ನರಸಿಂಹರಾಜಪುರ: ಮನೆಯಲ್ಲಿ ದಂಪತಿ ಮಲಗಿದ್ದ ವೇಳೆ ಮೇಲ್ಛಾವಣಿಯ ಹೆಂಚು ತೆಗೆದು ಒಳನುಗ್ಗಿದ ಕಳ್ಳನೊಬ್ಬ ಮಹಿಳೆಯ ಕೊರಳಿನಲ್ಲಿದ್ದ ಸುಮಾರು ₹1.70 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನರಸಿಂಹರಾಜಪುರ ತಾಲ್ಲೂಕಿನ ಮೆಣಸೂರು ಗ್ರಾಮದಲ್ಲಿ ನಡೆದಿದೆ.
ಮೆಣಸೂರು ಗ್ರಾಮದ ಲಕ್ಷ್ಮೀದೇವಿ (72) ಅವರು ನೀಡಿದ ದೂರಿನ ಆಧಾರದ ಮೇಲೆ ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಕ್ಷ್ಮೀದೇವಿ ಅವರು ಪತಿ ಗಣಪತಿ ಅವರೊಂದಿಗೆ ಮನೆಯಲ್ಲಿ ವಾಸವಾಗಿದ್ದು, ಗಣಪತಿ ನಿವೃತ್ತ ಶಿಕ್ಷಕರಾಗಿದ್ದಾರೆ. ಎಂದಿನಂತೆ ಬುಧವಾರ ರಾತ್ರಿ 10.30ರ ಸುಮಾರಿಗೆ ಊಟ ಮುಗಿಸಿ ದಂಪತಿ ತಮ್ಮ ಕೊಠಡಿಯಲ್ಲಿ ಮಲಗಿದ್ದರು.
ಗುರುವಾರ ಬೆಳಗಿನ ಜಾವ ಸುಮಾರು 12.30ರ ವೇಳೆಗೆ ಲಕ್ಷ್ಮೀದೇವಿ ಅವರ ಕೊರಳಿನಲ್ಲಿದ್ದ ಮಾಂಗಲ್ಯ ಸರವನ್ನು ಯಾರೋ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ನಿದ್ದೆಯಿಂದ ಎಚ್ಚರಗೊಂಡ ಅವರು ಸರವನ್ನು ಬಿಗಿಯಾಗಿ ಹಿಡಿದುಕೊಂಡು ಕಳ್ಳ, ಕಳ್ಳ ಎಂದು ಕೂಗಿಕೊಂಡಿದ್ದಾರೆ. ಈ ವೇಳೆ ಪತಿ ಎದ್ದು ನೋಡುವಷ್ಟರಲ್ಲಿ ಕಳ್ಳ ಸರದ ಅರ್ಧ ಭಾಗವನ್ನು ಕಿತ್ತುಕೊಂಡು ಮನೆಯ ಹಿಂಭಾಗದಿಂದ ಪರಾರಿಯಾಗಿದ್ದಾನೆ. ಬಳಿಕ ಮನೆಯ ಮುಂಭಾಗದ ರಸ್ತೆಯಲ್ಲಿ ಬೈಕ್ನಲ್ಲಿ ತೆರಳಿದ ಶಬ್ದ ಕೇಳಿಸಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮನೆಯ ಪರಿಶೀಲನೆ ನಡೆಸಿದಾಗ ಅಡುಗೆ ಮನೆಯ ಮೇಲ್ಛಾವಣಿಯ ಹೆಂಚುಗಳನ್ನು ತೆಗೆದು ಕಳ್ಳ ಒಳನುಗ್ಗಿರುವುದು ಪತ್ತೆಯಾಗಿದೆ. ಬಳಿಕ ದಂಪತಿ ಮಲಗಿದ್ದ ಕೊಠಡಿಗೆ ತೆರಳಿ ಲಕ್ಷ್ಮೀದೇವಿ ಅವರ ಕೊರಳಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿರುವುದು ಗೊತ್ತಾಗಿದೆ.
ಲಕ್ಷ್ಮೀದೇವಿ ಅವರು ಸರವನ್ನು ಬಿಗಿಯಾಗಿ ಹಿಡಿದುಕೊಂಡಿದ್ದರಿಂದ ಅದು ಅರ್ಧಕ್ಕೆ ತುಂಡಾಗಿದ್ದು, ಸುಮಾರು 17 ಗ್ರಾಂ ತೂಕದ ಬಂಗಾರದ ತಾಳಿ, ಎರಡು ಗುಂಡು ಹಾಗೂ ಎರಡು ಕಾಸು ಒಳಗೊಂಡ ಭಾಗವನ್ನು ಕಳ್ಳ ಕಿತ್ತುಕೊಂಡು ಹೋಗಿದ್ದಾನೆ. ಕಳವಾಗಿರುವ ಚಿನ್ನದ ಮೌಲ್ಯ ಅಂದಾಜು ₹1.70 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆ ಕುರಿತು ನರಸಿಂಹರಾಜಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮನೆಗೆ ನುಗ್ಗಿದ ಕಳ್ಳನ ಪತ್ತೆ ಹಾಗೂ ಕಳವಾಗಿರುವ ಚಿನ್ನಾಭರಣ ವಶಪಡಿಸಿಕೊಳ್ಳಲು ತನಿಖೆ ಮುಂದುವರಿಸಿದ್ದಾರೆ.
Breaking and entering the house by removing the roof tiles
Leave a comment