಲ್ಲಿಗೆ ತೆರಳುವವರು ಕಡ್ಡಾಯವಾಗಿ ಖಾಸಗಿ ಜೀಪ್ಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಇದೆ. ಇದೇ ಕಾರಣವನ್ನು ಬಂಡವಾಳ ಮಾಡಿಕೊಂಡಿರುವ ಕೆಲವು ಜೀಪ್ ಚಾಲಕರ ಉಪಟಳ ದಿನೇ ದಿನೇ ಮಿತಿಮೀರುತ್ತಿದ್ದು, ಸ್ಥಳದಲ್ಲಿ ಸುರಕ್ಷತೆಗಾಗಿ ಕರ್ತವ್ಯ ನಿರ್ವಹಿಸುವ ಪೊಲೀಸರು ಹಾಗೂ ಪ್ರವಾಸಿ ಮಿತ್ರ ಸಿಬ್ಬಂದಿಯೊಂದಿಗೂ ಅವರು ಪದೇ ಪದೇ ಅನುಚಿತವಾಗಿ ವರ್ತಿಸುತ್ತಿದ್ದಾರೆ.
ಈ ಗಲಾಟೆ ಮತ್ತು ಗೊಂದಲಗಳಿಂದಾಗಿ ದೂರದ ಊರುಗಳಿಂದ ನೆಮ್ಮದಿಯ ಕ್ಷಣಗಳನ್ನು ಕಳೆಯಲು ಬರುವ ಪ್ರವಾಸಿಗರು ತೀವ್ರ ಮುಜುಗರ ಹಾಗೂ ಆತಂಕ ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯು ತಕ್ಷಣವೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಪ್ರವಾಸಿಗರ ವಾಹನಗಳನ್ನೇ ನೇರವಾಗಿ ಮುಳ್ಳಯ್ಯನಗಿರಿವರೆಗೆ ಕೊಂಡೊಯ್ಯಲು ಪುನಃ ಅವಕಾಶ ಕಲ್ಪಿಸಿಕೊಡಬೇಕೆಂಬ ಬಲವಾದ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
Jeep drivers fight each other in Seethalaiyanagiri
Leave a comment