ಚಿಕ್ಕಮಗಳೂರು: ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು.
ಕೊಪ್ಪ ಪಟ್ಟಣದ ಗುಣವಂತೆ ಗ್ರಾಮದಲ್ಲಿರುವ ಕಸ ಹಾಗೂ ಮಲ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಸ್ವಚ್ಛ ಭಾರತ ಮಿಷನ್ ನಿಯಮ-೨೦೨೬ ರಂತೆ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಟ್ರೋಮರ್ಗಳನ್ನು ಬಳಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಕಗ್ಗ ಗ್ರಾಮದ ಸರ್ವೆ ನಂ ೩೪ ಮತ್ತು ೩೬ ರಲ್ಲಿ ಅರಣ್ಯ/ಕಂದಾಯ ಭೂಮಿ ಕುರಿತಾಗಿ ಜಂಟಿ ಸರ್ವೆ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿದ ಅವರು, ಸರ್ವೇ ಕಾರ್ಯವನ್ನು ಪೂರ್ಣಗೊಳಿಸುವಂತೆ ಹೇಳಿದರು.
ನಂತರ ಕೊಪ್ಪದ ಪ್ರಜಾ ಸೌಧ ಸಭಾಂಗಣದಲ್ಲಿ ಕೊಪ್ಪ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಬೆಳೆವಿಮೆ ಫಸಲು ಬಿಮಾ ಯೋಜನೆ ಪ್ರಗತಿ ಕುಂಟಿತವಾಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಪ್ರಗತಿಯನ್ನು ಚುರುಕುಗೊಳಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿ, ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ಒಳಪಡುವ ಬೆಳೆಹಾನಿ ಸಮೀಕ್ಷೆ ವರದಿಯನ್ನು ಕೂಡಲೇ ಸಲ್ಲಿಸುವಂತೆ ಸೂಚಿಸಿ, ಕೊಪ್ಪದಿಂದ ಚಿಕ್ಕಮಗಳೂರು ರಸ್ತೆ ದುರಸ್ತಿ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.
ಮನೆ, ಸೇತುವೆ, ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳ ಹಾನಿಯ ಕುರಿತು ಜಿಪಿಎಸ್ ಅಳವಡಿಸಿರುವ ಫೋಟೋಗಳ ಸಹಿತ ಅಂದಾಜು ಪಟ್ಟಿಯೊಂದಿಗೆ ವರದಿ ಮಾಡಲು ತಿಳಿಸಿದರು.
ಹೊಸದಾಗಿ ಕೆಪಿಎಸ್ಸಿ ಶಾಲೆಯನ್ನು ಇತರೆ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಶಾಲೆ ಪ್ರಾರಂಭ ಮಾಡುವ ಬಗ್ಗೆ ಕ್ರಮ ವಹಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಯನ್ನು ಕ್ರಮಬದ್ಧವಾಗಿ ನೀಡಬೇಕು. ದುರಸ್ತಿಯಲ್ಲಿರುವ ಶಾಲಾ ಕಟ್ಟಡಗಳ ಬಗ್ಗೆ ಪ್ರಸ್ತಾವನೆಯನ್ಜು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸುವಂತೆ ತಿಳಿಸಿದರು
ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇರುವುದರ ಕುರಿತು ಪ್ರಸ್ತಾವನೆ ಮಂಡಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ ಅವರು, ಈ ಕುರಿತು ಆರೋಗ್ಯ ಇಲಾಖೆಯ ಆಯುಕ್ತರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು, ಕೊಪ್ಪ ತಾಲ್ಲೂಕು ಆಸ್ಪತ್ರೆಯ ವೈದ್ಯರ ಹುದ್ದೆ ಎಂ.ಬಿ,ಬಿ,ಎಸ್ ವೈದ್ಯರು ಪ್ರಸ್ತಾವನೆ ಸಲ್ಲಿಸಿದಲ್ಲಿ ನೇಮಕಾತಿ ಮಾಡುಕೊಳ್ಳಲು ಕ್ರಮವಹಿಸಲಾಗುವುದಾಗಿ
ವಿದ್ಯಾರ್ಥಿ ನಿಲಯದಲ್ಲಿ ಆರೋಗ್ಯ ತಪಾಸಣೆಯನ್ನು ಕಾಲ ಕಾಲಕ್ಕೆ ಮಾಡುವಂತೆ ಕ್ರಮ ವಹಿಸಬೇಕು. ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು.
ಮಳೆ-ಗಾಳಿಯಿಂದ ವಿದ್ಯುತ್ ಕಂಬಗಳು ಹಾನಿಗೆ ಒಳಗಾದಲ್ಲಿ ತುರ್ತು ಕ್ರಮ ವಹಿಸಬೇಕು, ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿಗಳು ಭಾರತ್ ಜೋಡೋ ಕಾರ್ಯಕ್ರಮ ಸಂಘ ರಚನೆಗೆ ಕ್ರಮ ವಹಿಸಬೇಕು ಎಂದು ಸೂಚಿಸಿದರು. ಆರಣ್ಯ ಹಾಗೂ ಭೂ ದಾಖಲೆಗಳ ಇಲಾಖೆಗಳು ಅರಣ್ಯ/ಹಾಗೂ ಕಂದಾಯ ಭೂಮಿಯ ಜಂಟಿ ಸರ್ವೆ ಕಾರ್ಯದಲ್ಲಿ ಪ್ರಗತಿ ಸಾಧಿಸುವಂತೆ ಹೇಳಿದರು.
ಬೆಳಗೊಳ ಗ್ರಾಮ ಆರ್ಡಿ ಕೊಪ್ಪ, ನದಿ ಪ್ರವಾಹದಿಂದ ಭೂಮಿ ಕೊರೆತ ಉಂಟಾಗುತ್ತಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ ಅವರು, ಈ ಸಂಬಂಧ ಪುಸ್ತಾವನೆ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕೊಪ್ಪ ತಹಸೀಲ್ದಾರ್ ಲಿಖಿತಾ ಮೋಹನ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ದಿನೇಶ್ ಸೇರಿದಂತೆ ಕೊಪ್ಪ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
District Collector instructs to dispose of garbage in a scientific manner
Leave a comment