ಅಜ್ಜಂಪುರ: ರೈತರೊಬ್ಬರ ಎತ್ತಿನ ಗಾಡಿ ಕಳ್ಳತನವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಆಸಂಧಿ ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ ಎಂಬುವವರು ಕಳೆದುಹೋದ ತಮ್ಮ ಕಬ್ಬಿಣದ ಎತ್ತಿನ ಗಾಡಿಗಾಗಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಲ್ಲಪ್ಪ ಅವರು ಸುಮಾರು 15 ವರ್ಷಗಳ ಹಿಂದೆ ಹೊಸದುರ್ಗದ ಟಿಬಿ ಸರ್ಕಲ್ನಲ್ಲಿರುವ ಗೌಸಿಯಾ ವೆಲ್ಡಿಂಗ್ ಶಾಪ್ನಲ್ಲಿ ಈ ಕಬ್ಬಿಣದ ಟೈರ್ ಗಾಡಿಯನ್ನು ಮಾಡಿಸಿದ್ದರು. ಇದನ್ನು ಅವರು ತಮ್ಮ ಅಸಂಧಿ-ಮುದಿಗೆರೆ ರಸ್ತೆಯ ಪಕ್ಕದಲ್ಲಿರುವ ಸ್ವಂತ ಶೆಡ್ ಮುಂಭಾಗದಲ್ಲಿ ಪ್ರತಿದಿನ ನಿಲ್ಲಿಸುತ್ತಿದ್ದರು.
ಮಾರ್ಚ್ 23ರ ರಾತ್ರಿ 10 ಗಂಟೆ ಸುಮಾರಿಗೆ ದನಗಳಿಗೆ ಮೇವು ಹಾಕಿ ಎತ್ತಿನ ಗಾಡಿಯನ್ನು ಗಮನಿಸಿ ಮನೆಗೆ ತೆರಳಿದ್ದ ಇವರು, ಮರುದಿನ ಬೆಳಿಗ್ಗೆ 7 ಗಂಟೆಗೆ ಹಾಲು ಕರೆಯಲು ಬಂದಾಗ ಗಾಡಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಸುಮಾರು 15 ಸಾವಿರ ರೂಪಾಯಿ ಮೌಲ್ಯದ ಈ ಎತ್ತಿನ ಗಾಡಿಯನ್ನು ಮಾರ್ಚ್ 23ರ ರಾತ್ರಿ 10 ರಿಂದ ಮಾರ್ಚ್ 24ರ ಬೆಳಿಗ್ಗೆ 7 ಗಂಟೆಯ ಮಧ್ಯದ ಅವಧಿಯಲ್ಲಿ ಕಳ್ಳರು ಅಪಹರಿಸಿದ್ದಾರೆ ಎಂದು ಶಂಕಿಸಲಾಗಿದೆ. ಈ ಸಂಬಂಧ ಮಲ್ಲಪ್ಪ ಅವರು ನೀಡಿದ ದೂರಿನ ಮೇರೆಗೆ ಅಜ್ಜಂಪುರ ಪೊಲೀಸರು ಕಳ್ಳರ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.
Bullock cart theft of a farmer in Asandhi village of Ajjampur taluk
Leave a comment