ಕಡೂರು: ಪ್ರತಿದಿನ ಉಳಿತಾಯದ ಹಣವನ್ನು ಸ್ವೀಕರಿಸಿ ಶೇ.7ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ, ಹಣವನ್ನು ವಾಪಸ್ ನೀಡದೆ ಫೈನಾನ್ಸ್ ಕಚೇರಿಗೆ ಬೀಗ ಹಾಕಿ ಮಾಲೀಕರು ನಾಪತ್ತೆಯಾಗಿರುವ ಆರೋಪದಡಿ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೀಗೆಹಡ್ಲು ಗ್ರಾಮದ ಚಿಲ್ಲರೆ ಅಂಗಡಿ ಮಾಲೀಕರಾದ ನೇತ್ರಾ ಅವರು ನೀಡಿದ ದೂರಿನ ಆಧಾರದ ಮೇಲೆ ಕನಸು ಫೈನಾನ್ಸ್ ಲಿಮಿಟೆಡ್ನ ಮಾಲೀಕರು ಎನ್ನಲಾದ ಪ್ರಶಾಂತ್, ಚಂದನ್ ನಾಯ್ಕ ಹಾಗೂ ಶಾಶಂಕ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, ಸುಮಾರು ಒಂದು ವರ್ಷದ ಹಿಂದೆ ಚಂದನ್ ನಾಯ್ಕ ಅವರು ಸೀಗೆಹಡ್ಲು ಗ್ರಾಮಕ್ಕೆ ಬಂದು ಕಡೂರಿನ ಸುಭಾಷ್ ನಗರದಲ್ಲಿ ಕನಸು ಫೈನಾನ್ಸ್ ಲಿಮಿಟೆಡ್ ಸಂಸ್ಥೆ ಆರಂಭಿಸಿರುವುದಾಗಿ ತಿಳಿಸಿದ್ದರು. ತಾವು, ಪ್ರಶಾಂತ್ ಹಾಗೂ ಶಾಶಂಕ್ ಸಂಸ್ಥೆಯ ಮಾಲೀಕರಾಗಿದ್ದು, ಪ್ರತಿದಿನ ಉಳಿತಾಯ ಮಾಡುವ ಹಣವನ್ನು ಸಂಸ್ಥೆಯಲ್ಲಿ ಠೇವಣಿ ಮಾಡಿದರೆ ವಾರ್ಷಿಕ ಶೇ.7ರಷ್ಟು ಬಡ್ಡಿ ನೀಡಿ ಹಣವನ್ನು ವಾಪಸ್ ನೀಡುವುದಾಗಿ ನಂಬಿಸಿದ್ದರು ಎನ್ನಲಾಗಿದೆ.
ಇದನ್ನು ನಂಬಿದ ನೇತ್ರಾ ಅವರು 2025ರ ಜೂನ್ 11ರಿಂದ ಪ್ರತಿದಿನ ₹300ರಿಂದ ₹700ರವರೆಗೆ ಹಣವನ್ನು ಉಳಿತಾಯ ಮಾಡುತ್ತಿದ್ದರು. ಫೈನಾನ್ಸ್ನ ಸಿಬ್ಬಂದಿ ಅಂಗಡಿಗೆ ಬಂದು ಹಣ ಪಡೆದು, ಸಂಸ್ಥೆ ನೀಡಿದ್ದ ಪುಸ್ತಕದಲ್ಲಿ ಸಹಿ ಮಾಡುತ್ತಿದ್ದರು. ಈ ರೀತಿ 2026ರ ಜುಲೈ 17ರವರೆಗೆ ಹಣ ಪಾವತಿಸಿದ್ದು, ಒಟ್ಟು ₹1,60,900 ಠೇವಣಿ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಜುಲೈ 13ರಂದು ಕನಸು ಫೈನಾನ್ಸ್ ಕಚೇರಿಗೆ ತೆರಳಿ ತಾವು ಕಟ್ಟಿರುವ ಹಣವನ್ನು ಹಿಂಪಡೆಯುವುದಾಗಿ ನೇತ್ರಾ ತಿಳಿಸಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ಫೈನಾನ್ಸ್ ಮಾಲೀಕ ಚಂದನ್ ನಾಯ್ಕ ಅವರಿಗೆ ಕರೆ ಮಾಡಿದ್ದು, ಎರಡು–ಮೂರು ದಿನಗಳಲ್ಲಿ ಹಣ ವಾಪಸ್ ನೀಡುವುದಾಗಿ ಅವರು ಭರವಸೆ ನೀಡಿದ್ದರು ಎನ್ನಲಾಗಿದೆ.
ಆದರೆ ಹಣಕ್ಕಾಗಿ ಕಾಯುತ್ತಿದ್ದರೂ ಯಾವುದೇ ಹಣ ಪಾವತಿಯಾಗಿಲ್ಲ. ಬಳಿಕ ಪ್ರಶಾಂತ್, ಚಂದನ್ ನಾಯ್ಕ ಹಾಗೂ ಶಾಶಂಕ್ ಅವರು ಫೈನಾನ್ಸ್ ಕಚೇರಿಗೆ ಬೀಗ ಹಾಕಿಕೊಂಡು ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ತಮ್ಮಂತೆಯೇ ಕಡೂರು ಸುತ್ತಮುತ್ತಲಿನ ಹಲವಾರು ಮಂದಿ ಕನಸು ಫೈನಾನ್ಸ್ನಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ ಎಂದು ನೇತ್ರಾ ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆ ಹಾಗೂ ಫೈನಾನ್ಸ್ನಲ್ಲಿ ಹಣ ಹೂಡಿಕೆ ಮಾಡಿರುವ ಇತರರ ವಿವರಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.
Allegations of fraud of ₹1.60 lakh in the name of Kanasu Finance
Leave a comment