ಚಿಕ್ಕಮಗಳೂರು: ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಇತರೆ ಮೂಲಭೂತ ಸವಲತ್ತು ನೀಡಲಾಗುತ್ತಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು.
ಇಲ್ಲಿನ ಬೀಕನಹಳ್ಳಿ ಹಾಗೂ ಮಲ್ಲೇನಹಳ್ಳಿ ಮೂರಾರ್ಜಿ ವಸತಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಊಟ ಹಾಗೂ ಇತರೆ ಮೂಲಭೂತ ಸವಲತ್ತಿನ ಬಗ್ಗೆ ಯಾರು ದೂರು ಹೇಳಲಿಲ್ಲ, ನಾನು ಮುಂದಿನ ದಿನಗಳಲ್ಲಿ ೨ ತಿಂಗಳಿಗೊಮ್ಮೆ ಭೇಟಿ ನೀಡುತ್ತೇನೆ ಎಂದರು.
ಬೇರೆ ಬೇರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಸತಿ ಶಾಲೆಗಳು ಚಿಕ್ಕಮಗಳೂರಿನಲ್ಲಿ ಇವೆ. ಮುರಾರ್ಜಿ ದೇಸಾಯಿ ವಸತಿ ಶಾಲೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೆ, ಊಟದ ಸಮಸ್ಯೆ ಇದೆ ಎಂದು ಹೇಳಿದ್ದರು. ಈ ಸಂಬಂಧ ಎರಡು ಮುರಾರ್ಜಿ ದೇಸಾಯಿ ವಸತಿ ಶಾಲೆ, ಅಂಬೇಡ್ಕರ್ ವಸತಿ ಶಾಲೆಗೆ ಭೇಟಿ ನೀಡಿದೆ. ಮಕ್ಕಳೊಂದಿಗೆ ಸಮಾಧಾನ ಮಾಡಿದ್ದೇನೆ. ಹಾಸ್ಟೆಲ್ ಪರಿಸ್ಥಿತಿಯ ವೀಕ್ಷಣೆ ಮಾಡಿದ್ದೇನೆ. ಒಂದಿಷ್ಟು ಲೋಪ ದೋಷ ಕಂಡು ಬಂದಿತು, ಅದೇ ರೀತಿ ಉತ್ತಮ ರೀತಿಯಲ್ಲಿ ಇರುವುದು ಕೂಡ ಕಂಡು ಬಂದಿತು ಎಂದರು.
ವಸತಿ ಶಾಲೆಯಲ್ಲಿ ಉತ್ತಮ ವ್ಯವಸ್ಥೆ ಇದೆ. ಬೀಕನಹಳ್ಳಿಯ ಮುರಾರ್ಜಿ ವಸತಿ ಶಾಲೆಯಲ್ಲಿ ಬೇಸಿಗೆ ಕಾಲದಲ್ಲಿ ಉತ್ತಮ ರೀತಿಯಲ್ಲಿ ಬಿಸಿ ನೀರು ಬರುತ್ತದೆ. ಮಳೆಗಾಲದಲ್ಲಿ ಬಿಸಿ ನೀರಿನ ವ್ಯವಸ್ಥೆ ಇಲ್ಲ ಎಂದು ಹೇಳಿದ್ದಾರೆ. ಆವುತಿ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಲೋಪಗಳು ಕಂಡುಬಂದಿವೆ. ವಸತಿ ಶಾಲೆಗಳಲ್ಲಿ ಬಿಸಿ ನೀರು, ನಿರಂತರ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದ ಶಾಸಕರು, ಸರ್ಕಾರಿ ವಸತಿ ಶಾಲೆಯಲ್ಲಿ ಶೋಷಿತ ವರ್ಗದ ಮಕ್ಕಳು ಶಿಕ್ಷಣ ಪಡೆಯುತ್ತಾರೆ. ಸರ್ಕಾರ ಅವರಿಗೆ ಊಟ ವಸತಿ, ಬಟ್ಟೆ ಎಲ್ಲದನ್ನು ಉಚಿತವಾಗಿ ನೀಡುತ್ತಿದೆ ಎಂದು ಹೇಳಿದರು.
೧೯ ನೇ ಶತಮಾನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕೆಂದು ಹೇಳಿದ್ದರು. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಸಣ್ಣ ಪುಟ್ಟ ದೋಷಗಳು ಕಂಡು ಬಂದಾಗ ಚುನಾಯಿತ ಜನ ಪ್ರತಿನಿಧಿಗಳಾದ ನಾವು ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ, ಬಗೆಹರಿಸುವುದು ನಮ್ಮ ಕರ್ತವ್ಯ. ಆ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ಆರೋಪ ಸುಳ್ಳು: ೩೦ ವರ್ಷದಿಂದ ಸಕ್ರಿಯ ರಾಜಕಾರಣದಲ್ಲಿ ಇದ್ದೇನೆ. ಅವರುಗಳು ಆರೋಪ ಮಾಡುವ ರೀತಿಯ ಮನಸ್ಥಿತಿ ನನಗೆ ಬಂದಿಲ್ಲ. ನಾನು ಸಾಮಾನ್ಯ ವರ್ಗದಿಂದ ಬಂದಿದ್ದೇನೆ. ಮಕ್ಕಳ ಕಷ್ಟ ನನಗೂ ಅರ್ಥವಾಗುತ್ತದೆ. ಯಾವುದೇ ಮೂಲಭೂತ ಸವಲತ್ತು ಕೊರತೆ ಆಗದ ರೀತಿಯಲ್ಲಿ ನಮ್ಮ ಸರ್ಕಾರ ನೋಡುತ್ತಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಜವಬ್ದಾರಿ ಇರುತ್ತದೆ ಅವರನ್ನು ಎಚ್ಚರಿಸುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಮಲ್ಲೇನಹಳ್ಳಿ ಮುರಾರ್ಜಿ ವಸತಿ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ೨೦ ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ. ಒಂದೂವರೆ ತಿಂಗಳಲ್ಲಿ ಈ ಕಟ್ಟಡ ಪ್ರಾರಂಭವಾಗಲಿದೆ. ಬೀಕನಹಳ್ಳಿಯ ಕಟ್ಟಡ ಸುಮಾರು ೩೦ ವರ್ಷದ ಹಳೆಯ ಕಟ್ಟಡ, ಇದು ದುರಸ್ತಿ ಆಗಬೇಕಾಗಿದೆ ಎಂದರು.
MLA H.D. Thammaiah visits Morarjee Residential Schools
Leave a comment