ಚಿಕ್ಕಮಗಳೂರು: ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ಕೆಲವೇ ದಿನಗಳಲ್ಲಿ ದುಪ್ಪಟ್ಟು ಹಣ ನೀಡುವುದಾಗಿ ನಂಬಿಸಿ ₹35 ಲಕ್ಷ ಪಡೆದು ವಾಪಸ್ ನೀಡದೆ ವಂಚಿಸಿರುವ ಆರೋಪದಡಿ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸುಣ್ಣದಹಳ್ಳಿ ಗ್ರಾಮದ ಸಿದ್ದಪ್ಪ (65) ಅವರು ನೀಡಿದ ದೂರಿನ ಆಧಾರದ ಮೇಲೆ ಶಿವಮೊಗ್ಗದ ಚಾಲುಕ್ಯನಗರದ ವೆಂಕಟೇಶ್ ಬಿ., ಹನುಮಂತಪ್ಪ ಹಾಗೂ ದೇವರಾಜ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, ಸಿದ್ದಪ್ಪ ಅವರ ಪುತ್ರ ಕಾಂತರಾಜ್ ಅವರು 2024ರಲ್ಲಿ ತಮ್ಮ ಮನೆಯ ಮೇಲೆ ₹18 ಲಕ್ಷ ಹಾಗೂ ಗ್ರಾಮದಲ್ಲಿ ಕೈಸಾಲವಾಗಿ ₹15 ಲಕ್ಷ ಸೇರಿದಂತೆ ಒಟ್ಟು ₹33 ಲಕ್ಷ ಸಾಲ ಮಾಡಿಕೊಂಡಿದ್ದರು. ಈ ಕುರಿತು ತಂದೆ ಪ್ರಶ್ನಿಸಿದಾಗ, ವೆಂಕಟೇಶ್ ಬಿ. ಎಂಬಾತ ತನ್ನ ಒಡೆತನದ ಶಾಲೋಮ್ ಟ್ರೇಡಿಂಗ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಕೆಲವೇ ದಿನಗಳಲ್ಲಿ ದುಪ್ಪಟ್ಟು ಹಣ ನೀಡುವುದಾಗಿ ಭರವಸೆ ನೀಡಿದ್ದರಿಂದ ಹಣ ಹೂಡಿಕೆ ಮಾಡುತ್ತಿರುವುದಾಗಿ ಕಾಂತರಾಜ್ ತಿಳಿಸಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಂತರ ಕಾಂತರಾಜ್ ಅವರು 2025ರ ಜುಲೈ 18ರಂದು ಚಿಕ್ಕಮಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಜುಲೈ 27ರಂದು ವೆಂಕಟೇಶ್ ಸಿದ್ದಪ್ಪ ಅವರ ಮನೆಗೆ ಬಂದು, ಕಾಂತರಾಜ್ ಹಾಗೂ ಇತರ ಸಂಬಂಧಿಕರು ತಮ್ಮ ಕಂಪನಿಯಲ್ಲಿ ಒಟ್ಟು ₹35 ಲಕ್ಷ ಹೂಡಿಕೆ ಮಾಡಿರುವುದಾಗಿ ತಿಳಿಸಿದ್ದಾನೆ. ಕಾಂತರಾಜ್ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅವರ ತಂದೆಗೆ ಎರಡು ತಿಂಗಳೊಳಗೆ ಹಂತ ಹಂತವಾಗಿ ಹಣವನ್ನು ಹಿಂದಿರುಗಿಸುವುದಾಗಿ ಛಾಪಾ ಕಾಗದದಲ್ಲಿ ಬರೆದುಕೊಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ವೇಳೆ ಗ್ರಾಮಸ್ಥರಾದ ಕಮಲಮ್ಮ, ಆನಂದ್ ಸೇರಿದಂತೆ ಇತರರು ಉಪಸ್ಥಿತರಿದ್ದರು ಎನ್ನಲಾಗಿದೆ. ಬಳಿಕ ಸೆ.4ರಂದು ಚಂದನ್ ಎಂಬವರ ಖಾತೆಯಿಂದ ಸಿದ್ದಪ್ಪ ಅವರ ತರೀಕೆರೆ ಯೂನಿಯನ್ ಬ್ಯಾಂಕ್ ಖಾತೆಗೆ ₹2 ಲಕ್ಷ ಜಮೆಯಾಗಿತ್ತು. ಆದರೆ ಉಳಿದ ಹಣವನ್ನು ನೀಡದೆ ವಿಳಂಬ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಹಣಕ್ಕಾಗಿ ಸಂಪರ್ಕಿಸಿದಾಗ, ತಮ್ಮ ಕಂಪನಿಯವರಾದ ಹನುಮಂತಪ್ಪ ಮತ್ತು ದೇವರಾಜ ಅವರು ಬಂದು ಉಳಿದ ಹಣವನ್ನು ನೀಡುತ್ತಾರೆ ಎಂದು ವೆಂಕಟೇಶ್ ಹೇಳಿದ್ದಾನೆ. ಬಳಿಕ ಹನುಮಂತಪ್ಪ ಮತ್ತು ದೇವರಾಜ ಸಿದ್ದಪ್ಪ ಅವರ ಮನೆಗೆ ಬಂದು ಕೆಲ ದಿನ ಕಾಯುವಂತೆ ತಿಳಿಸಿದ್ದರು. ಆದರೆ ಇದುವರೆಗೆ ಹಣ ಹಿಂದಿರುಗಿಸದೆ, ಆರೋಪಿಗಳು ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಸಿದ್ದಪ್ಪ ದೂರಿನಲ್ಲಿ ತಿಳಿಸಿದ್ದಾರೆ.
ಆನ್ಲೈನ್ ಟ್ರೇಡಿಂಗ್ ಮೂಲಕ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಆಸೆ ತೋರಿಸಿ ತಮ್ಮ ಪುತ್ರನಿಂದ ಹಣ ಪಡೆದು ವಾಪಸ್ ನೀಡದೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ವೆಂಕಟೇಶ್, ಹನುಮಂತಪ್ಪ ಹಾಗೂ ದೇವರಾಜ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಿದ್ದಪ್ಪ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಲಿಂಗದಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
₹35 lakh fraud in the name of online trading
Leave a comment