ಚಿಕ್ಕಮಗಳೂರು: : ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮೆಡಿಕಲ್ ಕಾಲೇಜು ಸಮಸ್ಯೆಗಳ ಬಗ್ಗೆ ಪರಿಶೀಲನೆ ಸಂದರ್ಭದಲ್ಲಿ ಸವಿತಾ ಸಮಾಜದ ಬಗ್ಗೆ ನಿಷೇಧಿತ ಪದ ಬಳಕೆ ಮಾಡಿರುವುದನ್ನು ಖಂಡಿಸಿ ಕೂಡಲೇ ಬಹಿರಂಗ ಕ್ಷಮೆ ಕೇಳದಿದ್ದರೆ ರವಿ ಮನೆಗೆ ಮುತ್ತಿಗೆ ಹಾಕುವುದಾಗಿ ಸಿಡಿಎ ನಾಮಿನಿ ಸದಸ್ಯ ರಾಘವೇಂದ್ರ ಎಚ್ಚರಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆ ಮತ್ತು ಅರ್ಹತೆ, ಯೋಗ್ಯತೆ ನೀಡಿದ್ದು, ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ, ವಿಡಿಯೋ ಮತ್ತು ಧ್ವನಿಮುದ್ರಿಕೆಯನ್ನು ಎಫ್ಎಸ್ಎಲ್ಗೆ ಕಳುಹಿಸಿದರೆ ಸತ್ಯ ತಿಳಿಯುತ್ತದೆ ಎಂದರು.
ಈ ಸಂಬಂಧ ಜಿಲ್ಲಾಮಟ್ಟದ ನಾಯಕರೊಂದಿಗೆ ಚರ್ಚಿಸಲಾಗಿದ್ದು, ರಾಜ್ಯ ನಾಯಕರಿಗೂ ವಿಷಯ ತಿಳಿಸಿದ್ದೇವೆ. ಹೋರಾಟ ರೂಪಿಸಿದರೆ ಹಲವು ಜನಪರ ಸಂಘಟನೆಗಳು ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಸಿ.ಟಿ. ರವಿ ಹೇಳುವ ಹಾಗೆ ಎಲ್ಲಿ ಕಳೆದುಕೊಂಡಿದ್ದೇನೊ ಅಲ್ಲೇ ಪಡೆಯಬೇಕು ಎಂಬಂತೆ ಅವರು ಎಲ್ಲಿ ಮಾತನಾಡಿದ್ದಾರೋ ಅಲ್ಲೇ ಬಹಿರಂಗ ಕ್ಷಮೆ ಕೇಳಬೇಕು. ಈ ಪದಬಳಕೆಯಿಂದ ಸವಿತಾ ಮಹರ್ಷಿಗಳಿಗೆ ಮತ್ತು ವಿಶ್ವಗುರು ಬಸವಣ್ಣನವರ ಅನುಭವ ಮಂಟಪದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಶಿವಶರಣ ಹಡಪದ ಅಪ್ಪಣ್ಣ ಅವರಿಗೆ ಮಾಡಿದ ಅವಮಾನ ಎಂದು ದೂರಿದರು.
ಸವಿತಾ ಸಮಾಜ ಹಿಂದೂಗಳಲ್ಲದೆ ನಾವೂ ಸಹ ದೇವರಿಗೆ ದೀಪ ಹಚ್ಚುತ್ತೇವೆ. ಹಿಂದೂತ್ವ ಎಂದು ಹೇಳುವ ಸಿ.ಟಿ. ರವಿ ಮಾನಸಿಕ ಸ್ತಿಮಿತ ಕಳೆದುಕೊಂಡು ನಿಷೇಧಿತ ಪದ ಬಳಸಿ ಹಿಂದೂ ಧರ್ಮಕ್ಕೆ ಅಪಮಾನ ಮಾಡಿದ್ದಾರೆ. ನಿಮ್ಮ ಆಡಂಬರದ ಹಿಂದೂತ್ವ ಇದರಲ್ಲಿ ಎದ್ದುಕಾಣುತ್ತಿದ್ದು, ನಾನು ಅವನಾ ಎಂದು ಹೇಳಿರುವ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು.
ಸಿ.ಟಿ ರವಿಯವರು ಸೋಲಿನ ಹತಾಶೆಯಿಂದ ಹೊರಬರಲಾಗದೆ ಮಾನಸಿಕ ಸ್ತಿಮಿತ ಕಳೆದುಕೊಂಡು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮಹಿಳಾ ಸಚಿವೆಯೊಬ್ಬರನ್ನು ಕುರಿತು ಕೆಟ್ಟಪದ ಬಳಕೆ ಮಾಡಿ ಮಾನಸಿಕ ಸ್ತಿಮಿತ ಸರಿಯಿಲ್ಲ ಎಂದು ರಾಜ್ಯದ ಜನತೆಗೆ ತೋರಿಸಿಕೊಟ್ಟು ಅದೇ ಚಾಳಿಯನ್ನು ಜಿಲ್ಲೆಯಲ್ಲಿ ಸವಿತಾ ಸಮಾಜದ ಬಗ್ಗೆ ನಿಷೇಧಿತ ಪದಬಳಕೆಯನ್ನು ಖಂಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸವಿತಾ ಸಮಾಜದ ಮುಖಂಡರುಗಳಾದ ಚಂದ್ರಣ್ಣ, ಚಂದ್ರಶೇಖರ್ ಉಪಸ್ಥಿತರಿದ್ದರು.
C.T. Ravi’s house will be besieged if he does not apologize publicly.
Leave a comment