ಚಿಕ್ಕಮಗಳೂರು: ರೋಟರಿ ಕಾಫಿ ಲ್ಯಾಂಡ್ ಪದಾಧಿಕಾರಿಗಳು ಮತ್ತು ಸದಸ್ಯರು ಸೇವೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಕೆ. ಪಾಲಾಕ್ಷ ಸಲಹೆ ಮಾಡಿದರು.
ನಗರದ ಎಂ ಎಲ್ ವಿ ರೋಟರಿ ಹಾಲ್ನಲ್ಲಿ ಇತ್ತೀಚೆಗೆ ನಡೆದ ರೋಟರಿ ಕಾಫಿ ಲ್ಯಾಂಡ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಣ, ಅಧಿಕಾರ, ಆಸ್ತಿ, ಅಂತಸ್ತಿನಿಂದ ಮಾನಸಿಕ ಶಾಂತಿ, ನೆಮ್ಮದಿ ದೊರೆಯುವುದಿಲ್ಲ, ಅವು ಸೇವೆಯಿಂದ ಮಾತ್ರ ಲಭಿಸುತ್ತವೆ, ಸೇವೆಯಿಂದ ಬದುಕು ಸಾರ್ಥಕವಾಗುತ್ತದೆ, ನಮ್ಮ ಹೆಸರು ಜನ ಮಾನಸದಲ್ಲಿ ಚಿರಸ್ಥಾಯಿಯಾಗಿರುತ್ತದೆ ಎಂದು ಕಿವಿಮಾತು ಹೇಳಿದ ಅವರು ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಸಮಾಜ ಸೇವೆಗೆ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು.
ಬಡವರು, ದೀನರು, ದುರ್ಬಲರು ಮತ್ತು ಅಸಹಾಯಕರಿಗೆ ನೆರವಿನ ಹಸ್ತ ಚಾಚಬೇಕು, ನಮಗೆ ಎಲ್ಲವನ್ನೂ ನೀಡಿರುವ ಸಮಾಜಕ್ಕೆ ನಾವೂ ಸಹ ಕಿಂಚಿತ್ತಾದರೂ ಕೊಡುಗೆ ನೀಡಬೇಕು ಎಂದರು.
ಚಿಕ್ಕಮಗಳೂರಿನ ರೋಟರಿ ಕಾಫಿ ಲ್ಯಾಂಡ್ ಪದಾಧಿಕಾರಿಗಳ ಪರಿಶ್ರಮದಿಂದಾಗಿ ಸಂಸ್ಥೆ ಸಾರ್ವಜನಿಕ ಸೇವಾ ಕಾರ್ಯಗಳಲ್ಲಿ ರೋಟರಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕಾಫಿ ಲ್ಯಾಂಡ್ ಅಧ್ಯಕ್ಷ ನಾಗೇಶ್ ಕೆಂಜಿಗೆ ತಮ್ಮ ಅಧಿಕಾರಾವಧಿಯಲ್ಲಿ ೪೨೭ ಕಾರ್ಯಕ್ರಮಗಳನ್ನು ನಡೆಸಲಾಗಿದೆ, ಸಾರ್ವಜನಿಕರ ಸೇವೆಗೆ ರೋಟರಿ ಕಾಫಿ ಲ್ಯಾಂಡ್ ಸದಾ ಸಿದ್ಧವಿದೆ ಎಂದು ಹೇಳಿದರು. ತಮ್ಮ ಅವಧಿಯಲ್ಲಿ ನಡೆದ ಅಭಿವೃದ್ಧಿ ಮತ್ತು ಸೇವಾ ಕಾರ್ಯಗಳಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದ ಅವರು ಇದೇ ರೀತಿ ಎಲ್ಲರ ಸಹಕಾರ ದೊರೆತಲ್ಲಿ ಇನ್ನೂ ಹೆಚ್ಚಿನ ಸೇವಾ ಕಾರ್ಯಗಳನ್ನು ಮಾಡಲಾಗುವುದು ಎಂದರು.
ರೋಟರಿ ಕಾಫಿ ಲ್ಯಾಂಡ್ ಕಾರ್ಯದರ್ಶಿ ಎಂ. ಆನಂದ್ ಸಂಸ್ಥೆಯ ಸೇವಾ ಚಟುವಟಿಕೆಗಳನ್ನು, ವಾರ್ಷಿಕ ವರದಿಯನ್ನು ಮಂಡಿಸಿದರು, ಸಹಾಯಕ ರಾಜ್ಯಪಾಲ ಟಿ. ಎಂ. ಪ್ರವೀಣ್ ನಾಹರ್, ವಲಯ ಸೇನಾನಿ ಹೆಚ್.ಕೆ. ಮಂಜುನಾಥ್, ನಿರ್ದೇಶಕ ಬಿ.ಕೆ. ಗುರುಮೂರ್ತಿ, ಸಾರ್ವಜನಿಕ ಸಂಪರ್ಕಾಧಿಕಾರಿ ನಾಸೀರ್ ಹುಸೇನ್ ಮಾತನಾಡಿದರು.
ಉತ್ತಮ ಕರ್ತವ್ಯ ನಿರ್ವಹಣೆಗಾಗಿ ಮುಖ್ಯಮಂತ್ರಿ ಪದಕ ಪಡೆದ ಜಿಲ್ಲೆಯ ನಾಲ್ವರು ಪೊಲೀಸರನ್ನು, ಅಪಘಾತ ರಹಿತ ಚಾಲನೆ ಮಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕರನ್ನು, ಕಲಾವಿದರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಚಿಕ್ಕಮಗಳೂರು ರೋಟರಿ ಕಾಫಿ ಲ್ಯಾಂಡ್ ಸಂಸ್ಥೆಯಿಂದ ರೋಟರಿ ಫೌಂಡೇಶನ್ ಗೆ ೫ ಲಕ್ಷ ರೂ ದೇಣಿಗೆ ನೀಡಲಾಯಿತು,ರೇಖಾ ಪಾಲಾಕ್ಷ, ರೋಟರಿ ಕಾಫಿ ಲ್ಯಾಂಡ್ ನಿರ್ದೇಶಕ ರವೀಂದ್ರನಾಥ್ ನಾಯ್ಡು ಉಪಸ್ಥಿತರಿದ್ದರು.
Rotary Coffee Land office bearers should place more emphasis on service
Leave a comment