ಶೃಂಗೇರಿ: ‘ನಗರ ಪ್ರದೇಶದಲ್ಲಿ ಕುಳಿತು ಐಷರಾಮಿ ಜೀವನ ನಡೆಸುವ ಪರಿಸರವಾದಿಗಳು ತಯಾರಿಸುವ ವರದಿಗಳಿಗೆ ಮಲೆನಾಡಿನ ಮಣ್ಣಿನ ಸಂಸ್ಕೃತಿ, ಕೃಷಿಯನ್ನು ಪ್ರೀತಿಸುವ ರೈತರು ಬಲಿಯಾಗುತ್ತಿದ್ದಾರೆ’ ಎಂದು ಪರಿಸರವಾದಿ ಕಲ್ಕುಳಿ ವಿಠಲ ಹೆಗ್ಗಡೆ ಅಸಮಾಧಾನ ವ್ಯಕ್ತಪಡಿಸಿದರು.
‘2012ರ ಮಾಧವ ಗಾಡೀಳ್ ವರದಿಯನ್ನು ತಿರಸ್ಕಾರ ಮಾಡಲು ಕೇಂದ್ರದ ಎನ್ಡಿಎ ಸರ್ಕಾರ 2014ರಲ್ಲಿ ಕಸ್ತೂರಿ ರಂಗನ್ ವರದಿಯನ್ನು ರೂಪಿಸಿದೆ. ಅದರ ವ್ಯಾಪ್ತಿಗೆ ಜಿಲ್ಲೆಯ 127 ಗ್ರಾಮಗಳು ಸೇರಿವೆ. ಈಗ ಕೇಂದ್ರ ಪರಿಸರ ಅರಣ್ಯ ಮತ್ತು ಹವಮಾನ ಸಚಿವಾಲಯ ಹೊರಡಿಸಿರುವ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯ ಕರಡು ಅಧಿಸೂಚನೆಯನ್ನು ಹಿಂಪಡೆಯಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಒತ್ತಯಿಸಿದರು.
‘ಇದು ರೈತಾಪಿ ವರ್ಗವನ್ನು ನಾಶ ಮಾಡುವ ಯೋಜನೆ. ಈ ಹಿಂದೆ 6 ಬಾರಿ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯ ಕರಡು ಅಧಿಸೂಚನೆ ಹೊರಡಿಸಿದಾಗ ಶಿವಮೊಗ್ಗ, ಕೊಡುಗು, ಉತ್ತರ ಕನ್ನಡ ಹಾಗೂ ಇತರೆಡೆ ಮನೆ ಮನೆಗೆ ತೆರಳಿ ಆಕ್ಷೇಪಣೆ ಸಲ್ಲಿಸಿದ್ದೇವೆ. ಕೇಂದ್ರ ಸರ್ಕಾರ ಮತ್ತೆ ಅಧಿಸೂಚನೆ ಹೊರಡಿಸಿ ಜನರ ಕಣ್ಣಿಗೆ ಮಣ್ಣೆರಚುವ ತಂತ್ರ ರೂಪಿಸಿದೆ’ ಎಂದು ಅರೋಪಿಸಿದರು.
‘ರಾಜ್ಯ ಸರ್ಕಾರ ಈ ಅಧಿಸೂಚನೆಯನ್ನು ತಿರಸ್ಕರಿಸಬೇಕು. ಕೇಂದ್ರ ಸರ್ಕಾರ ಒತ್ತುವರಿ ಜಾಗವನ್ನು ಸಕ್ರಮಗೊಳಿಸಲು ಅರ್ಜಿ ಹಾಕಲು ನಿರಂತರವಾಗಿ ಜನರಿಗೆ ಹೇಳುತ್ತಿದೆ. ರಾಶಿ ಅರ್ಜಿಗಳು ಕಚೇರಿಯಲ್ಲಿ ಬಿದ್ದಿವೆ. ಈ ಯೋಜನೆ ಜಾರಿಗೆ ಬಂದರೆ ವಸತಿ ನಿರ್ಮಾಣ ಮಾಡಲು ಬಿಡುವುದಿಲ್ಲ’ ಎಂದರು.
‘ಸಾವಯವ ಕೃಷಿಗೆ ಉತ್ತೇಜನ ನೀಡಬೇಕು. ತೋಟಗಾರಿಕಾ ಬೆಳೆಗಳಿಗೆ ಕಳೆನಾಶಕ, ಕೀಟನಾಶಕ, ಬೋರ್ಡೋ ಸಿಂಪಡಣೆ, ರಾಸಯನಿಕ ಗೋಬ್ಬರ ಬಳಸಬಾರದು ಎಂಬ ನಿಯಮಗಳು ಈ ವರದಿಯಲ್ಲಿವೆ. ಮಲೆನಾಡಿನಲ್ಲಿ ತೋಟಗಳ ಬೆಳೆಗಳಿಗೆ ನಾವು ಬಳಸುವುದು ಬೋರ್ಡೊ ದ್ರಾವಣ. ಒಂದು ವೇಳೆ ವರದಿ ಜಾರಿಗೆ ಬಂದರೆ ಬೆಳೆ ನಾಶವಾಗುವುದು ಖಂಡಿತ, ಕರುಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸುವ ಕಾರ್ಯಕ್ಕೆ ಒಗ್ಗೂಡಿ ಕಾರ್ಯ ಪ್ರವೃತ್ತರಾಗಬೇಕು’ ಎಂದರು.
‘ಪರಿಸರ ಅಸಮತೋಲನಕ್ಕೆ ಜಾಗತಿಕ ತಾಪಮಾನ ಕಾರಣ. ಈ ತಾಪಮಾನ ಹೆಚ್ಚಲು ದೇಶದಲ್ಲಿ ಪೆಟ್ರೋಲ್, ಡೀಸೆಲ್, ವಿದ್ಯುತ್, ಸಿಮೆಂಟ್, ಕಬ್ಬಿಣ, ಪ್ಲಾಸ್ಟಿಕ್ ಅತಿಯಾದ ಉತ್ಪಾದನೆ ಮತ್ತು ಬಳಕೆ ಹಾಗೂ ನೀರಿನ ಅತಿಯಾದ ಬಳಕೆ ಕಾರಣ. ಇದಕ್ಕೆ ಯಾವುದೇ ನಿರ್ಬಂದವಿಲ್ಲ. ಬದಲಿಗೆ ರೈತರ ಮೇಲೆ ಒತ್ತಡ ಹೇರಿ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡುವುದು ಪರಿಸರದೊಂದಿಗೆ ಬದುಕು ಕಟ್ಟಿಕೊಂಡಿರುವ ರೈತರಿಗೆ ಹಿಂಸೆ ಕೊಡುವ ಯೋಜನೆ’ ಎಮದು ಹೇಳಿದರು.
‘ಇದರಿಂದ ಜನರಿಗೆ ಪರಿಸರದ ಮೇಲೆ ತಿಳಿರಿಮೆ ಬರುತ್ತದೆ. ಈ ವರದಿಯಿಂದ ಜನಸಾಮಾನ್ಯರ ಬದುಕು ಅಸ್ತವ್ಯಸ್ತವಾಗಲಿದೆ. ಸುಪ್ರೀಂ ಕೋರ್ಟ್, ಸಿಇಸಿ, ಹಸಿರು ನ್ಯಾಯಪೀಠದ ಮುಖ್ಯಸ್ಥರು ನೀಡುವ ವರದಿಗಳು ಮತ್ತು ಯೋಜನೆಗಳು ಮಲೆನಾಡಿನ ಜನರ ಬದುಕಿಗೆ ಕರಾಳವಾಗುತ್ತಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯಾದರೆ ಮಲೆನಾಡಿನ ಜನರ ಬದುಕು ಆಯೋಮಾಯವಾಗಲಿದೆ’ ಎಂದು ಹೇಳಿದರು.
ಗೋಷ್ಠಿಯಲ್ಲಿ ಕರ್ನಾಟಕ ಜನಶಕ್ತಿಯ ಹಾಗಲಗಂಚಿ ವೆಂಕಟೇಶ್, ಸುರೇಶ್ ಇದ್ದರು.
Kalkuli Vitthal Heggade opposes draft notification for declaration of eco-sensitive area
Leave a comment