ಚಿಕ್ಕಮಗಳೂರು: ಅಭಿವೃದ್ಧಿ ಕೆಲಸಗಳ ಬಗ್ಗೆ ಕೆಲವರು ಪೂರ್ವಗ್ರಪಿಡಿತರಾಗಿ ಮಾತನಾಡುತ್ತಿದ್ದಾರೆ. ಈ ಹಿಂದೆ ಒಬ್ಬರಿಗೆ ಮಾತ್ರ ಗುತ್ತಿಗೆ ಸಿಗುತ್ತಿತ್ತು. ಈಗ ಎಲ್ಲರೂ ಗುತ್ತಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು.
’ಸೈಕಲ್ ತುಳಿ ಸಮಸ್ಯೆ ತಿಳಿ’ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಸೋಮವಾರ ನಗರದ ೧೬, ೧೭ ಹಾಗೂ ೧೯ ನೇ ವಾರ್ಡ್ಗಳಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಐದು ಬೆರಳು ಒಂದೇ ಸಮ ಇರುವುದಿಲ್ಲ. ಐದು ಜನ ಗುತ್ತಿಗೆದಾರರಲ್ಲಿ ಯಾರೋ ಒಬ್ಬರೂ ಕೆಲಸ ಸರಿ ಮಾಡಿಲ್ಲ ಎಂದರೆ ಅದನ್ನು ಸರಿ ಪಡಿಸೋಣ. ಈ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ನರಿ ದ್ರಾಕ್ಷಿ ಹಣ್ಣು ಸಿಗದೇ ಇದ್ದಾಗ ಹುಳಿ ಎಂದು ಹೇಳಿದಂತೆ, ಎಲ್ಲ ಗುತ್ತಿಗೆಯನ್ನು ಒಬ್ಬರೇ ಮಾಡುತ್ತಿದ್ದರು. ಈಗ ಅವರಿಗೆ ಕೆಲಸ ಸಿಗುತ್ತಿಲ್ಲ ಹಾಗಾಗಿ ಕೆಲವರ ಮುಖಾಂತರ ಮಾತನಾಡುತ್ತಿದ್ದಾರೆ ಎಂದರು.
೬ ರಿಂದ ೧೦ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ೫ ಕೋಟಿ ರೂ. ವೆಚ್ಚದಲ್ಲಿ ಮೌಲಾನ ಆಜಾದ್ ಸ್ಕೂಲ್ ಕಟ್ಟಡ ಆರಂಭವಾಗಿದೆ. ಕಾಮಗಾರಿಯ ವೀಕ್ಷಣೆಯನ್ನು ಮಾಡಲಾಗಿದೆ. ಕಾಮಗಾರಿಯ ಗುಣಮಟ್ಟವನ್ನು ನೋಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ವಾಜಪೇಯಿ ಬಡಾವಣೆಯ ಒಂದಿಷ್ಟು ಜನ ಸಮಸ್ಯೆಯನ್ನ ಗಮನಕ್ಕೆ ತಂದಿದ್ದಾರೆ. ಈ ಹಿಂದೆ ವಾಜಪೇಯಿ ಲೇಔಟ್ ಕಟ್ಟಲು ಬಹಳಷ್ಟು ಸಮಯವನ್ನು ತೆಗೆದುಕೊಂಡರು. ನಿವೇಶನಗಳನ್ನು ಹಂಚಿಕೆ ಮಾಡುವ ಮೊದಲು ಕುಡಿಯುವ ನೀರು ಹಾಗೂ ಇತರೆ ಮೂಲಭೂತ ಸೌಲಭ್ಯಗಳು ಮಾಡಿಕೊಡಬೇಕಾಗಿತ್ತು. ಆದರೆ, ಆ ಕೆಲಸ ಆಗಿಲ್ಲ ಎಂದರು.
ನಾನು ಚುನಾಯಿತರಾದ ನಂತರ ನನ್ನ ಬಳಿ ಬಂದು ಮನವಿ ಸಲ್ಲಿಸಿದಾಗ ತಾತ್ಕಾಲಿಕವಾಗಿ ಅಲ್ಲಿನ ಮನೆಗಳಿಗೆ ವಿದ್ಯುತ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಆದರೆ, ಅದು ಶಾಶ್ವತ ಅಲ್ಲ. ಅವರಿಗೆ ಶಾಶ್ವತವಾಗಿ ವಿದ್ಯುತ್ ಕೊಡುವ ವ್ಯವಸ್ಥೆ ಆಗಬೇಕು. ಇಲ್ಲಿ ಪವರ್ ಸ್ಟೇಷನ್ ಇಲ್ಲ. ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಇಂಧನ ಸಚಿವರು, ಅವರ ಸಹಕಾರದಿಂದ ಈಗಾಗಲೇ ಪವರ್ ಸ್ಟೇಷನ್ ಮಂಜೂರಾಗಿದೆ ಒಂದು ವಾರದೊಳಗೆ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಆನಂತರ ಅವರಿಗೆ ಈ ಕಾಮಗಾರಿ ಮುಗಿಸಲು ಸುಮಾರು ಒಂದು ವರ್ಷ ಬೇಕಾಗಬಹುದು. ಹಾಗಾಗಿ ಇಲ್ಲಿನ ನಿವಾಸಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ತಾತ್ಕಾಲಿಕವಾಗಿ ಇಲ್ಲಿನ ಜನರ ಸಮಸ್ಯೆಯನ್ನ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನವನ್ನು ಮಾಡಲಾಗುವುದು ಪ್ರಾಧಿಕಾರದ ಅಧಿಕಾರಿಗಳು ಹಾಗೂ ಮೆಸ್ಕಾಂ ಅಧಿಕಾರಿಗಳ ಸಭೆಯನ್ನು ಕರೆದು ಅವರಿಗೆ ವಿದ್ಯುತ್ ಕೊಡಿಸುವ ಕೆಲಸವನ್ನು ಮಾಡಲಾಗುವುದು ಎಂದು ಹೇಳಿದರು.
ಈ ಭಾಗದ ಸರ್ಕಾರಿ ಶಾಲೆಯಲ್ಲಿ ಶೌಚಾಲಯವನ್ನು ನಿರ್ಮಾಣ ಮಾಡಲಾಗಿದೆ. ಚರಂಡಿ, ರಸ್ತೆ ನಿರ್ಮಾಣ ಮಾತ್ರ ಅಭಿವೃದ್ಧಿ ಅಲ್ಲ. ಹಾಗಾಗಿ ಅಂಗನವಾಡಿ, ಪಡಿತರ ಚೀಟಿ ವಿದ್ಯುತ್, ಸಣ್ಣ ನೀರಾವರಿ ಇಲಾಖೆ ಸಮಸ್ಯೆ ಇರುತ್ತದೆ. ಅಧಿಕಾರಿಗಳ ಜೊತೆ ಬಂದಾಗ ಎಲ್ಲಾ ಸಮಸ್ಯೆಗಳನ್ನು ನೇರವಾಗಿ ಇಲ್ಲೇ ಅಧಿಕಾರಿಗಳ ಎದುರೇ ಬಗೆಹರಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಲಾಗುತ್ತದೆ. ನಿಮ್ಮ ಕೆಲಸ ಆಗಿಲ್ಲವೆಂದರೆ ನನ್ನ ಮೊಬೈಲಿಗೆ ಫೋನ್ ಮಾಡಿ, ನನ್ನನ್ನು ಭೇಟಿ ಮಾಡಿ ಎಂದ ಅವರು, ಜನರನ್ನು ಇಲಾಖೆಗಳಿಗೆ ಸುತ್ತಿಸುವ ಕೆಲಸ ಮಾಡಬೇಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಈ ಭಾಗದಲ್ಲಿ ಪಾರ್ಕ್ಗಳ ಅಭಿವೃದ್ಧಿಗೆ ೨೫ ಲಕ್ಷ ರೂ. ನೀಡಲಾಗಿದೆ. ಎರಡು ತಿಂಗಳ ಒಳಗೆ ಈ ಎಲ್ಲ ಕಾಮಗಾರಿಯನ್ನ ಮುಗಿಸಿ ಲೋಕಾರ್ಪಣೆ ಮಾಡಲಾಗುವುದು ಎಂದ ಅವರು, ಖಾಲಿ ನಿವೇಶನದಲ್ಲಿ ಇರುವ ಗಿಡಗಂಟೆಗಳನ್ನು ತೆಗೆದು ಸ್ವಚ್ಛಗೊಳಿಸಬೇಕು. ಇಲ್ಲದೆ ಹೋದರೆ ನಗರಸಭೆಯಿಂದ ಸ್ವಚ್ಛಗೊಳಿಸಿ ಕಂದಾಯವನ್ನು ಡಬಲ್ ಫಿಕ್ಸ್ ಮಾಡಿ ವಸೂಲಿ ಮಾಡಬೇಕೆಂದು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ರಾಜ್ಯ ಚುನಾವಣಾ ಆಯೋಗ ಎಸ್ಐಆರ್ ಮಾಡುತ್ತಿದೆ. ಯಾವುದೇ ನಿರಾಪರಾಧಿಗೆ ಶಿಕ್ಷೆ ಆಗಬಾರದು ಎಂದು ನಮ್ಮ ಕಾನೂನು ಹೇಳುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೆಸರನ್ನು ಕೈ ಬಿಡಬಾರದು. ಈ ಕೆಲಸಕ್ಕೆ ಮತದಾರರು ಕೈಜೋಡಿಸಬೇಕು ಎಂದು ಹೇಳಿದರು.
Some people are talking about development work with prejudice.
Leave a comment