ಚಿಕ್ಕಮಗಳೂರು: ಜಲ ಜೀವನ್ ಮಿಷನ್ ಕಾಮಗಾರಿಗಾಗಿ ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದ ₹10.13 ಲಕ್ಷ ಮೌಲ್ಯದ 32 HDPE ಪೈಪ್ ಬಂಡಲ್ಗಳು ಕಳವಾಗಿರುವ ಘಟನೆ ಸಖರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಹುಲೀಕೆರೆ ಗ್ರಾಮದಲ್ಲಿ ನಡೆದಿದೆ.
ಹಾವೇರಿಯ ರಮೇಶ್ ಎಲೆಕ್ಟ್ರಿಕಲ್ಸ್ ಕಂಪನಿಯ ಮ್ಯಾನೇಜರ್ ನೀಡಿದ ದೂರಿನ ಆಧಾರದ ಮೇಲೆ ಸಖರಾಯಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಡೂರು ತಾಲ್ಲೂಕಿನ ಹುಲೀಕೆರೆ ಗ್ರಾಮದ ಜಲ ಜೀವನ್ ಮಿಷನ್ ಕಾಮಗಾರಿಯ ಟೆಂಡರ್ ರಮೇಶ್ ಎಲೆಕ್ಟ್ರಿಕಲ್ಸ್ ಸಂಸ್ಥೆಗೆ ದೊರೆತಿತ್ತು. ಕಾಮಗಾರಿಗಾಗಿ 2025ರ ಏಪ್ರಿಲ್ 6ರಂದು ಸುಪ್ರೀಮ್ ಕಂಪನಿಯ 63 ಎಂಎಂ ವ್ಯಾಸದ ತಲಾ 300 ಮೀಟರ್ನ 32 ಬಂಡಲ್ಗಳ HDPE ಪೈಪ್ಗಳನ್ನು ಹುಲೀಕೆರೆ ಗ್ರಾಮದ ಸಖರಾಯಪಟ್ಟಣ–ಜಾವಗಲ್ ರಸ್ತೆಯ ಕಬರಸ್ಥಾನದ ಸಮೀಪ, ಗ್ರಾಮದ ಕುಮಾರ ಬಿನ್ ಪುಟ್ಟೇಗೌಡ ಅವರ ಜಮೀನಿನಲ್ಲಿ ಸಂಗ್ರಹಿಸಲಾಗಿತ್ತು.
ಜನವರಿ 9ರಂದು ಸಂಜೆ ಸುಮಾರು 4 ಗಂಟೆಗೆ ಹುಲೀಕೆರೆ ಗ್ರಾಮ ಪಂಚಾಯಿತಿ ಸದಸ್ಯ ಆನಂದ್ ಅವರು ಜಮೀನಿನಲ್ಲಿದ್ದ HDPE ಪೈಪ್ ಬಂಡಲ್ಗಳು ಕಾಣಿಸುತ್ತಿಲ್ಲ ಎಂದು ಕಂಪನಿಯ ಮ್ಯಾನೇಜರ್ಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಮರುದಿನ ಬೆಳಿಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ 32 ಬಂಡಲ್ಗಳು ಕಳವಾಗಿರುವುದು ಬೆಳಕಿಗೆ ಬಂದಿದೆ.
ಸ್ಥಳೀಯರನ್ನು ವಿಚಾರಿಸಿದಾಗ ಪೈಪ್ಗಳನ್ನು ಯಾರು ತೆಗೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಜನವರಿ 9ರಂದು ಬೆಳಿಗ್ಗೆ 7ರಿಂದ ಸಂಜೆ 4 ಗಂಟೆಯೊಳಗಿನ ಅವಧಿಯಲ್ಲಿ ಅಪರಿಚಿತರು ಪೈಪ್ಗಳನ್ನು ಕಳವು ಮಾಡಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ.
ಕಳವಾಗಿರುವ 32 ಬಂಡಲ್ಗಳ ಒಟ್ಟು ಮೌಲ್ಯ ₹10,13,856 ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಂಪನಿಯ ಸಿಬ್ಬಂದಿ ಅನುಮಾನ ಬಂದ ಸ್ಥಳಗಳಲ್ಲಿ ಹುಡುಕಾಟ ನಡೆಸಿದರೂ ಪೈಪ್ಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ತಡವಾಗಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಕಳವಾಗಿರುವ HDPE ಪೈಪ್ಗಳನ್ನು ಪತ್ತೆಹಚ್ಚಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದ್ದು, ಸಖರಾಯಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
HDPE pipe bundles worth ₹10.13 lakh stolen
Leave a comment