ಚಿಕ್ಕಮಗಳೂರು: ದೀಪ ತಾನು ಉರಿದು ಬೇರೆಯವರಿಗೆ ಬೆಳಕನ್ನು ನೀಡುತ್ತದೆ. ಅದೇ ರೀತಿ ನಮ್ಮ ಮಕ್ಕಳು ಜಗತ್ತನ್ನು ಬೆಳಗುವ ದೀಪಗಳಾಗಬೇಕೇ ಹೊರತು ಬೇರೆಯವರ ಮನೆಗೆ ಬೆಂಕಿ ಹಚ್ಚುವ ಕಿಡಿಗಳಾಗಬಾರದು ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಅಭಿಪ್ರಾಯಪಟ್ಟರು.
ನಗರದ ಹೊರವಲಯದ ಇಂತಹವರದಲ್ಲಿರುವ ಶ್ರೀ ಕಾಮಧೇನು ಗೋ ಶಾಲೆಯಲ್ಲಿ ಜೈ ಸಮಾಜದ ಗೋಬಕ್ತರಿಂದ ಆಯೋಜಿಸಲಾಗಿದ್ದ ದೀಪಾವಳಿ ಸ್ನೇಹ ಮಿಲನ ಗೋಮಾತೆಯೊಂದಿಗೆ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಕನ್ನಡ ಮಣ್ಣಿನ ಶಕ್ತಿಯೇ ಅನನ್ಯವಾದುದು. ಈ ಮಣ್ಣಿನ ಹೆಣ್ಣು ತನ್ನ ಮಕ್ಕಳು ಆಚಾರಕ್ಕೆ ಅರಸರಾಗಲಿ, ನೀತಿಗೆ ದೊರೆಯಾಗಲಿ, ಜಗಕ್ಕೆ ಜ್ಯೋತಿಯಾಗಲಿ ಎಂದು ಬಯಸುತ್ತಾರೆ. ಇಂಥ ತಾಯಂದಿತ ಉದಾತ್ತ ಗುಣಗಳನ್ನು ಮಕ್ಕಳು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಭಾರತೀಯ ಸಂಸ್ಕೃತಿಯಲ್ಲಿ ಹಸುವಿಗೆ ಅನಾದಿಕಾಲದಿಂದಲೂ ವಿಶೇಷ ಸ್ಥಾನಮಾನ ನೀಡಲಾಗಿದೆ. ನಮ್ಮ ದೇಶದ ಚರಿತ್ರೆ ಮತ್ತು ಸಂಸ್ಕೃತಿಯನ್ನು ವಿಸ್ತರಿಸಿರುವಾಗ ದಾರ್ಶನಿಕರು ನೀಡುವ ಪರಮೋಚ್ಚ ಉದಾಹರಣೆ ಗೋಮಾತೆಯಾಗಿತ್ತು. ಇದಲ್ಲದೆ ಸತ್ಯ ಪರಿಪಾಲನೆಗೆ ನಮ್ಮ ಹಿರಿಯರು ಉದಾಹರಣೆ ನೀಡಿದ್ದು ಗೋ ಮಾತೆಯನ್ನೇ ಎಂಬುದು ವಿಶೇಷವಾಗಿದೆ ಎಂದು ಹೇಳಿದರು.
ಗೋವುಗಳನ್ನು ಕಸಾಯಿ ಖಾನೆಗೆ ಸಾಧಿಸುವವರು ಒಂದು ಹೃದಯವನ್ನು ಸುಡುವವರು. ಅದೇ ಗೋವನ್ನು ಸಂರಕ್ಷಿಸುವವರು ಇನ್ನೊಂದು ಜೀವವನ್ನು ಬದುಕಿಸಿದ ಜ್ಯೋತಿಯಾಗುತ್ತಾರೆ. ಮನುಕುಲ ಶರೀರಕವಾಗಿ ಸದೃಢ ಹಾಗೂ ಆರೋಗ್ಯಯುತವಾಗಿದೆ ಎಂದರೆ ಅದಕ್ಕೆ ಗೋಮಾತೆಯೇ ಕಾರಣ. ಹೀಗಾಗಿ ಗೋ ಸಂಕುಲ ಉಳಿಸಿ ಬೆಳೆಸಲು ಪ್ರತಿಯೊಬ್ಬರು ಪಣತೊಡಬೇಕು ಎಂದು ಕರೆ ನೀಡಿದರು.
ಮನುಷ್ಯನನ್ನು ಹೊರತುಪಡಿಸಿ ಮರ, ಗಿಡ, ನದಿ, ಪ್ರಾಣಿ, ಪಕ್ಷಿ ಹೀಗೆ ಪ್ರತಿಯೊಂದು ಜೀವಸಂಕುಲವೂ ಪರೋಪಕಾರಿ ಗುಣ ಹೊಂದಿವೆ. ಅದರಲ್ಲಿಯೂ ಗೋಮಾತೆಯಂತೂ ಪರೋಪಕಾರಕ್ಕೆ ಉತ್ತಮ ನಿದರ್ಶನವಾಗಿದೆ. ಮನುಷ್ಯನ ಹುಟ್ಟಿನಿಂದ ಹಿಡಿದು ಸಾವಿನವರೆಗೆ ಗೋಮಾತೆ ಆತನ ಉದ್ದಾರಕ್ಕೆ ಶ್ರಮಿಸುತ್ತದೆ. ಇಂಥ ಗೋ ಮಾತೆಯನ್ನು ಸಾಯಿಸುವ ಮಟ್ಟಕ್ಕೆ ಇಳಿಯುವುದು ಮನುಷ್ಯನ ನೀಚ ತನವನ್ನು ತೋರಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಾಲಿನ ಮೌಲ್ಯವರ್ಧನೆ ಮಾಡಿದಾಗ ಅದು ಮೊಸರಾಗುತ್ತದೆ. ಮೊಸರನ್ನು ಮೌಲ್ಯವರ್ಧನೆ ಮಾಡಿದಾಗ ಬೆಣ್ಣೆ, ಬೆಣ್ಣೆಯಿಂದ ತುಪ್ಪವಾಗುತ್ತದೆ. ತುಪ್ಪ ಹಳೆಯದಾದಷ್ಟೂ ಅದರ ಮೌಲ್ಯ ಹೆಚ್ಚುತ್ತದೆ. ಇದೇ ರೀತಿ ವ್ಯಕ್ತಿಯನ್ನು ಒಂದು ಸಂಸ್ಕಾರಕ್ಕೆ ಒಳಪಡಿಸಿದಾಗ ಆತ ಒಬ್ಬ ಮನುಷ್ಯನಾಗುತ್ತಾನೆ. ಆ ಮನುಷ್ಯನಿಗೆ ನಿರಂತರವಾಗಿ ಸಂಸ್ಕಾರ ನೀಡುತ್ತಾ ಹೋದಂತೆ ಆತನ ಮೌಲ್ಯವು ಹೆಚ್ಚಾಗುತ್ತದೆ ಎಂದು ಪ್ರತಿಪಾದಿಸಿದರು.
ಒಬ್ಬ ತಾಯಿ ತನಗೆ ಎಷ್ಟೇ ಮಕ್ಕಳಿದ್ದರೂ ಎಲ್ಲರಿಗೂ ಸಮಾನವಾದ ಪ್ರೀತಿ ನೀಡುತ್ತಾಳೆ. ಆದರೆ ಅದೇ ಮಕ್ಕಳು ತಮ್ಮ ತಂದೆ ತಾಯಿಯರಿಗೆ ಸಮಾನ ಪ್ರೀತಿ ನೀಡುತ್ತಾರೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಗೋಶಾಲೆಯ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಮುಖಂಡ ಮಲ್ಲಿಕಾರ್ಜುನ್, ಕಾಮದೇನು ಗೋ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಭಗವಾನ್ ರಾಮಪಂತ್, ಬಾಣವರದ ಮಹಾವೀರ ಗೋಶಾಲೆಯ ಮುಖ್ಯಸ್ಥ ಭರತ್ ಜೈನ್ ಸೇರಿದಂತೆ ಜೈನ ಸಂಘದ ವಿವಿಧ ಮುಖಂಡರು ಉಪಸ್ಥಿತರಿದ್ದರು.
Let children be the lights that illuminate the world
Leave a comment