ಚಿಕ್ಕಮಗಳೂರು: ಪ್ರಯಾಣಿಕರಿಂದ ನಿಯಮಬಾಹಿರವಾಗಿ ಹೆಚ್ಚುವರಿ ಟಿಕೆಟ್ ದರ ವಸೂಲಿ ಮಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (KSRTC) ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಬಿಸಿ ಮುಟ್ಟಿಸಿದೆ. ಹೆಚ್ಚುವರಿಯಾಗಿ ಪಡೆದ ಟಿಕೆಟ್ ದರ 13.50 ರೂಪಾಯಿಗಳನ್ನು ಹಿಂದಿರುಗಿಸುವುದರ ಜೊತೆಗೆ, ದೂರುದಾರರಿಗೆ ಪರಿಹಾರ ಮತ್ತು ವ್ಯಾಜ್ಯ ವೆಚ್ಚ ಸೇರಿ ಒಟ್ಟು 2,000 ರೂಪಾಯಿ ಪಾವತಿಸುವಂತೆ ಮಹತ್ವದ ತೀರ್ಪು ನೀಡಿದೆ.
ಬಿಳೇಕಳ್ಳಿ ಗ್ರಾಮದ ನಿವಾಸಿಗಳಾದ ಎಸ್.ಆರ್.ಗಿರೀಶ್ ಕುಮಾರ್ ಹಾಗೂ ರಘುಪತೇಗೌಡ ಅವರು ಕಡೂರಿನಿಂದ ಸಖರಾಯಪಟ್ಟಣಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ವಾಸ್ತವವಾಗಿ ನಿಯಮದ ಪ್ರಕಾರ ಇಬ್ಬರಿಗೆ ತಲಾ 33 ರೂಪಾಯಿಯಂತೆ ಒಟ್ಟು 66 ರೂಪಾಯಿ ಪಡೆಯಬೇಕಿತ್ತು. ಆದರೆ ಬಸ್ಸಿನ ಚಾಲಕ ಕಂ ನಿರ್ವಾಹಕನು ಹೆಚ್ಚುವರಿಯಾಗಿ 20 ರೂಪಾಯಿ ಸೇರಿಸಿ, ಒಟ್ಟು 86 ರೂಪಾಯಿಗಳನ್ನು ವಸೂಲಿ ಮಾಡಿದ್ದರು. ನಿಗಮದ ಈ ಅನುಚಿತ ವ್ಯಾಪಾರ ಪದ್ಧತಿ ಮತ್ತು ಸೇವಾ ನ್ಯೂನತೆಯನ್ನು ಪ್ರಶ್ನಿಸಿ ಗಿರೀಶ್ ಕುಮಾರ್ ಅವರು ಗ್ರಾಹಕರ ಆಯೋಗದ ಮೆಟ್ಟಿಲೇರಿದ್ದರು.
ಈ ಪ್ರಕರಣದ ವಿಚಾರಣೆ ವೇಳೆ ನಿಗಮವು, ಸದರಿ ಬಸ್ ಹಾಸನಾಂಬ ಜಾತ್ರಾ ವಿಶೇಷ ವಾಹನವಾಗಿದ್ದು, ಕೇಂದ್ರ ಕಚೇರಿಯ ಆದೇಶ ಹಾಗೂ ಅನುಮೋದನೆಯ ಮೇರೆಗೆ ಜಾತ್ರಾ ಪಾಯಿಂಟ್ ಕೋಡ್ ಅಳವಡಿಸಿ ಹೆಚ್ಚುವರಿ ದರ ಪಡೆಯಲಾಗಿತ್ತು ಎಂದು ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳಲು ಯತ್ನಿಸಿತು.
ಆದರೆ ನಿಗಮ ಸಲ್ಲಿಸಿದ ಸಾಕ್ಷ್ಯಾಧಾರಗಳು, ಪ್ರಶ್ನಾವಳಿ ಹಾಗೂ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಆಯೋಗವು, ಸಾಮಾನ್ಯ ಪ್ರಯಾಣಿಕರಿಂದ ಈ ರೀತಿ ಅಕ್ರಮವಾಗಿ ಹೆಚ್ಚಿನ ದರ ಪಡೆದಿರುವುದು ಸ್ಪಷ್ಟ ಸೇವಾ ನ್ಯೂನತೆ ಎಂದು ತೀರ್ಮಾನಿಸಿತು.
ಹೆಚ್ಚುವರಿ ಟಿಕೆಟ್ ಮೊತ್ತ 13.50 ರೂಪಾಯಿ, ಮಾನಸಿಕ ಕಿರುಕುಳಕ್ಕೆ ಪರಿಹಾರವಾಗಿ 1,000 ರೂಪಾಯಿ ಹಾಗೂ ವ್ಯಾಜ್ಯ ವೆಚ್ಚ 1,000 ರೂಪಾಯಿಗಳನ್ನು ಆದೇಶವಾದ 45 ದಿನಗಳ ಒಳಗೆ ದೂರುದಾರರಿಗೆ ಪಾವತಿಸಬೇಕು; ತಪ್ಪಿದಲ್ಲಿ ಒಟ್ಟು ಮೊತ್ತಕ್ಕೆ ವಾರ್ಷಿಕ ಶೇ. 12 ರಷ್ಟು ಬಡ್ಡಿ ಸೇರಿಸಿ ನೀಡಬೇಕೆಂದು ಆಯೋಗ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಈ ತೀರ್ಪನ್ನು ಆಯೋಗದ ಅಧ್ಯಕ್ಷ ಎನ್.ಆರ್. ಚೆನ್ನಕೇಶವ ಹಾಗೂ ಸದಸ್ಯರಾದ ಈ. ಪ್ರೇಮಾ ಮತ್ತು ಸಿ.ಹೆಚ್. ಸಮೀವುಸಾ ಅಬ್ರಾರ್ ಅವರಿದ್ದ ಪೀಠ ನೀಡಿದೆ.
Notice for compensation against charging additional ticket prices
Leave a comment