ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ದತ್ತಪೀಠ ಸೇವಾ ಸಮಿತಿಯಿಂದ ಇದೇ ಮೊದಲ ಬಾರಿಗೆ ದತ್ತಮಾಲೆಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಭಾನುವಾರ ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ಇನಾಂದತ್ತಾತ್ರೇಯಸ್ವಾಮಿ ಬಾಬಾಬುಡನ್ ದರ್ಗಾದಲ್ಲಿ ದತ್ತಮಾಲಾ ಕಾರ್ಯಕ್ರಮ ಶಾಂತಿಯುತವಾಗಿ ನಡೆಯಿತು.
ನಗರದ ಶಂಕರಮಠದಲ್ಲಿ ಅಕ್ಟೋಬರ್ ೩೧ರಂದು ದತ್ತಮಾಲೆಯನ್ನು ೪೦ಕ್ಕೂ ಹೆಚ್ಚು ಮಂದಿ ಧರಿಸಿದ್ದರು. ಸಂಜೆ ವ್ರತವನ್ನು ಆಚರಿಸಿಕೊಂಡು ಬಂದಿದ್ದರು. ನವೆಂಬರ್ ೧ ರಂದು ಹಲವು ಮನೆಗಳಿಗೆ ತೆರಳಿ ಪಡಿ ಸಂಗ್ರಹಿಸಿಸಂಜೆ ಅಕ್ಕಿ,ಬೆಲ್ಲ, ತೆಂಗಿನ ಕಾಯಿಯನ್ನು ದತ್ತಾತ್ರೇಯ ಚಿತ್ರಪಟದ ಮುಂದಿಟ್ಟು ಪೂಜೆ ಸಲ್ಲಿಸಿ ಇರುಮುಡಿ ಕಟ್ಟಿದರು.
ಭಾನುವಾರ ಬೆಳಿಗ್ಗೆ ಇರುಮುಡಿಯನ್ನು ಹೊತ್ತು ವಾಹನದಲ್ಲಿ ಸಾಗಿದರು. ದಾರಿಮಧ್ಯೆದಲ್ಲಿ ಸಿಗುವ ಹೊನ್ನಮ್ಮನ ಹಳ್ಳದಲ್ಲಿ ಮಿಂದು ಅಲ್ಲಿಗೆ ಸಾಗಿದ ದತ್ತಭಕ್ತರು ದತ್ತಾತ್ರೇಯರ ನಾಮಸ್ಮರಣೆಯನ್ನು ಮಾಡುತ್ತಾ ದತ್ತಪೀಠದ ಆವರಣ ತಲುಪಿದರು. ಅಲ್ಲಿ ಸರದಿ ಸಾಲಿನಲ್ಲಿ ತೆರಳಿ ಇರುಮುಡಿಯನ್ನು ಸಮರ್ಪಿಸಿ ದತ್ತಾತ್ರೇಯರ ಪಾದುಕೆಗಳ ದರ್ಶನ ಪಡೆದರು.
ಕಳೆದ ವರ್ಷ ಶ್ರೀರಾಮಸೇನೆ ಸಂಘಟನೆಯ ನೇತೃತ್ವದಲ್ಲಿ ದತ್ತಪೀಠ ಸೇವಾ ಸಮಿತಿಯಲ್ಲಿರುವ ಮುಖಂಡರೇ ದತ್ತಮಾಲೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗಮಿಸಿದ್ದರು. ದತ್ತಜಯಂತಿಯನ್ನು ವಿಶ್ವಹಿಂದೂಪರಿಷತ್ ಮತ್ತು ಬಜರಂಗದಳದವರೊಂದಿಗೆ ತೆರಳಿ ದತ್ತಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮುಂದಿನ ದಿನಗಳಲ್ಲಿ ವಿಶ್ವಹಿಂದೂಪರಿಷತ್ ನೇತೃತ್ವದಲ್ಲಿ ನಡೆಯುವ ದತ್ತಜಯಂತಿಯಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಹೇಳಿಕೆ ನೀಡಿದ್ದರು.
ಶ್ರೀರಾಮಸೇನೆ ವಿಶ್ವಹಿಂದೂಪರಿಷತ್ನೊಂದಿಗೆ ವಿಲೀನಗೊಳಿಸಲು ರಾಷ್ಟ್ರೀಯ ಅಧ್ಯಕ್ಷರು ಮುಂದಾಗಿರುವ ಹಿನ್ನಲೆಯಲ್ಲಿ ಶ್ರೀರಾಮಸೇನೆಯಲ್ಲಿದ್ದ ಮುಖಂಡರುಗಳು ಒಟ್ಟಾಗಿ ಹೊಸದಾಗಿ ದತ್ತಪೀಠ ಸೇವಾ ಸಮಿತಿಯನ್ನು ರಚಿಸಿಕೊಂಡಿದ್ದು, ಇದೇ ಮೊದಲಬಾರಿಗೆ ಸಮಿತಿ ಮುಂದಾಳತ್ವದಲ್ಲಿ ಸಮಿತಿ ಜಿಲ್ಲಾ ಸಂಚಾಲಕ ರಂಜಿತ್ಶೆಟ್ಟಿ ನೇತೃತ್ವದಲ್ಲಿ ದತ್ತಮಾಲಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇಂದು ದತ್ತಪೀಠ ಸೇವಾ ಸಮಿತಿಯಿಂದ ನಡೆದ ದತ್ತಮಾಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದತ್ತಭಕ್ತರು ಇರುಮುಡಿಯನ್ನು ಅರ್ಪಿಸುವ ಮೂಲಕ ಕಾರ್ಯಕ್ರಮವನ್ನು ಶಾಂತಿಯುತವಾಗಿ ಮುಕ್ತಾಯಗೊಳಿಸಿದರು.ವಿಶ್ವಧರ್ಮ ಸಂಸ್ಥಾನ ಸಂಸ್ಥಾಪಕ ಯೋಗಿ ಸಂಜಿತ್ಸುವರ್ಣ, ಧರ್ಮ ಚಿಂತಕ ರಾಜೇಂದ್ರಕುಮಾರ್, ನವೀನ್,ರಂಜಿತ್, ಜ್ಞಾನೇಂದ್ರಜೈನ್ ಇದ್ದರು.
Dattamala program peaceful opening
Leave a comment