ಚಿಕ್ಕಮಗಳೂರು: ಸಕಾಲದಲ್ಲಿ ಆಹಾರ ಪದಾರ್ಥವನ್ನು ತಲುಪಿಸದೆ ಆಹಾರ ಸಾಮಗ್ರಿಗಳು ಹಾಳಾಗಲು ಕಾರಣವಾದ ಡಿಟಿಡಿಸಿ ಎಕ್ಸ್ಪ್ರೆಸ್ ಲಿಮಿಟೆಡ್ ಸಂಸ್ಥೆ ಸೇವಾ ನ್ಯೂನತೆ ಎಸಗಿತೆಂಬ ಹಿನ್ನೆಲೆಯಲ್ಲಿ ಸಂಸ್ಥೆಯ ವಿರುದ್ಧ ತೀರ್ಪು ನೀಡಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಪರಿಹಾರ ಹಾಗೂ ಖರ್ಚು, ವೆಚ್ಚವನ್ನು ದೂರುದಾರರಿಗೆ ನೀಡುವಂತೆ ಆದೇಶ ನೀಡಿದೆ.
ನಗರದ ಹೌಸಿಂಗ್ ಬೋರ್ಡ್ನ ಟಿ.ಶಫೀಕ್ ಎಂಬುವವರ ಪತ್ನಿ ರೇಷ್ಮಾಬಾನು ಎಂಬುವವರು ಕೇರಳದ ಕಣ್ಣೂರು ಜಿಲ್ಲೆಯಲ್ಲಿರುವ ತಮ್ಮ ಪತಿಗೆ ಡಿಟಿಡಿಸಿ ಎಕ್ಸ್ಪ್ರೆಸ್ ಲಿಮಿಟೆಡ್ ಸಂಸ್ಥೆಯ ಮೂಲಕ ಆಹಾರ ಸಾಮಗ್ರಿಯ ಪಾರ್ಸೆಲ್ ಬುಕ್ಕಿಂಗ್ ಮಾಡಿ ೨೭೩ ರೂ.ಗಳನ್ನು ಪಾವತಿಸಿದ್ದರು.
ಸಂsಸ್ಥೆಯು ಎರಡು ದಿನಗಳಲ್ಲಿ ಆಹಾರ ಪದಾರ್ಥವನ್ನು ತಲುಪಿಸುವ ಭರವಸೆ ನೀಡಿತ್ತು. ಆದರೆ ನಿಗದಿತ ಸಮಯದೊಳಗೆ ತಲುಪಿಸದ ಕಾರಣ ಆಹಾರ ಪದಾರ್ಥಗಳು ಹಾಳಾಗಿದ್ದವು. ಈ ಹಿನ್ನೆಲೆಯಲ್ಲಿ ಡಿಟಿಡಿಸಿ ಎಕ್ಸ್ಪ್ರೆಸ್ ಸಂಸ್ಥೆಯ ಬೆಂಗಳೂರು ಕಚೇರಿಯ ವ್ಯವಸ್ಥಾಪಕ ನಿರ್ದೇಶಕರು, ಕಲ್ಯಾಣನಗರ ಶಾಖೆಯ ಶಾಖಾ ವ್ಯವಸ್ಥಾಪಕರು ಹಾಗೂ ವ್ಯವಸ್ಥಾಪಕರ ವಿರುದ್ಧ ಮಾರ್ಚ್ ೩ ರಂದು ರೇಷ್ಮಾಬಾನು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಆಯೋಗವು ಮೇ ೨೭ ರಂದು ತೀರ್ಪು ನೀಡಿದ್ದು, ಡಿಟಿಡಿಸಿ ಎಕ್ಸ್ಪ್ರೆಸ್ ಲಿಮಿಟೆಡ್ನ ಕಲ್ಯಾಣನಗರ ಶಾಖೆಯ ಶಾಖಾ ವ್ಯವಸ್ಥಾಪಕರು ಹಾಗೂ ವ್ಯವಸ್ಥಾಪಕರ ವಿರುದ್ಧ ತೀರ್ಪು ನೀಡಿದ್ದು. ಪಾರ್ಸೆಲ್ ಬುಕ್ಕಿಂಗ್ ಮೊತ್ತ ೨೭೩ ರೂ.ಗಳು, ಪರಿಹಾರವಾಗಿ ೫ ಸಾವಿರ ರೂ. ಹಾಗೂ ಖರ್ಚು-ವೆಚ್ಚಕ್ಕಾಗಿ ೫ ಸಾವಿರ ರೂ.ಗಳನ್ನು ನೀಡುವಂತೆ ಆದೇಶ ನೀಡಿದೆ. ಈ ತೀರ್ಪನ್ನು ೪೫ ದಿನಗಳ ಒಳಗಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಡಿಟಿಡಿಸಿ ಎಕ್ಸ್ಪ್ರೆಸ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರನ್ನು ಪ್ರಕರಣದಿಂದ ಕೈಬಿಡಲಾಗಿದೆ.
ಆಯೋಗದ ಅಧ್ಯಕ್ಷ ಎನ್.ಆರ್.ಚೆನ್ನಕೇಶವ, ಸದಸ್ಯರಾದ ಈ.ಪ್ರೇಮಾ ಹಾಗೂ ಡಾ.ಮಂಜುನಾಥ ಎಂ.ಬಮ್ಮನಕಟ್ಟಿ ಅವರು ಈ ಆದೇಶವನ್ನು ನೀಡುವ ಮೂಲಕ ಇನ್ಶೂರೆನ್ಸ್ ಸಂಸ್ಥೆಯು ಸೇವಾ ನ್ಯೂನತೆ ಎಸಗಿರುವುದನ್ನು ಪುರಾವೆ ಸಹಿತ ಸಾಬೀತುಪಡಿಸಿದ್ದು, ಗ್ರಾಹಕರಿಗೆ ನ್ಯಾಯ ಒದಗಿಸಿ ಜಾಗೃತಿ ಮೂಡಿಸಿದ್ದಾರೆ.
Commission’s verdict against DTDC Express Limited
Leave a comment