ಚಿಕ್ಕಮಗಳೂರು: ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ವಾಟ್ಸಪ್ ಖಾತೆ ಸೃಷ್ಟಿಸಿ, ಆನ್ಲೈನ್ ಬ್ಯಾಂಕಿಂಗ್ ಸಮಸ್ಯೆಯ ನೆಪದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಿಂದ ₹50 ಸಾವಿರ ಹಣ ಪಡೆದು ವಂಚಿಸಿರುವ ಘಟನೆ ನಡೆದಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಯೋಗಾನಂದ ಅವರು ಆ.10ರಂದು ಚಿಕ್ಕಮಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆ.8ರಂದು ಮಧ್ಯಾಹ್ನ ಮಂಡ್ಯ ಜಿಲ್ಲೆಯ ನಾಗಮಂಗಲದ ಬಳಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಯೋಗಾನಂದ ಅವರ ಮೊಬೈಲ್ಗೆ ವಾಟ್ಸಪ್ ಸಂದೇಶ ಬಂದಿದೆ. ವಾಟ್ಸಪ್ ಡಿಪಿಯಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಅವರ ಫೋಟೋ ಇದ್ದು, ‘ಬನ್ವರ್ ಸಿಂಗ್ ಮೀನಾ’ ಎಂಬ ಹೆಸರಿನ ಖಾತೆಯಿಂದ ಸಂದೇಶ ಬಂದಿತ್ತು ಎನ್ನಲಾಗಿದೆ.
ಸಂದೇಶ ಕಳುಹಿಸಿದ್ದ ವ್ಯಕ್ತಿ ತಾನು ಸಭೆಯಲ್ಲಿದ್ದು, ತನ್ನ ಆನ್ಲೈನ್ ಬ್ಯಾಂಕಿಂಗ್ನಲ್ಲಿ ಸಮಸ್ಯೆಯಾಗಿರುವುದಾಗಿ ತಿಳಿಸಿ, ಮತ್ತೊಬ್ಬರ ಬ್ಯಾಂಕ್ ಖಾತೆಗೆ ₹50 ಸಾವಿರ ಜಮೆ ಮಾಡುವಂತೆ ಕೇಳಿದ್ದಾನೆ. ಬ್ಯಾಂಕಿಂಗ್ ವ್ಯವಸ್ಥೆ ಸರಿಯಾದ ಬಳಿಕ ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದಾನೆ ಎನ್ನಲಾಗಿದೆ.
ಇದನ್ನು ನಂಬಿದ ಯೋಗಾನಂದ ಅವರು ಮನೆಯಲ್ಲಿ ಇದ್ದ ₹50 ಸಾವಿರ ನಗದನ್ನು ತೆಗೆದುಕೊಂಡು ಮಂಡ್ಯ ನಗರದ ಐಸಿಐಸಿಐ ಬ್ಯಾಂಕ್ ಎಟಿಎಂಗೆ ತೆರಳಿ, ಆರೋಪಿಯು ನೀಡಿದ್ದ ಹೇಮಣ್ಣಗೌಡ ಗುಡ್ಡಣ್ಣಗೌಡ ಪಾಟೀಲ್ ಅವರ ಖಾತೆಗೆ ಹಂತ ಹಂತವಾಗಿ ಒಟ್ಟು ₹50 ಸಾವಿರ ಜಮೆ ಮಾಡಿದ್ದಾರೆ.
ಬಳಿಕ ಮತ್ತೆ ₹50 ಸಾವಿರ ಹಣ ಹಾಕುವಂತೆ ಸಂದೇಶ ಬಂದ ಹಿನ್ನೆಲೆಯಲ್ಲಿ ಅನುಮಾನಗೊಂಡ ಯೋಗಾನಂದ ಅವರು ಜಿಲ್ಲಾಧಿಕಾರಿ ಕಚೇರಿಯ ಪಿಎ ಅವರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿ ಯಾವುದೇ ಸಭೆಯಲ್ಲಿ ಇಲ್ಲ ಹಾಗೂ ಇದೇ ರೀತಿಯಲ್ಲಿ ಬೇರೆ ವ್ಯಕ್ತಿಗಳಿಗೂ ಸಂದೇಶಗಳು ಬರುತ್ತಿವೆ ಎಂಬುದು ತಿಳಿದುಬಂದಿದೆ. ನಂತರ ಚಿಕ್ಕಮಗಳೂರಿಗೆ ಮರಳಿದ ಯೋಗಾನಂದ ಅವರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲು: ಸೈಬರ್ ಕ್ರೈಂ ಪೊಲೀಸರು ಠಾಣಾ ಮೊ.ನಂ. 42/2026ರಲ್ಲಿ ಐಟಿ ಕಾಯ್ದೆಯ ಕಲಂ 66(C), 66(D) ಹಾಗೂ BNS ಕಲಂ 318(4) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ನಕಲಿ ವಾಟ್ಸಪ್ ಖಾತೆ ಬಳಸಿ ಹಣ ಪಡೆದು ವಂಚಿಸಿದ ವ್ಯಕ್ತಿಯ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ
Food Department Deputy Director cheated of ₹50 thousand
Leave a comment