ಚಿಕ್ಕಮಗಳೂರು : ವಿದ್ಯುತ್ ಕ್ಷೇತ್ರವನ್ನು ಟಾಟಾ ಪವರ್ ಕಂಪನಿಗೆ ನೀಡುವ ಮೂಲಕ ಖಾಸಗಿಕರಣಗೊಳಿಸುವ ನಿರ್ಧಾರವನ್ನು ಖಂಡಿಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಮಾಜಿ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯದ ಒಟ್ಟು ೧೯ ಕಂದಾಯ ಜಿಲ್ಲೆಗಳ ವಿದ್ಯುತ್ ವಿತರಣೆಯನ್ನು ಟಾಟಾ ಪವರ್ ಕಂಪನಿಗೆ ವಹಿಸಿಕೊಡಲು ಸರ್ಕಾರ ಉದ್ದೇಶಿಸಿದೆ. ಇದು ಖಂಡನೀಯ. ಕರ್ನಾಟಕದ ವಿದ್ಯುಚಕ್ತಿ ವಿತರಣೆಗೆ ವಿದ್ಯುಚಕ್ತಿ ನಿಗಮ, ಜಲವಿದ್ಯುತ್, ಸೌರಶಕ್ತಿ ಮತ್ತು ಥರ್ಮಲ್ ಪವರ್ಗಳ ಮೂಲಕ ವಿತರಣೆ ಮಾಡಲು ಸಶಕ್ತವಾಗಿದೆ ಹಾಗೂ ಎಲ್ಲಾ ಅಗತ್ಯ ಮೂಲ ಸೌಕರ್ಯಗಳನ್ನು ಹೊಂದಿದೆ.
ಸಣ್ಣಪುಟ್ಟ ಅಡೆತಡೆಗಳ ಮಧ್ಯೆ ರಾಜ್ಯದ ಜನರಿಗೆ ವಿದ್ಯುತ್ ಪೂರೈಕೆ ಆಗುತ್ತಿದೆ. ಇದನ್ನು ಖಾಸಗಿಕರಣಗೊಳಿಸುವುದರಿಂದ ಜನಸಾಮಾನ್ಯರು ಸರ್ಕಾರದಿಂದ ದೊರೆಯುತ್ತಿರುವ ಹಲವು ಸೌಕರ್ಯಗಳಿಂದ ವಂಚಿತರಾಗುತ್ತಾರೆಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಒಂದರಲ್ಲೆ ೪೦ಲಕ್ಷಕ್ಕೂ ಹೆಚ್ಚು ಕೃಷಿ ಪಂಪ್ ಸೆಟ್ಗಳಿದ್ದು, ಸರ್ಕಾರ ಉಚಿತ ವಿದ್ಯುತ್ ಪೂರೈಕೆ ಮಾಡುತ್ತಿದೆ. ವಿದ್ಯುತ್ ದರದ ಮೇಲೆ ಸರ್ಕಾರದ ನಿಯಂತ್ರಣವಿದೆ. ಖಾಸಗಿ ಕರಣ ಮಾಡುವುದರಿಂದ ಈ ಎಲ್ಲಾ ವ್ಯವಸ್ಥೆಗಳು ಸೇರಿದಂತೆ ಗೃಹಜ್ಯೋತಿ, ಭಾಗ್ಯಜ್ಯೋತಿ ಫಲಾನುಭವಿಗಳ ಮೇಲೆಯೂ ವಿದ್ಯುತ್ ದರದ ಬರೆ ಎಳೆದಂತಾಗುತ್ತದೆ ಎಂದರು.
ವಿದ್ಯುತ್ ಕ್ಷೇತ್ರದ ಖಾಸಗೀಕರಣದಿಂದ ೫೦ ರಿಂದ ೬೦ ಸಾವಿರ ಉದ್ಯೋಗಗಳು ನಷ್ಟವಾಗಬಹುದೆಂಬ ಅಂದಾಜಿದೆ. ಸರ್ಕಾರಿ ಸ್ವಾಮ್ಯದಲ್ಲಿ ಇರುವ ನೌಕರರಿಗೆ ಸಿಗುವ ನಿವೃತ್ತಿ ವೇತನ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲದೆ, ನಿವೃತ್ತಿ ಜೀನವದ ಮೇಲೆ ಪರಿಣಾಮ ಬೀರುತ್ತದೆ. ಖಾಸಗಿ ಕಂಪನಿಯಲ್ಲಿ ನೌಕರರು ಕಡಿಮೆ ಸಂಬಳಕ್ಕೆ ಜೀತದಾಳುಗಳಂತೆ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.
ಸಾರ್ವಜನಿಕ ಕಂಪನಿಗಳ ದಕ್ಷತೆ ಮತ್ತು ಸೇವಾ ಗುಣಮಟ್ಟಕ್ಕಿಂತ ಕಳಪೆ ಸೇವೆಯನ್ನು ಟಾಟಾ ಪವರ್ ಕಂಪನಿ ದೇಶದಲ್ಲಿ ನೀಡುತ್ತಿದೆ ಎಂಬ ಆರೋಪಗಳು ಸಹ ಇದೆ. ಸಾರ್ವಜನಿಕ ವಿತರಣಾ ಕಂಪನಿಯ ದರಕ್ಕಿಂತ ಈ ಕಂಪನಿ ಹೆಚ್ಚು ದರ ವಸೂಲಿ ಮಾಡುತ್ತಿರುವುದಾಗಿ ದೂರುಗಳು ಇದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಈ ಖಾಸಗಿ ಕಂಪನಿಗೆ ಯಾವುದೇ ಕಾರಣಕ್ಕೂ ವಿದ್ಯುತ್ ವಿತರಣೆಗೆ ಅವಕಾಶ ಕೊಡಬಾರದು ಎಂದ ಅವರು ಈ ಸಂಬಂಧ ಜೂ. ೧೮ ರಂದು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಮೂಲಕ ಪ್ರತಿಭಟನೆಯನ್ನು ನಡೆಸುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಹೇಶ್ ಡಿ., ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ. ಬಸವರಾಜು, ಸಂಘಟನಾ ಕಾರ್ಯದರ್ಶಿ ದೇವರಾಜು, ಉಪಾಧ್ಯಕ್ಷ ಕುಮಾರಸ್ವಾಮಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ತಾಲ್ಲೂಕು ವಕ್ತಾರ ಸುನಿಲ್ ಕುಮಾರ್ ಇದ್ದರು.
Farmers’ union opposes privatization of power sector
Leave a comment