ಚಿಕ್ಕಮಗಳೂರು: ಜಾತಿ, ಪಕ್ಷ ರಹಿತವಾಗಿ ಕೆಲಸ ಮಾಡಿರುವ ಡಿ.ಸಿ. ಶ್ರೀಕಂಠಪ್ಪ ಅವರ ರೀತಿಯಲ್ಲಿ ಮಾದರಿಯ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ನಿರ್ಮಾಣ ಮಾಡಲಾಗಿರುವ ಭಕ್ತರಹಳ್ಳಿಯಿಂದ ಕೆಳದೇವರಹಳ್ಳಿಗೆ ಹೋಗುವ ನೂತನ ಕಾಂಕ್ರೀಟ್ ರಸ್ತೆಯನ್ನು ಶನಿವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ಡಿ.ಸಿ. ಶ್ರೀಕಂಠಪ್ಪ ಅವರು ಎಂದಿಗೂ ಜಾತಿ, ಪಕ್ಷದ ರಾಜಕಾರಣ ಮಾಡಲಿಲ್ಲ, ಅವರನ್ನು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಎಲ್ಲಾ ಜಾತಿ, ಧರ್ಮದ ಜನರು ಇಷ್ಟಪಡುತ್ತಿದ್ದರು. ಅದೇ ಮಾದರಿಯಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂದರು.
ಜನಪ್ರತಿನಿಧಿಯಾಗಲು ನನ್ನನ್ನು ನೀವು ಆಶೀರ್ವಾದ ಮಾಡಿದ್ದೀರಾ, ಮತ್ತೆ ನೀವು ನನ್ನನ್ನು ಆಶೀರ್ವಾದ ಮಾಡಿ. ‘ನಾನು’ ಎಂಬ ಅಹಂಕಾರವನ್ನು ಕೊಡಬೇಡ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅಹಂ ಇದ್ದವರಿಗೆ ದೇವರು ಎಲ್ಲಿಗೆ ಕಳುಹಿಸಿದ್ದಾರೆ ಎಂಬುದು ನೋಡಿದ್ದೇವೆ ಎಂದು ಹೇಳಿದರು.
ರಾಜ್ಯ ಸರ್ಕಾರ, ಆರ್ಥಿಕ ಹಾಗೂ ಸಮ ಸಮಾಜ ನಿರ್ಮಾಣ ಮಾಡಲು ೫೭,೦೦೦ ಕೋಟಿ ರು.ಗಳ ಪಂಚ ಗ್ಯಾರಂಟಿ ನೀಡಿದೆ. ಇದರ ಜತೆಗೆ ಅಭಿವೃದ್ಧಿಗಾಗಿ ಮುಖ್ಯಮಂತ್ರಿಯವರು ವಿಶೇಷ ಅನುದಾನವನ್ನು ನೀಡಿದ್ದಾರೆ ಎಂದರು.
ಚಿಕ್ಕಮಗಳೂರು ನಗರದ ರಸ್ತೆಗಳು ಗುಂಡಿ ಬಿದ್ದು ಹಾಳಾಗಿದ್ದವು. ‘ಸೈಕಲ್ ತುಳಿ, ಸಮಸ್ಯೆ ತಿಳಿ’ ಕಾರ್ಯಕ್ರಮ ಹಮ್ಮಿಕೊಂಡು ಸಮಸ್ಯೆ ತಿಳಿಯುವ ಜತೆಗೆ ಇಂಜಿನಿಯರ್ ಅವರೊಂದಿಗೆ ನಗರ ಪ್ರದಕ್ಷಣೆ ಮಾಡಿ ಆದ್ಯತೆಯ ಮೇಲೆ ರಸ್ತೆ ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧ ನಮ್ಮ ದೇಶದ ಮೇಲು ದುಷ್ಪರಿಣಾಮ ಬೀರಿದೆ. ಡಾಂಬರ್ ಬೆಲೆ ಮೂರು ಪಟ್ಟು ಹೆಚ್ಚಳವಾಗಿದೆ. ಕಮರ್ಷಿಯಲ್ ಗ್ಯಾಸ್ ಬೆಲೆ ದುಬಾರಿಯಾಗಿದೆ ಎಂದರು.
ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಂಜೇಗೌಡ, ಜಿಪಂ ಮಾಜಿ ಅಧ್ಯಕ್ಷ ಕೆ.ಮಹಮದ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಪರ್ವತೇಗೌಡ, ಶಿವಕುಮಾರ್, ಕಲ್ಲೇಶ್ ಉಪಸ್ಥಿತರಿದ್ದರು.
I am doing exemplary work in the style of Srikanthappa.
Leave a comment