ಎನ್.ಆರ್.ಪುರ : ಅನಾರೋಗ್ಯದಿಂದ ಬಳಲುತ್ತಿದ್ದ ಸಂಬಂಧಿಕರನ್ನು ಮಾತನಾಡಿಸಿಕೊಂಡು ಊರಿಗೆ ಮರಳುತ್ತಿದ್ದ ಕುಟುಂಬಕ್ಕೆ ಮಾರ್ಗಮಧ್ಯೆಯೇ ಭೀಕರ ವಿಧಿ ಅಪ್ಪಳಿಸಿದ್ದು, ನಿಯಂತ್ರಣ ತಪ್ಪಿದ ಆಟೋ ರಿಕ್ಷಾವೊಂದು ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇತರ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಮನಕಲಕುವ ಘಟನೆ ಬಾಳೆಹೊನ್ನೂರು ಸಮೀಪದ ಕಾರ್ಗದ್ದೆ ಹಳ್ಳದ ಬಳಿ ಸಂಭವಿಸಿದೆ.
ಶೃಂಗೇರಿ ತಾಲೂಕಿನ ಮಸಿಗೆ ಗ್ರಾಮದ ನಿವಾಸಿಗಳಾದ ಶ್ರೀನಿವಾಸ, ಅವರ ಪತ್ನಿ ಸುಮಾ (57) ಹಾಗೂ ಕೃಷ್ಣ ಎಂಬುವವರು ಕುಹಡ್ಲುವಿನಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಸಂಬಂಧಿಕರನ್ನು ನೋಡಲು ಬಾಳೆಹೊನ್ನೂರಿಗೆ ತೆರಳಿದ್ದರು. ರಾತ್ರಿ 9 ಗಂಟೆಯ ಸುಮಾರಿಗೆ ಪ್ರಭಾಕರ್ ಎಂಬುವವರ ಆಟೋ ರಿಕ್ಷಾದಲ್ಲಿ ವಾಪಸ್ ಊರಿಗೆ ಪ್ರಯಾಣಿಸುತ್ತಿದ್ದಾಗ, ಕಾರ್ಗದ್ದೆ ಹಳ್ಳದ ಸಮೀಪ ಚಾಲಕನ ದುಡುಕುತನ ಹಾಗೂ ಅತಿಯಾದ ವೇಗದಿಂದಾಗಿ ಆಟೋ ನಿಯಂತ್ರಣ ಕಳೆದುಕೊಂಡು ಏಕಾಏಕಿ ಚರಂಡಿಗೆ ಉರುಳಿಬಿದ್ದಿದೆ ಎಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ ಆರೋಪಿಸಲಾಗಿದೆ.
ಅಪಘಾತದ ತೀವ್ರತೆಗೆ ವಾಹನದಲ್ಲಿದ್ದ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ತಲೆ ಹಾಗೂ ಮುಖಕ್ಕೆ ತೀವು ಪೆಟ್ಟು ಬಿದ್ದಿದ್ದ ಸುಮಾ ಅವರನ್ನು ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಅದಾಗಲೇ ಕೊನೆಯುಸಿರೆಳೆದಿರುವುದಾಗಿ ಘೋಷಿಸಿದರು.
ಗಂಭೀರ ಸ್ಥಿತಿಯಲ್ಲಿದ್ದ ಶ್ರೀನಿವಾಸ ಹಾಗೂ ತೀವ್ರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಪ್ರಭಾಕರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಕೃಷ್ಣ ಅವರ ದೂರಿನ ಆಧಾರದ ಮೇಲೆ ಚಾಲಕನ ನಿರ್ಲಕ್ಷ್ಯದ ವಿರುದ್ಧ ಬಾಳೆಹೊನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Woman dies after auto-rickshaw overturns after losing control
Leave a comment