ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು ಜಾನುವಾರುಗಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಘಟನೆ ನರಸಿಂಹರಾಜಪುರ ತಾಲೂಕಿನ ಗದ್ದೆಮನೆ ಕಾನೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಶೈಲಾ (57) ಎಂಬುವರ ಜಾನುವಾರುಗಳು ಮೃತಪಟ್ಟಿದ್ದು, ಈ ಸಂಬಂಧ ಅವರು ನರಸಿಂಹರಾಜಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶೈಲಾ ಅವರು ತಮ್ಮ ತೋಟದಲ್ಲಿ ಗೊಬ್ಬರ ಹಾಗೂ ಹಾಲಿನ ಉದ್ದೇಶಕ್ಕಾಗಿ ಆರು ಜಾನುವಾರುಗಳನ್ನು ಸಾಕುತ್ತಿದ್ದು, ಪ್ರತಿದಿನ ಜಾನುವಾರುಗಳನ್ನು ಮೇಯಲು ಕಾಡಿಗೆ ಬಿಡುತ್ತಿದ್ದರು. ಆಗಸ್ಟ್ 11ರಂದು ಬೆಳಿಗ್ಗೆ 8 ಗಂಟೆಗೆ ಎಂದಿನಂತೆ ಜಾನುವಾರುಗಳನ್ನು ಮೇಯಲು ಕಾಡಿಗೆ ಬಿಟ್ಟ ಬಳಿಕ ಅವರು ಶಾಲೆಯಲ್ಲಿ ಬಿಸಿಯೂಟ ತಯಾರಿಸಲು ತೆರಳಿದ್ದರು.
ಮಧ್ಯಾಹ್ನ 12.15ರ ಸುಮಾರಿಗೆ ಗ್ರಾಮದ ನಾಗರಾಜ್ ಎಂಬುವರು ಕರೆ ಮಾಡಿ, ಶ್ರವಣ್ ಕುಮಾರ್ ಎಂಬುವರ ಜಮೀನಿನ ಐಬೆಕ್ಸ್ ತಂತಿ ಬೇಲಿಗೆ ಸಿಲುಕಿ ಎರಡು ಜಾನುವಾರುಗಳು ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ. ಬಳಿಕ ಶಾಲೆಯ ಕೆಲಸ ಮುಗಿಸಿ ಮಧ್ಯಾಹ್ನ 2.30ರ ಸುಮಾರಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ತಮ್ಮ ಮನೆಯ ಒಂದು ಹೋರಿಕರು ಹಾಗೂ ಒಂದು ದನ ಮೃತಪಟ್ಟಿರುವುದು ಕಂಡುಬಂದಿದೆ.
ಐಬೆಕ್ಸ್ ತಂತಿ ಬೇಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಶೈಲಾ ಅವರು ಕೆಇಬಿ ಲೈನ್ಮ್ಯಾನ್ ಸುನೀಲ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಲೈನ್ಮ್ಯಾನ್ ತಂತಿಯನ್ನು ಪರಿಶೀಲಿಸಿದಾಗ, ಬೇಲಿಗೆ ಮನೆಯ ವಿದ್ಯುತ್ ಸಂಪರ್ಕದಿಂದ ವಿದ್ಯುತ್ ಹರಿಸಲಾಗಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಜಾನುವಾರುಗಳು ಜಮೀನಿಗೆ ಪ್ರವೇಶಿಸದಂತೆ ಶ್ರವಣ್ ಕುಮಾರ್ ಅವರು ಐಬೆಕ್ಸ್ ತಂತಿ ಬೇಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, ಇದರಿಂದ ತಲಾ ಸುಮಾರು ₹15 ಸಾವಿರ ಮೌಲ್ಯದ ಎರಡು ಜಾನುವಾರುಗಳು ಮೃತಪಟ್ಟಿವೆ ಎಂದು ಶೈಲಾ ಆರೋಪಿಸಿದ್ದಾರೆ.
ಘಟನೆ ಕುರಿತು ಲೈನ್ಮ್ಯಾನ್ 112 ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶ್ರವಣ್ ಕುಮಾರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶೈಲಾ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.
Two cattle die due to electric shock
Leave a comment