ಚಿಕ್ಕಮಗಳೂರು: ಯೋಗ ಸಾಧಕ ನಗರದ ವಕೀಲ ಹಾಗೂ ನೋಟರಿ ವಿ.ಕೆ.ರಘು ಅವರು ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನೀರಿನ ಮೇಲೆ ತೇಲುತ್ತಾ ವಿವಿಧ ಯೋಗ ಭಂಗಿಗಳನ್ನು ಪ್ರದರ್ಶಿಸಿದರು.
ಬೈಪಾಸ್ ರಸ್ತೆಯ ನರ್ಚರ್ ಶಾಲೆ ಹಿಂಭಾಗದ ಅನ್ನಪೂರ್ಣ ಫಿಟ್ನೆಸ್ ಅಕಾಡೆಮಿಯ ಈಜು ಕೊಳದಲ್ಲಿ ಸತತ ಅರ್ಧಗಂಟೆಗು ಹೆಚ್ಚು ಕಾಲ ತಲಾ ೧೦೮ ಬಾರಿ ಶ್ರೀ ಆಂಜನೇಯ ಹಾಗೂ ಶ್ರೀ ರಾಮನಾಮವನ್ನು ಜಪಿಸುತ್ತ ಪದ್ಮಾಸನ, ಶಲಬಾಸನ, ವಜ್ರಾಸನ ಸೇರಿದಂತೆ ವಿವಿಧ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ನೋಡುಗರ ಹುಬ್ಬೇರಿಸುವಂತೆ ಮಾಡಿದರು.
ಸತತ ೩೫ ವರ್ಷಗಳಿಂದ ಯೋಗಾಭ್ಯಾಸದಲ್ಲಿ ತೊಡಗಿರುವ ಅವರು, ನೀರಿನ ಮೇಲೆ ತೇಲುತ್ತಾ ಅತಿಹೆಚ್ಚು ಸಮಯ ಯೋಗ ಪ್ರದರ್ಶಿಸಿ ವಿಶ್ವದಾಖಲೆ ನಿರ್ಮಿಸಬೇಕು ಎನ್ನುವ ಸಂಕಲ್ಪ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅವರ ಸಾಧನೆಯನ್ನು ಗುರುತಿಸಿ ೨೦೨೩ ರಲ್ಲಿ ಅಂದಿನ ಸಂಸದೆ ಶೋಭಾ ಕರಂದ್ಲಾಜೆ ಅವರು ಪ್ರಸಂಶಿಸಿದ್ದಾರೆ. ೨೦೨೪ ರಲ್ಲಿ ಜಿಲ್ಲಾಡಳಿತ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪುರಸ್ಕರಿಸಿವೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಮ್ಮ ಯೋಗಾಭ್ಯಾಸದ ಹವ್ಯಾಸಕ್ಕೆ ತುಂಬಾ ಸ್ಪೂರ್ತಿ, ಶಿವಮೊಗ್ಗದ ವರದರಳ್ಳಿ ಶ್ರೀರಧರ ಸ್ವಾಮಿಯವರ ಆಶ್ರಮದ ಕೊಳದಲ್ಲಿ ಮೊದಲ ಬಾರಿಗೆ ಸುಮಾರು ಎರಡೂವರೆ ಗಂಟೆ ಸಮಯ ನೀರಿನ ಮೇಲೆ ತೇಲುತ್ತಾ ಯೋಗ ಪ್ರದರ್ಶಿಸಿದ್ದು, ಅದು ಮುಂದಿನ ಸಾಧನೆಗೆ ದಾರಿಯಾಯಿತು ಎಂದು ರಘು ಹೇಳಿದರು.
ನೀರಿನ ಮೇಲೆ ತೇಲುತ್ತ ಯೋಗಾಸನ ಮಾಡುವುದು ಕಠಿಣ ಎಂದು ಕಾಣಿಸುತ್ತದೆ. ಆದರೆ ಅಭ್ಯಾಸ ಮಾಡಿಕೊಂಡರೆ ತುಂಬಾ ಸರಳ ಜೊತೆಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೂ ಬಹಳ ಉಪಕಾರಿ ಎಂದರು. ನೀರಿನಲ್ಲಿ ತೇಲುತ್ತಾ ಯೋಗಾಸನ ಮಾಡುವವರ ಸಂಖ್ಯೆ ತುಂಬಾ ಕಡಿಮೆ. ಇದನ್ನು ಕಲಿಯಲು ಆಸಕ್ತಿ ಇದ್ದವರು ಮುಂದೆ ಬಂದರೆ ತರಬೇತಿ ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಯೋಗಾಭ್ಯಾಸದಿಂದ ಆರೋಗ್ಯಕ್ಕಾಗುವ ಪ್ರಯೋಜನಗಳ ಬಗ್ಗೆ ಭಾರತ ಸೇರಿದಂತೆ ವಿಶ್ವಕ್ಕೆ ಮನವರಿಕೆ ಮಾಡಿಕೊಟ್ಟವರು ಪ್ರಧಾನಿ ನರೇಂದ್ರ ಮೋದಿ ಅವರು, ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುತ್ತಿರುವುದಕ್ಕೂ ಮೋದಿ ಅವರೇ ಕಾರಣಕರ್ತರು. ಯೋಗದಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ. ದಿನವಿಡೀ ಉಲ್ಲಸಿತ ಮನಸ್ಸು, ಒತ್ತಡ ರಹಿತ ಜೀವನ ಸಾಧಿಸಲು ಸಹಕಾರಿ ಎಂದು ಅಭಿಪ್ರಾಯಿಸಿದರು.
Notary V.K. Raghu demonstrates a yoga pose while floating on water
Leave a comment