ಚಿಕ್ಕಮಗಳೂರು : ಅಂರ್ತಾಜಾತಿ ಪ್ರೇಮಿಗಳು ವಿವಾಹವಾಗಿ ರಕ್ಷಣೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮೆಟ್ಟಿಲೇರಿ ರುವ ಘಟನೆ ನಡೆದಿದೆ. ಅಜೇಯ್ ಹಾಗೂ ಶಾಲಿನಿ ಅಂರ್ತಾಜಾತಿ ಪ್ರೇಮಿಗಳಾಗಿದ್ದು, ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಮದುವೆಯಾಗಿ ರಕ್ಷಣೆ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|ವಿಕ್ರಮ್ ಅಮಟೆಯವರನ್ನು ಭೇಟಿಯಾಗಿದ್ದಾರೆ.
ದಲಿತ ಸಂಘರ್ಷ ಸಮಿತಿ ಮುಖಂಡ ಮರ್ಲೆ ಅಣ್ಣಯ್ಯ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿದ ಅಂರ್ತಾಜಾತಿ ಪ್ರೇಮಿಗಳು ದೇವಸ್ಥಾನದಲ್ಲಿ ಮದುವೆಯಾದ ನಂತರವೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಹಾರ ಬದಲಾಯಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಘಟನೆ ಸಂಬಂಧ ಮಾಹಿತಿ ಪಡೆದು ಸುದ್ದಿಗಾರರ ಜತೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|ವಿಕ್ರಮ್ ಅಮಟೆ ಅಜೇಯ್ ಮತ್ತು ಶಾಲಿನಿ ಅಂರ್ತಾಜಾತಿ ಪ್ರೇಮಿಗಳಾಗಿದ್ದು, ಕುಟುಂಬಸ್ಥರು ಮದುವೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಮದುವೆಯಾಗಿರುವುದಾಗಿ ತಿಳಿಸಿದ್ದಾರೆ.
ಇಬ್ಬರು ವಯಸ್ಕರಾಗಿದ್ದು, ಕಾನೂನಿನಲ್ಲಿ ಇವರ ವಿವಾಹಕ್ಕೆ ಮಾನ್ಯತೆ ಇದೆ. ಶಾಲಿನಿ ಭದ್ರಾವತಿ ಮೂಲದವರು ಅಜೇಯ್ ತರೀಕೆರೆ ತಾಲೂಕು ಲಕ್ಕವಳ್ಳಿ ಸಮೀಪದ ರಂಗೇನಹಳ್ಳಿಯವರಾಗಿದ್ದು ತಮಗೆ ರಕ್ಷಣೆಬೇಕೆಂದು ತಮ್ಮನ್ನು ಭೇಟಿಯಾಗಿದ್ದಾರೆ. ಅಜೇಯ್ ಪೋಷಕರು ಮತ್ತು ಶಾಲಿನಿಯವರ ಪೋಷಕರನ್ನು ಕರೆದು ಮಾತನಾಡುವಂತೆ ತರೀಕೆರೆ ಪೊಲೀಸ್ ಠಾಣೆಯ ಠಾಣಾ ಧಿಕಾರಿಗೆ ಸೂಚನೆ ನೀಡಲಾಗಿದೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ ಎಸ್ಪಿ ಹುಡುಗಿ ಪೋಷಕರು ತರೀಕೆರೆ ಪೊಲೀಸ್ ಠಾಣೆಗೆ ಬಂದಿದ್ದು, ಹುಡುಗ, ಹುಡುಗಿ ಠಾಣೆಗೆ ಬಾರದಿರುವ ಕಾರಣ ಹಿಂದುರುಗಿದ್ದಾರೆ. ಅವರನ್ನು ಮತ್ತೇ ಪೊಲೀಸ್ ಠಾಣೆಗೆ ಕರೆಸಿ ತಿಳುವಳಿಕೆ ನೀಡಲಾಗುವುದು ಎಂದು ಹೇಳಿದರು.
Leave a comment