ಚಿಕ್ಕಮಗಳೂರು: ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ‘ಸಮಾಧಾನ್ ಸಮಾರೋಹ್’ ಶೀರ್ಷಿಕೆಯಡಿ ವಿಶೇಷ ಲೋಕ ಅದಾಲತ್ ಅನ್ನು ಆಗಸ್ಟ್ ೨೧, ೨೨ ಹಾಗೂ ೨೩ ರಂದು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷೆ, ಗೌರವಾನ್ವಿತ ಹೈಕೋರ್ಟ್ ನ್ಯಾ.ಅನು ಶಿವರಾಮ್ ತಿಳಿಸಿದರು.
ವೀಡಿಯೋ ಕಾನ್ಫರೆನ್ಸ್ ಮುಖೇನ ಗುರುವಾರ ಸಂಜೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅದಾಲತ್ಗೆ ರಾಜ್ಯಾದ್ಯಂತ ವ್ಯಾಪಕ ಪ್ರಚಾರ ನೀಡುವ ಮೂಲಕ ಈ ಪರಿಕಲ್ಪನೆಯನ್ನು ಪರಿಚಯಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಉಚ್ಚ ನ್ಯಾಯಾಲಯ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ಹಾಗೂ ಗೌರವಾನ್ವಿತ ಹೈಕೋರ್ಟ್ ನ್ಯಾ.ಆರ್.ದೇವದಾಸ್ ಮಾತನಾಡಿ, ರಾಜ್ಯದಲ್ಲಿ ೪೩೨೮ ಪ್ರಕರಣಗಳನ್ನು ಈಗಾಗಲೇ ಈ ರಾಜ್ಯಕ್ಕೆ ಸಂಬಂಧಿಸಿದ ಮಧ್ಯಸ್ಥಿಕೆ ಪ್ರಕರಣಗಳನ್ನು ಗುರುತಿಸಿ ಕಳುಹಿಸಲಾಗಿದೆ. ಈ ಪರಿಕಲ್ಪನೆಯನ್ನು ಇಡೀ ರಾಜ್ಯಕ್ಕೆ ಪರಿಚಯಿಸಬೇಕಿದೆ. ಬಹುಶಃ ಇದು ಸರ್ವೋಚ್ಚ ನ್ಯಾಯಾಲಯದ ಪ್ರಪ್ರಥಮ ಪ್ರಯೋಗ ಇದಾಗಿದೆ. ಈಗಾಗಲೇ ಸುಪ್ರೀಂ ಕೋರ್ಟ್ನಿಂದ ಗುರುತಿಸಿರುವ ಪ್ರಕರಣವಲ್ಲದೇ ಮಿಕ್ಕ ಸುಪ್ರೀಂ ಕೋರ್ಟ್ನ ಪ್ರಕರಣಗಳನ್ನು ಸಹ ಅದಾಲತ್ನಲ್ಲಿ ಭಾಗಿಯಾಗಿ ಇತ್ಯರ್ಥಪಡಿಸಿಕೊಳ್ಳಲು ಮುಂದಾಗಬೇಕೆನ್ನುವ ಉದ್ದೇಶವೂ ಈ ಪ್ರಯತ್ನದ ಹಿನ್ನೆಲೆಯಲ್ಲಿದೆ ಎಂದು ತಿಳಿಸಿದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗೌರವಾನ್ವಿತ ನ್ಯಾ.ಶಶಿಧರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.
ಜಿಲ್ಲಾ ನ್ಯಾಯಾಲಯದಲ್ಲಿ ವೀಡಿಯೋ ಕಾನ್ಫರೆನ್ಸ್ ಬಳಿಕ ಈ ಜಿಲ್ಲೆಗೆ ಸಂಬಂಧಿಸಿದ ಮಾಹಿತಿ ನೀಡಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿ.ಹನುಮಂತಪ್ಪ ಅವರು, ಸುಪ್ರೀಂ ಕೋರ್ಟ್ನಿಂದ ಕಳುಹಿಸಿದ ಈ ಜಿಲ್ಲೆಯ ಪ್ರಕರಣಗಳನ್ನು ಮಧ್ಯಸ್ಥಿಕೆದಾರರಿಗೆ ವರ್ಗಾಯಿಸಿ, ಕಕ್ಷಿದಾರರಿಗೆ ನೋಟಿಸ್ಗಳನ್ನು ಜಾರಿಗೊಳಿಸಲಾಗುವುದು. ಅವರು ಹಾಗೂ ಅವರುಗಳ ವಕೀಲರ ವಾಟ್ಸಾಪ್ ಸಂಖ್ಯೆ ಅಥವಾ ಇ-ಮೇಲ್ ವಿಳಾಸಗಳನ್ನು ಸಂಗ್ರಹಿಸಿ ಅವರೊಂದಿಗೆ ಸಂಪರ್ಕ ಸಾಧಿಸಿದ ಬಳಿಕ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ತಿಳಿಸಿದರು.
ಕಕ್ಷಿದಾರರಿಗೆ ಖುದ್ದು ವಿಚಾರಣೆಗೆ ಭಾಗವಹಿಸಲು ಸಾಧ್ಯವಾಗದೆ ವಿ.ಸಿ. ಮುಖಾಂತರ ಹಾಜರಾಗುವುದಿದ್ದಲ್ಲಿ ಅದಕ್ಕೆ ಅವಕಾಶ ಮಾಡಿಕೊಡಲಾಗುವುದು. ಒಂದು ವೇಳೆ ಅವರು ಬೇರೆ ರಾಜ್ಯಗಳಲ್ಲಿ ಅಥವಾ ಹೊರ ದೇಶಗಳಲ್ಲಿ ಇದ್ದರೂ ಸಹ ಈ ಹಂತದಲ್ಲೇ, ರಜಾ ದಿನಗಳಲ್ಲೂ ಅವರುಗಳ ಪ್ರಕರಣಗಳನ್ನು ಮಧ್ಯಸ್ಥಿಕೆ ಮೂಲಕ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಪ್ರಕರಣಗಳಲ್ಲಿ ಮಧ್ಯಸ್ಥಿಕೆ ವಹಿಸುವಿಕೆ ಇದೀಗ ಏಪ್ರಿಲ್ ೨೧ ರಿಂದಲೇ ಆರಂಭವಾಗಿದ್ದು, ಅಂತಿಮವಾಗಿ ಆಗಸ್ಟ್ ೨೧, ೨೨ ಹಾಗೂ ೨೩ ರಂದು ಪೂರ್ಣಗೊಳ್ಳಲಿದೆ ಎಂದರು.
ಈ ಜಿಲ್ಲೆಗೆ ಸೇರಿದ ಒಟ್ಟು ೨೭ ಪ್ರಕರಣಗಳಿದ್ದು. ಅವುಗಳಲ್ಲಿ ಮುಖ್ಯವಾಗಿ ಚೆಕ್ಬೌನ್ಸ್ ಪ್ರಕರಣಗಳು, ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಪ್ರಕರಣಗಳು, ವಿಭಾಗ ಪ್ರಕರಣಗಳು, ಒಡಂಬಡಿಕೆಗೆ ಸಂಬಂಧಿಸಿದ ಪ್ರಕರಣಗಳು, ಅಪಘಾತದ ಪರಿಹಾರ ಪ್ರಕರಣಗಳು ಹಾಗೂ ಭೂಸ್ವಾಧೀನ ಪ್ರಕರಣಗಳು ಇದ್ದು, ಅವುಗಳನ್ನು ಮಧ್ಯಸ್ಥಿಕೆಯ ಮೂಲಕವೇ ಇತ್ಯರ್ಥಪಡಿಸಲಾಗುವುದು. ಅನೇಕ ಪ್ರಕರಣಗಳಲ್ಲಿ ಹಿರಿಯರು ನಿಧನರಾಗಿ ಅವರ ಉತ್ತರಾಧಿಕಾರಿಗಳು ಕೇಸುಗಳಿಗೆ ಹಾಜರಾಗುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ಪ್ರಕರಣಗಳ ಶೀಘ್ರ ವಿಲೇವಾರಿಗೆ ಅವರ ಮನವೊಲಿಸಲಾಗುವುದು ಎಂದು ತಿಳಿಸಿದರು.
Samadhan Samaroh Special Lok Adalat from August 21
Leave a comment