ಚಿಕ್ಕಮಗಳೂರು : ಸಾರ್ವತ್ರಿಕ ಚುನಾವಣೆಗಳ ಮೂಲಕ ಭಾರತದ ಅತಿ ಹೆಚ್ಚುಕಾಲ ಚುನಾಯಿತ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ನರೇಂದ್ರ ಮೋದಿಯವರು ದೇಶದ ಮೊದಲ ಪ್ರಧಾನ ಮಂತ್ರಿಯಾಗಿದ್ದಾರೆಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಅವರು ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಮಾಜಿ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರು ಚುನಾಯಿತ ಪ್ರಧಾನ ಮಂತ್ರಿಯಾಗಿ ೪೩೯೮ ದಿನಗಳ ಕಾಲ ಆಡಳಿತ ನಡೆಸಿ ದೇಶದ ಅತಿ ಹೆಚ್ಚು ಕಾಲ ಆಡಳಿತ ನಡೆಸಿದ ಪ್ರಧಾನಿ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಈಗ ನರೇಂದ್ರ ಮೋದಿಯವರು ೪೩೯೯ ದಿನಗಳನ್ನು ಪೂರೈಸುವ ಮೂಲಕ ನೆಹರೂ ದಾಖಲೆ ಮುರಿದು ಐತಿಹಾಸಿಕ ಮೈಲಿಗಲ್ಲಾಗಿಸಿದ್ದಾರೆ ಎಂದು ಹೇಳಿದರು.
೨೦೧೪ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತದೊಂದಿಗೆ ಆಯ್ಕೆಯಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರು ಅನೇಕ ಸವಾಲು ಸಮಸ್ಯೆಗಳ ನಡುವೆ ಪಾರದರ್ಶಕ, ಮಧ್ಯವರ್ತಿಗಳ ರಹಿತ, ರೈತಪರವಾದ ಕೇಂದ್ರ ಸರ್ಕಾರವನ್ನು ನಡೆಸಿದ್ದಾರೆಂದು ಶ್ಲಾಘಿಸಿದರು.
ಬ್ಯಾಂಕಿಂಗ್ ವ್ಯವಸ್ಥೆಯಿಂದ ವಂಚಿತರಾಗಿದ್ದ ರಾಜ್ಯದ ೨.೧೨ ಕೋಟಿಗೂ ಹೆಚ್ಚು ಜನರನ್ನು ಜನಧನ್ ಖಾತೆಗಳನ್ನು ತೆರೆಯುವ ಮೂಲಕ ಬ್ಯಾಂಕಿಂಗ್ ವ್ಯಾಪ್ತಿಗೆ ತರಲಾಗಿದೆ. ಪಿಎಂ ಜೀವನ ಜ್ಯೋತಿ ಭೀಮಾ ಯೋಜನೆಯಡಿ ೧.೬೭ ಕೋಟಿ ಮತ್ತು ಪಿ.ಎಂ. ಸುರಕ್ಷಾ ಭೀಮಾ ಯೋಜನೆಯಡಿ ೨.೬೦ ಕೋಟಿ ದುರ್ಬಲವರ್ಗದ ಜನರಿಗೆ ಅತ್ಯಂತ ಕಡಿಮೆ ಪ್ರೀಮಿಯಂ ನಲ್ಲಿ ೨ ಲಕ್ಷ ರೂ. ವಿಮಾ ಕರಾರು ಒದಗಿಸುವ ಜೊತೆಗೆ ಸಾಮಾಜಿಕ ಸುರಕ್ಷತೆ ನೀಡಲಾಗಿದೆ ಎಂದರು.
ಯುವಕರು, ಮಹಿಳೆಯರು ಮತ್ತು ಸಣ್ಣ ಉದ್ದಿಮೆಗಳಿಗೆ ಉದ್ಯಮ ಶೀಲತೆಯ ವಿಶ್ವಾಸ ತುಂಬಲು ೩.೩೯ ಲಕ್ಷ ಕೋಟಿ ರೂ. ಗಳಿಗೂ ಹೆಚ್ಚು ಮುದ್ರಾ ಸಾಲ ವಿತರಿಸಲಾಗಿದೆ. ಪಿಎಂ ಕಿಸಾನ್ ಯೋಜನೆಯಡಿ ರಾಜ್ಯದ ೪೩.೨ ಲಕ್ಷಕ್ಕೂ ಹೆಚ್ಚಿನ ರೈತರು ಕಿಸಾನ್ ಸಮ್ಮಾನ್ ಫಲಾನುಭವಿಗಳಾಗಿದ್ದಾರೆ. ಜಲಜೀವನ ಮಿಷನ್ ಯೋಜನೆಯಡಿ ೮೭.೭ ಲಕ್ಷ ಕ್ಕೂ ಹೆಚ್ಚು ಗ್ರಾಮೀಣ ಪ್ರದೇಶದ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
೪೮.೯ ಲಕ್ಷ ಜನರು ಅಟಲ್ ಪೆನ್ಷನ್ ಚಂದಾದಾರರಾಗಿದ್ದಾರೆ. ೬.೧೪ ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಯೋಜನೆಯಡಿ ೫೦ ಸಾವಿರದಿಂದ ೧ ಲಕ್ಷ ರ. ವರೆಗೆ ದುಡಿಯುವ ಬಂಡವಾಳ ಸಾಲ ಒದಗಿಸಲಾಗಿದೆ. ೩೧.೭ ಲಕ್ಷ ಕೃಷಿಕರು ಮತ್ತು ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರಿಯಾಯಿತಿ ದರದಲ್ಲಿ ಸಕಾಲಿಕ ಸಾಲ ಒದಗಿಸಲಾಗಿದೆ. ೪೧.೪ ಲಕ್ಷ ಗ್ರಾಮೀಣ ಕುಟುಂಬಗಳಿಗೆ ಉಚಿತ ಉಜ್ವಲ ಎಲ್ಪಿಜಿ ಸಂಪರ್ಕ ಕಲ್ಪಿಸಲಾಗಿದೆ. ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಸುಮಾರು ೪೦೨ ಲಕ್ಷ ಫಲಾನುಭವಿಗಳಿಗೆ ಉಚಿತ ಪಡಿತರ ವಿತರಿಸಲಾಗುತ್ತಿದೆ ಎಂದರು.
ಜಿಲ್ಲೆಗೆ ಜನರ ಬೇಡಿಕೆಗನುಸಾರವಾಗಿ ತಿರುಪತಿಗೆ ರೈಲು ಸಂಚಾರ ಆರಂಭಿಸಲಾಗಿದೆ. ಬಿಎಸ್ಎನ್ ಎಲ್ ನಿರೀಕ್ಷೆಗೂ ಮೀರಿದ ಸಾಧನೆಯಾಗಿದೆ. ೪ಜಿ ಜೊತೆಗೆ ೩೭ ಟವರ್ ಗಳನ್ನು ಹೆಚ್ಚುವರಿಯಾಗಿ ಮಂಜೂರು ಮಾಡಲಾಗಿದ್ದು, ಜಿಲ್ಲೆಯ ಕುಗ್ರಾಮಗಳಲ್ಲಿ ಬಿಎಸ್ಎನ್ ಎಲ್ ಸೇವೆ ಕೈಗೆಟುಕುವ ದರದಲ್ಲಿ ದೊರೆಯಲಿದ್ದು, ಜಿಲ್ಲೆಯ ೪೪ ಕುಗ್ರಾಮಗಳಿಗೆ ಹೊಸ ಯೋಜನೆಯಡಿ ೪ಜಿ ಸಂಪರ್ಕಕಲ್ಪಿಸುವ ಉದ್ದೇಶದಿಂದ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ರಾಜ್ಯ ಸರ್ಕಾರ ಪಿಎಂ ರಾವುತ್ ಅಪಘಾತ ಯೋಜನೆಯನ್ನು ಶೀಘ್ರ ಅನುಷ್ಟಾನ ಕೈಗೊಳ್ಳಬೇಕು ಇದರಿಂದ ಅಪಘಾತಕ್ಕೊಳಗಾದ ವ್ಯಕ್ತಿಗೆ ಚಿಕಿತ್ಸೆಗಾಗಿ ೧.೫ ಲಕ್ಷ ರೂ. ಗಳನ್ನು ಕೇಂದ್ರ ಸರ್ಕಾರ ಪರಿಹಾರ ನೀಡುತ್ತದೆ ಎಂದ ಅವರು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸಬಲೀಕರಣ ಮಾಡುವ ಉದ್ದೇಶದೊಂದಿಗೆ ಗ್ರಾ.ಪಂ., ತಾಪಂ, ಜಿಪಂ ಚುನಾವಣೆಗಳನ್ನು ವಿಳಂಭ ಮಾಡದೆ ಶೀಘ್ರವೇ ನಡೆಸಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜಶೆಟ್ಟಿ, ಮುಖಂಡರಾದ ಪುಣ್ಯಪಾಲ್, ಕನಕರಾಜ ಅರಸ್, ಚಂಪಾ ಜಗದೀಶ, ದಿನೇಶ್, ಚಮಿನ್, ಸಚಿನ್, ಮತ್ತಿತರರು ಉಪಸ್ಥಿತರಿದ್ದರು.
Narendra Modi is India’s longest-serving elected Prime Minister
Leave a comment