ಶೃಂಗೇರಿ: ತಾಲೂಕಿನ ಕಿಗ್ಗಾ ಸಮೀಪದ ಯಡದಳ್ಳಿ ಗ್ರಾಮದ ಕೊಚ್ಚಾರಿನಲ್ಲಿರುವ ಐತಿಹಾಸಿಕ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು, ದೈವ ಸನ್ನಿಧಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿಯ ಆಭರಣಗಳು ಹಾಗೂ ಕಾಣಿಕೆ ಹಣ ಲೂಟಿಯಾಗಿದೆ.
ಏ. 17ರ ರಾತ್ರಿ ಅರ್ಚಕರು ಪೂಜೆ ಮುಗಿಸಿ ದೇವಸ್ಥಾನಕ್ಕೆ ಬೀಗ ಹಾಕಿಕೊಂಡು ಹೋಗಿದ್ದ ಸಂದರ್ಭವನ್ನು ಬಳಸಿಕೊಂಡ ಖದೀಮರು, ದೇವಸ್ಥಾನದ ಮುಖ್ಯ ದ್ವಾರ ಹಾಗೂ ಗರ್ಭಗುಡಿಯ ಬೀಗವನ್ನು ಒಡೆದು ಒಳನುಗ್ಗಿದ್ದಾರೆ.
ದೇವಸ್ಥಾನದ ಗರ್ಭಗುಡಿಯಲ್ಲಿದ್ದ ಸುಮಾರು 1,50,000 ರೂಪಾಯಿ ಮೌಲ್ಯದ ಬೆಳ್ಳಿಯ ಪ್ರಭಾವಳಿ, 30,000 ರೂಪಾಯಿ ಬೆಲೆಯ ಬೆಳ್ಳಿಯ ಚೊಂಬು, 15,000 ರೂಪಾಯಿ ಮೌಲ್ಯದ ಬೆಳ್ಳಿಯ ತಟ್ಟೆ, ಸುಮಾರು 25,000 ರೂಪಾಯಿ ಬೆಲೆಬಾಳುವ ಎರಡು ಬೆಳ್ಳಿಯ ಕೌಳಿಗೆ ಹಾಗೂ ಸೌಟುಗಳನ್ನು ಕಳ್ಳರು ದೋಚಿದ್ದಾರೆ.
ಇಷ್ಟೇ ಅಲ್ಲದೆ, ಭಕ್ತರು ಸಮರ್ಪಿಸಿದ್ದ ಸುಮಾರು 20,000 ರೂಪಾಯಿ ನಗದು ಹೊಂದಿದ್ದ ಕಾಣಿಕೆ ಪೆಟ್ಟಿಗೆಯನ್ನೂ ಸಹ ಖದೀಮರು ಹೊತ್ತೊಯ್ದಿದ್ದು, ಒಟ್ಟು 2,40,000 ರೂಪಾಯಿ ಮೌಲ್ಯದ ಸ್ವತ್ತು ಕಳ್ಳತನವಾಗಿದೆ ಎಂದು ಅಂದಾಜಿಸಲಾಗಿದೆ.
ಮರುದಿನ ಬೆಳಗ್ಗೆ ಎಂದಿನಂತೆ ಪೂಜೆಗಾಗಿ ಅರ್ಚಕ ಶೃಂಗೇಶ್ವರ ಭಟ್ ಅವರು ದೇವಸ್ಥಾನಕ್ಕೆ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದ್ದು, ಕೂಡಲೇ ಸುಧೀಂದ್ರ ಬಿ ಎಸ್ ಎಂಬುವವರು ಈ ಬಗ್ಗೆ ಶೃಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಶೃಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿ ತನಿಖೆ ಚುರುಕುಗೊಳಿಸಿದ್ದಾರೆ. ಪವಿತ್ರ ಕ್ಷೇತ್ರದಲ್ಲಿ ನಡೆದ ಈ ಕಳ್ಳತನದ ಘಟನೆಯಿಂದ ಭಕ್ತರಲ್ಲಿ ಆತಂಕ ಮನೆಮಾಡಿದೆ.
Theft at Sri Lakshmi Narasimha Swamy Temple
Leave a comment