ಚಿಕ್ಕಮಗಳೂರು: ಒಂದೇ ದಿನ ಎರಡು ದೇವಸ್ಥಾನಗಳ ಬೀಗ ಒಡೆದು ನಗದು ಹಾಗೂ ಚಿನ್ನಾಭರಣಗಳನ್ನು ದೋಚಿರುವ ಘಟನೆ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಭೋಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪ್ರಸಿದ್ದ ಶ್ರೀ ಚನ್ನಬಸವೇಶ್ವರ ದೇವಸ್ಥಾನ ಹಾಗೂ ಶ್ರೀ ಕಾಳಿಕಾಂಬ ದೇವಸ್ಥಾನಗಳಲ್ಲಿ ಈ ಸರಣಿ ಕಳ್ಳತನ ಸಂಭವಿಸಿದೆ. ಬುಧವಾರ ಎಂದಿನಂತೆ ಪೂಜಾ ಕಾರ್ಯಗಳನ್ನು ಮುಗಿಸಿ ಅರ್ಚಕರು ದೇವಸ್ಥಾನದ ಬಾಗಿಲು ಹಾಕಿಕೊಂಡು ಮನೆಗೆ ತೆರಳಿದ್ದರು.
ಮರುದಿನ ಮುಂಜಾನೆ 6-00 ಗಂಟೆಯ ಸಮಯದಲ್ಲಿ ಗ್ರಾಮದ ಮಹಿಳೆಯರು ದೇವಸ್ಥಾನದ ಮುಂಭಾಗ ಸ್ವಚ್ಛಗೊಳಿಸಲು ಹೋದಾಗ ಬಾಗಿಲಿನ ಬೀಗ ಮುರಿದಿರುವುದು ಮತ್ತು ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಖದೀಮರು ಮೊದಲು ಚನ್ನಬಸವೇಶ್ವರ ದೇವಸ್ಥಾನದ ಒಳನುಗ್ಗಿ ಅಲ್ಲಿದ್ದ ಕಬ್ಬಿಣದ ಹುಂಡಿಯನ್ನು ಎಗರಿಸಿದ್ದಾರೆ. ಈ ಹುಂಡಿಯಲ್ಲಿ ಅಂದಾಜು 8,000 ರೂ. ಕಾಣಿಕೆ ಹಣವಿತ್ತು ಎನ್ನಲಾಗಿದೆ.
ನಂತರ ಪಕ್ಕದಲ್ಲೇ ಇದ್ದ ಶ್ರೀ ಕಾಳಿಕಾಂಬ ದೇವಸ್ಥಾನದ ಬಾಗಿಲಿನ ಬೀಗ ಒಡೆದು ಒಳಪ್ರವೇಶಿಸಿದ ಕಳ್ಳರು, ದೇವಿಯ ಮೂರ್ತಿಯ ಮೇಲಿದ್ದ ಅಂದಾಜು 30,000 ರೂ. ಮೌಲ್ಯದ 6ಗ್ರಾಂ ತೂಕದ ಮೂರು ಬಂಗಾರದ ತಾಳಿಗಳನ್ನು ಕಳವು ಮಾಡಿದ್ದಾರೆ. ಅಲ್ಲದೆ ಅಲ್ಲಿದ್ದ ಕಬ್ಬಿಣದ ಹುಂಡಿಯನ್ನು ಒಡೆದು ಅದರಲ್ಲಿದ್ದ ಸುಮಾರು 25,000 ರೂ. ನಗದನ್ನು ದೋಚಿದ್ದಾರೆ.
ದೇವಸ್ಥಾನದ ಬಾಗಿಲುಗಳಿಗೆ ಹಾನಿ ಮಾಡಿರುವ ಕಳ್ಳರು ಒಟ್ಟು 63,000 ರೂ. ಮೌಲ್ಯದ ಸ್ವತ್ತನ್ನು ಲೂಟಿ ಮಾಡಿದ್ದಾರೆ. ಎರಡೂ ದೇವಸ್ಥಾನಗಳ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ಶಾಂತಮೂರ್ತಿ ಎಸ್.ಬಿ. ಅವರು ಈ ಕುರಿತು ಅಜ್ಜಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.
Locks of two temples broken gold ornaments stolen
Leave a comment